ಬದಿಯಡ್ಕ: ನರೇಂದ್ರಮೋದಿಯವರ ಅಭಿವೃದ್ಧಿಯ ಕನಸು ಜನಮೆಚ್ಚುಗೆಯನ್ನು ಪಡೆದು ಪಕ್ಷಾತೀತವಾದ ಬೆಂಬಲದೊಂದಿಗೆ ನನನಸಾಗುವತ್ತ ಸಾಗುತ್ತಿದೆ. ಭಾರತವನ್ನು ಸೂಪರ್ ಪವರ್ ರಾಷ್ಟ್ರವನ್ನಾಗಿ ಬದಲಾಯಿಸಲು ಬಡಕುಟುಂಬದಲ್ಲಿ ಹುಟ್ಟಿ ಬೆಳೆದ ಮೋದಿಯವರು ಕೈಗೊಂಡ ಕಾರ್ಯಗಳು ವಿಶ್ವದಲ್ಲಿ ಮೆಚ್ಚುಗೆಯನ್ನು ಪಡೆದಿದೆ. ಮೋದಿಯವರ ಮುಂದೆ ಅಸಾಧ್ಯವೆಂಬ ಶಬ್ದವೇ ಇಲ್ಲ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದರು.
ನರೇಂದ್ರಮೋದಿಯವರ 69ನೇ ಜನ್ಮದಿನಾಚರಣೆಯ ಅಂಗವಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನೀರ್ಚಾಲು ಸಮೀಪದ ಕನ್ನೆಪ್ಪಾಡಿ ಆಶ್ರಯದಲ್ಲಿ ನಡೆದ `ಸೇವಾಸಪ್ತಾಹ' ಒಂದುವಾರಗಳ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ತನ್ನ ಜೀವನವನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿದ ನಮ್ಮ ನೆಚ್ಚಿನ ಪ್ರಧಾನಿಯವರು ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆಯನ್ನು ಹೊಂದಿದ ಧೀಮಂತ ನಾಯಕರಾಗಿದ್ದಾರೆ. ಲೋಕರಾಷ್ಟ್ರಗಳು ನರೇಂದ್ರಮೋದಿಯವರ ಆಡಳಿತವನ್ನು ಅನುಸರಿಸಲು ಉತ್ಸುಕರಾಗಿದ್ದಾರೆ. ಭಾರತದಲ್ಲಿ ಬದಲಾವಣೆಯನ್ನು ತಂದ ಅವರು ವಿಶ್ವಕ್ಕೇ ಮಾದರಿಯಾಗಿದ್ದಾರೆ. ಭಯೋತ್ಪಾದನೆಯನ್ನು ಬೇರುಸಮೇತ ಕಿತ್ತುಹಾಕುವಲ್ಲಿ ಮುಂದಡಿಯಿಟ್ಟ ನರೇಂದ್ರಮೋದಿ ಆಡಳಿತದಿಂದಾಗಿ ಪಾಕಿಸ್ತಾನ ನಮಗೆ ಬೇಡ ಭಾರತ ನಮಗೆ ಸಾಕು ಎಂಬ ಕೂಗು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೇಳಿಬರುತ್ತಿದೆ ಎಂದು ಅವರು ತಿಳಿಸಿದರು. ಇದೇ ವೇಳೆ ಆಶ್ರಮವಾಸಿಗಳಿಗೆ ಉಡುಗೊರೆಗಳನ್ನು ನೀಡಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ರಾಷ್ಟ್ರದ ಪ್ರತಿಯೊಬ್ಬ ಜನತೆಯ ಮನಸ್ಸು ಸ್ವಚ್ಛತೆಯೆಡೆಗೆ ಸಾಗಬೇಕು ಎಂಬ ಧ್ಯೇಯವನ್ನು ಮುಂದಿಟ್ಟುಕೊಂಡು ನಮ್ಮ ಪ್ರಧಾನಿಯವರು ವಿಶ್ವದಲ್ಲಿ ರಾಷ್ಟ್ರವನ್ನು ಎತ್ತಿಹಿಡಿಯುವಲ್ಲಿ ಸಫಲರಾಗಿದ್ದಾರೆ ಎಂದರು.
ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಎಂ.ಸುಧಾಮ ಗೋಸಾಡ, ಜಿಲ್ಲಾ ಉಪಾಧ್ಯಕ್ಷ ನೆಂಜಿಲ್ ಕುಂಞÂ್ಞರಾಮನ್, ಜಿಲ್ಲಾ ಸಮಿತಿ ಕಾರ್ಯದರ್ಶಿ, ಆಶ್ರಯದ ಟ್ರಸ್ಟಿ ಸವಿತಾ ಟೀಚರ್, ಜಿಲ್ಲಾ ಉಪಾಧ್ಯಕ್ಷ ರಾಮಪ್ಪ ಮಂಜೇಶ್ವರ, ಪಕ್ಷದ ನೇತಾರ ಕೃಷ್ಣ ಮಣಿಯಾಣಿ ಮೊಳೆಯಾರು, ಆಶ್ರಯದ ಟ್ರಸ್ಟಿ ಗಣೇಶ ಕೃಷ್ಣ ಅಳಕ್ಕೆ, ಸೇವಾ ಪ್ರಮುಖ್ ರಮೇಶ್ ಹಾಗೂ ಆಶ್ರಯದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬಿಜೆಪಿ ಪಂಚಾಯಿತಿ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಶಂಕರ ಸ್ವಾಗತಿಸಿ, ಆಶ್ರಯದ ಟ್ರಸ್ಟಿ ಶ್ರೀಕೃಷ್ಣ ಭಟ್ ಪುದುಕೋಳಿ ವಂದಿಸಿದರು. ಮಧ್ಯಾಹ್ನ ಆಶ್ರಮದಲ್ಲಿ ಭೋಜನಕೂಟವನ್ನು ಏರ್ಪಡಿಸಲಾಗಿತ್ತು.



