ಬದಿಯಡ್ಕ: ನೀರ್ಚಾಲು ಶ್ರೀ ವಿಘ್ನೇಶ್ವರ ಕಲಾಸಂಘದ ವತಿಯಿಂದ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ `ಶಲ್ಯ ಸಾರಥ್ಯ-ನಿರ್ಗಮನ' ಎಂಬ ಕಥಾಭಾಗದ ಮಳೆಗಾಲದ ಮಹೋನ್ನತ ಯಕ್ಷಗಾನ ತಾಳಮದ್ದಳೆ ಜರಗಿತು.
ಮಹಾಜನ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಜಯದೇವ ಖಂಡಿಗೆ ದೀಪಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿಮ್ಮೇಳದಲ್ಲಿ ಪ್ರಸಿದ್ಧ ಕಲಾವಿದರುಗಳಾದ ಪುತ್ತಿಗೆ ರಘುರಾಮ ಹೊಳ್ಳ, ತಲ್ಪಣಾಜೆ ವೆಂಕಟ್ರಮಣ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಅಡೂರು ಲಕ್ಷ್ಮೀನಾರಾಯಣ ರಾವ್ ಮತ್ತು ಮುಮ್ಮೇಳದಲ್ಲಿ ಶಂಭುಶರ್ಮ ವಿಟ್ಲ(ಕರ್ಣ), ರಾಧಾಕೃಷ್ಣ ಕಲ್ಚಾರ್(ಶಲ್ಯ), ಪೆರ್ಮುದೆ ಜಯಪ್ರಕಾಶ್ ಶೆಟ್ಟಿ(ಕೌರವ), ಪಕಳಕುಂಜ ಶ್ಯಾಂಭಟ್(ಅರ್ಜುನ), ಹರೀಶ ಬಳಂತಿಮೊಗರು(ಕೃಷ್ಣ), ಬಾಲಕೃಷ್ಣ ಆಚಾರ್ಯ ನೀರ್ಚಾಲು(ಸರ್ಪಾಸ್ತ್ರ) ಪಾಲ್ಗೊಂಡರು. ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಯಕ್ಷಾಭಿಮಾನಿಗಳು ಕಲಾಸ್ವಾಧನೆ ಮಾಡಿದರು.