ಪೆರ್ಲ: ವರ್ತಮಾನದ ಗೊಂದಲ, ಅಶಾಂತಿ ಮೊದಲದ ಸಂಕೀರ್ಣತೆಯನ್ನು ಸುಲಲಿತವಾಗಿ ನಿವಾರಿಸಲು ಆಧ್ಯಾತ್ಮಿಕ ನೆಲೆಗಟ್ಟಿನ ಪುನರವಲೋಕನದ ಅಗತ್ಯ ಇಂದು ಇದೆ. ಪುರಾಣ ಕಥಾನಕಗಳ ಮರು ಓದು ಆತ್ಮ ವಿಮರ್ಶೆಯ ಜೊತೆಗೆ ಸವಾಲುಗಳನ್ನು ಈಜಿ ಡ ಬಸೇರಲು ನೆರವಾಗುತ್ತದೆ.ಈ ನಿಟ್ಟಿನಲ್ಲಿ ರಾಮಾಯಣದಂತಹ ಕಥಾನಕಗಳನ್ನು ಇಂದಿನ ಕಾಲಮಾನಕ್ಕೆ ಅನುಸರಿಸಿ ಓದುವುದು ಯುವ ತಲೆಮಾರಿನ ಭೌದ್ದಿಕ ಬೆಳವಣಿಗೆಗೆ ಪೂರಕವಾಗುವುದು ಎಂದು ಖ್ಯಾತ ನೃತ್ಯ ಶಿಕ್ಷಕಿ, ಸಾಹಿತಿ ವಿದುಷಿಃ ಅನುಪಮಾ ರಾಘವೇಂದ್ರ ಉಡುಪಮೂಲೆ ಅವರು ತಿಳಿಸಿದರು.
ಪೆರ್ಲದ ಸಾಹಿತ್ಯ, ಸಾಂಸ್ಕøತಿಕ, ಸಾಮಾಜಿಕ ಸಂಸ್ಥೆಯಾದ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ನೇತೃತ್ವದಲ್ಲಿ ಪೆರ್ಲ ಇಡಿಯಡ್ಕದ ಶ್ರೀದುರ್ಗಾಪರಮೇಶ್ವರಿ, ಉಳ್ಳಾಲ್ತಿ ಹಾಗೂ ಶ್ರೀವಿಷ್ಣುಮೂರ್ತಿ ದೇವಾಲಯದ ಸಭಾ ಭವನದಲ್ಲಿ ಇತ್ತೀಚೆಗೆ ಆಯೋಜಿಸಲಾದ ಕರ್ಕಟಕ ಮಾಸ ಪ್ರಯುಕ್ತವಾದ "ಅಕ್ಷರದ ಆಟಿ ಅಟ್ಟಣೆ" ವಿಶೇಷ ಸಾಹಿತ್ಯ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಮಹಾಕಾವ್ಯ ರಾಮಾಯಣ ಆಧಾರಿತ ಕಥೆ, ಕವಿತೆಗಳ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊಸ ತಲೆಮಾರು ಆಧುನಿಕ ಶೈಲಿಯ ಬರಹ-ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರೂ, ಪರಂಪರೆಯ ಒಳನೋಟಗಳ ಬಗ್ಗೆ ಗಮನ ಹರಿಸಿದಾಗ ಸುಂದರ ಬರಹಗಳು ಗಟ್ಟಿತನದೊಂದಿಗೆ ರೂಪುಗೊಳ್ಳಬಲ್ಲದು ಎಂದು ಅವರು ತಿಳಿಸಿದರು. ಕರ್ಕಟಕ ಮಾಸಾಚರಣೆಯ ಹಿನ್ನೆಲೆಯಲ್ಲಿ ಇಂತಹ ಸಾಹಿತ್ತಿಕ ಕಾರ್ಯಕ್ರಮ ಆಯೋಜಿಸಿರುವುದು ಸ್ತುತ್ಯರ್ಹವಾದುದು ಎಂದ ಅವರು ರಾಮಾಯಣದೊಳಗಿನ ಕಥಾ ಪಾತ್ರಗಳ ನಿರೂಪಣೆಗಳ ಮೂಲಕ ಯುವ ಬರಹಗಾರರ ಚಿಂತನೆಗಳು ಭರವಸೆ ಮೂಡಿಸಿವೆ ಎಂದರು.
ಮಂಗಳೂರಿನ ಹಿರಿಯ ಸಾಹಿತಿ ಎನ್.ಸುಬ್ರಾಯ ಭಟ್ ಕಥೆ-ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿ ಗಡಿನಾಡು ಕಾಸರಗೋಡಿನ ಕನ್ನಡ ಭಾಷಾ ಪ್ರೇಮವನ್ನು ಬಲಗೊಳಿಸುವಲ್ಲಿ ಇಂತಹ ಸಾಹಿತ್ತಿಕ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು.
ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿದ್ದು ಮಾತನಾಡಿದರು. ಕಥೆ-ಕವಿಗೋಷ್ಠಿಯಲ್ಲಿ ಜ್ಯೋಸ್ನ್ಸಾ ಎಂ.ಕಡಂದೇಲು, ಪ್ರಭಾವತಿ ಕೆದಿಲಾಯ ಪುಂಡೂರು, ಅಶ್ವಿನಿ ಕೋಡಿಬೈಲು, ಗೋಪಾಲಕೃಷ್ಣ ಬಿ, ರಾಮಾ ವೈ ಏದಾರು, ಶ್ವೇತಾ ಕಜೆ., ಸತ್ಯವತಿ ಕೊಳಚಪ್ಪು, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್., ನರಸಿಂಹ ಭಟ್ ಏತಡ್ಕ, ರಿತೇಶ್ ಕಿರಣ್ ಕಾಟುಕುಕ್ಕೆ, ಉದಯರವಿ ಕೊಂಬ್ರಾಜೆ, ಹರೀಶ್ ಪೆರ್ಲ, ಚೇತನಾ ಕುಂಬಳೆ, ನಿರ್ಮಲಾ ಸೇಷಪ್ಪ ಖಂಡಿಗೆ, ಪುರುಷೋತ್ತಮ ಭಟ್.ಕೆ., ಅಕ್ಷತಾ ಭಟ್ ಪುದುಕೋಳಿ, ಉಮಾ ಶಂಕರಿ ಎ.ಪಿ., ಅಭಿಲಾಷ್ ಪೆರ್ಲ, ಚಿತ್ತರಂಜನ್ ಕಡಂದೇಲು ರಾಮಾಯಣ ಕಥಾನಕವನ್ನು ಆಧರಿಸಿದ ಸೃಜನಾತ್ಮಕ ಸ್ವರಚಿತ ಕಥೆ, ಕಚವಿತೆಗಳನ್ನು ವಾಚಿಸಿದರು. ಆನಂದ ರೈ ಅಡ್ಕಸ್ಥಳ ನಿರ್ವಹಿಸಿದರು. ಸುಭಾಷ್ ಪೆರ್ಲ, ವಸಂತ ಬಾರಡ್ಕ ಮೊದಲಾದವರು ಸಹಕರಿಸಿದರು.




