HEALTH TIPS

ಬಳ್ಳಪದವು ಸಂಗೀತ ರೂವಾರಿ ಎಸ್. ಎನ್. ಉಪಾಧ್ಯಾಯ ಅವರಿಗೆ ನುಡಿನಮನ

           ಬದಿಯಡ್ಕ: ಎಸ್.ಎನ್.ಉಪಾಧ್ಯಾಯರು ಒಂದು ಉದಾತ್ತ ಧ್ಯೇಯ ಸಾಧನೆಗಾಗಿ ಶ್ರೀಗಂಧದಂತೆ ತನ್ನ ಬದುಕನ್ನು ತೇದುಕೊಂಡವರು. ಮಾತು, ಸಂಗೀತ, ಮೌನ ಮತ್ತು ಧ್ಯಾನದ ಮಹತ್ವವನ್ನು ಅರಿತಿದ್ದ ಅವರು ಸಂಗೀತದ ಝೇಂಕಾರದ ಮೂಲಕವೇ ವೈಯಕ್ತಿಕ ಬೆಳವಣಿಗೆ ಮತ್ತು ನಾಡಿನ ಬೆಳವಣಿಗೆಯನ್ನು ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು. ನಾರಾಯಣೀಯಮ್ ಇಷ್ಟೊಂದು ಬೆಳವಣಿಗೆ ಸಾಧಿಸಿದ್ದರೆ ಅದರ ಹಿಂದಿನ ಚಾಲಕಶಕ್ತಿ ಶಂಕರನಾರಾಯಣ ಉಪಾಧ್ಯಾಯರು ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
      ಮಾವಿನಕಟ್ಟೆಯ ಬಳ್ಳಪದವಿನಲ್ಲಿರುವ ಸಂಗೀತ ಪಾಠಶಾಲೆ ನಾರಾಯಣೀಯಮ್ ಗೆ ಭೂದಾನ ಮಾಡಿ ಅದರ ಹುಟ್ಟಿಗೆ ಕಾರಣಕರ್ತರಾದ ಬಳ್ಳಪದವು ಶಂಕರನಾರಾಯಣ ಉಪಾಧ್ಯಾಯರ ನೆನಪಿನಲ್ಲಿ ಸೋಮವಾರ ನಡೆದ ಸಂಸ್ಮರಣ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು.
     ನೂರಾರು ಮಂದಿ ಅಭಿಮಾನಿಗಳ ಮತ್ತು ಸಂಗೀತಪ್ರೇಮಿಗಳ ಸಮ್ಮುಖದಲ್ಲಿ ನಾರಾಯಣೀಯಮ್ ಸಮುಚ್ಚಯದಲ್ಲಿ ಸೋಮವಾರ ಎಸ್.ಎನ್. ಉಪಾಧ್ಯಾಯರ ನುಡಿನಮನ ಕಾರ್ಯಕ್ರಮ ಏರ್ಪಟ್ಟಿತು.
     ಶಂಕರನಾರಾಯಣ ಉಪಾಧ್ಯಾಯರು ವೇದಶಾಸ್ತ್ರದಲ್ಲಿ ಪಾರಂಗತರಾಗಿದ್ದು, ಸಂಗೀತದಲ್ಲಿಯೂ ಆಸಕ್ತರಾಗಿದ್ದುದರಿಂದ ತನ್ನ ಸ್ವಂತ ಭೂಮಿಯನ್ನು ಸಂಗೀತದ ಉದ್ದೇಶಕ್ಕಾಗಿ ದಾನ ಮಾಡಿದರು. ಅದರಿಂದಾಗಿ ಇವತ್ತು ಸಾವಿರಾರು ವಿದ್ಯಾರ್ಥಿಗಳು ಸಂಗೀತ ಕಲಿಯುವಂತಾಗಿದೆ ಎಂದು ರಾಜಾರಾಮ ಪೆರ್ಲ ಹೇಳಿದರು.
     ಭೂದಾನ ಮತ್ತು ಗೋದಾನ ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು. ಮರಣದ ಮೊದಲೇ ಭೂದಾನ ಮಾಡಿದ ಎಸ್. ಎನ್. ಉಪಾಧ್ಯಾಯರು ನೇರವಾಗಿ ಮೋಕ್ಷ ಸಂಪಾದನೆಯ ಅರ್ಹತೆ ಗಳಿಸಿಕೊಂಡಿದ್ದಾರೆ ಎಂದು ಪಳ್ಳತ್ತಡ್ಕದ ಘನಪಾಠಿ ಪುರೋಹಿತ ಶಂಕರನಾರಾಯಣ ಭಟ್ ಹೇಳಿದರು.
     ಎಸ್. ಎನ್. ಉಪಾಧ್ಯಾಯರು ಓರ್ವ ಉದಾತ್ತ ಚರಿತರು. ನಾರಾಯಣೀಯಮ್ ಮೂಲಕ ದೈವೀಕ ಕಲೆಯಾದ ಸಂಗೀತವನ್ನು ನಾಡಿಗೆ ಅರ್ಪಿಸಿದ್ದಾರೆ ಎಂದು ಪೆರ್ಲದ ಅಧ್ಯಾಪಕ ಮಾಧವನ್ ನಂಬೂದಿರಿ ಕೈದಾಪುರಮ್ ಹೇಳಿದರು. ನಾರಾಯಣೀಯಮ್ ಸಂಗೀತಶಾಲೆಯ ಸಂಚಾಲಕರಾದ ಬಳ್ಳಪದವು ಯೋಗೀಶ ಶರ್ಮ ಅವರು ನುಡಿನಮನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಅಗಲ್ಪಾಡಿ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಭಟ್ ಉಪ್ಪಂಗಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆರೆದಿದ್ದ ಗಣ್ಯರು ಎಸ್. ಎನ್. ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries