ಪೆರ್ಲ:ಅನ್ನದಾನ ಮಹಾದಾನ.ಹಸಿದವನ ಹಸಿವು ನಿವಾರಿಸುವುದು ಬಹಳ ಪುಣ್ಯದ ಕೆಲಸ.ಗೊಬ್ಬರ ನೀರು ಉಣಿಸಿದ ವೃಕ್ಷಗಳು ಸವಿಫಲ ನೀಡುವಂತೆ ಅನ್ನದಾನದಿಂದ ಪುಣ್ಯ ಫಲ ಲಭಿಸುವುದು ಎಂದು ಎಡನೀರು ಮಠದ ಶ್ರೀ ಕೇಶವಾನಂದಭಾರತೀ ಶ್ರೀಪಾದಂಗಳವರು ಹೇಳಿದರು.
ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದ ಬಡಗು ಪಾಶ್ರ್ವದಲ್ಲಿ ನಿರ್ಮಾಣಗೊಂಡ ನೂತನ ಭೋಜನ ಶಾಲೆ, ಪಾಕ ಶಾಲೆಯನ್ನು ಬುಧವಾರ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿ ಪುಣ್ಯ ಪ್ರಸಿದ್ಧ ಕಾಟುಕುಕ್ಕೆ ದೇವಸ್ಥಾನದಲ್ಲಿ ಮಹತ್ತರವಾದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಾ ಬಂದಿದೆ.ಶ್ರೀ ದೇವರ ಸನ್ನಿಧಿ, ಪ್ರಶಾಂತ ಸುಂದರ ವಾತಾವರಣದಲ್ಲಿ ಅನ್ನ ಪ್ರಸಾದ ಸ್ವೀಕರಿಸುವುದು ಆನಂದದ ವಿಷಯವೇ ಸರಿ. ಭಕ್ತಾದಿಗಳು ಸಂತೋಷದಿಂದ ಆಹಾರ ಸ್ವೀಕರಿಸುವಂತಾಗಲು ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ಬಹಳ ಸುಂದರ ಭೋಜನ ಶಾಲೆಯ ನಿರ್ಮಾಣವಾಗಿದೆ.ಮಲಬಾರ್ ದೇವಸ್ವಂ ಬೋರ್ಡ್, ಆಡಳಿತ ಸಮಿತಿ, ನಿರ್ಮಾಣ ಸಮಿತಿ, ಭಕ್ತಾದಿಗಳ ಸಹಕಾರದಲ್ಲಿ ಕೇವಲ 7ತಿಂಗಳಲ್ಲಿ ಅದ್ಭುತ ಭೋಜನ ಶಾಲೆ ಹಾಗೂ ಪಾಕ ಶಾಲೆ ನಿರ್ಮಾಣವಾಗಿರುವುದು ಶ್ರೀ ದೇವರ ಕೃಪೆ ಹಾಗೂ ಸಾನಿಧ್ಯದ ಪ್ರತೀಕ ಎಂದರು.
ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ನೀಲೇಶ್ವರ ಉಚ್ವಿಲತ್ತಾಯ ಪದ್ಮನಾಭ ತಂತ್ರಿ ಅವರು ಅನುಗ್ರಹ ನೀಡಿ ಮಾತನಾಡಿ, ಪ್ರಯತ್ನವೇ ಧರ್ಮ.ನಿರಂತರ ಜೀವನದಿಂದ ಜೀವನ ಸಾಕ್ಷಾತ್ಕಾರವಾಗುವುದು. ಜೀವನದಲ್ಲಿ ಮುಂದೆ ಹೋಗಬೇಕಾದಲ್ಲಿ ನಿರಂತರ ಪ್ರಯತ್ನ ಹಾಗೂ ಶ್ರಮ ವಹಿಸಬೇಕು.ಸತ್ಯ ಹಾಗೂ ಶುದ್ಧ ಕಾಯಕ ನಮ್ಮದಾದಲ್ಲಿ ಯೋಗ್ಯ ಫಲ ಲಭಿಸುವುದು. ವ್ಯಕ್ತಿತ್ವಗಳ ಛಲ ಪರಿಶ್ರಮದ ಫಲವಾಗಿ ದೇವಳದಲ್ಲಿ ನೂತನ ಭೋಜನ ಶಾಲೆ, ಪಾಕಶಾಲೆಗಳು ಇಂದು ಲೋಕಾರ್ಪಣೆ ಗೊಂಡಿದೆ.ದೇಶದ ತುರ್ತು ಪರಿಸ್ಥಿತಿ ಸಂದರ್ಭ, 1979ರಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದ ಜೀರ್ಣೋದ್ಧಾರ, ಪುನರ್ ಪ್ರತಿಷ್ಠೆ, ಅಷ್ಟ ಬಂಧ ಬ್ರಹ್ಮಕಲಶೋತ್ಸವಗಳು ನಡೆಯುವುದರೊಂದಿಗೆ ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿ, ಊರ ಪರವೂರ ಭಕ್ತರ ಸಹಕಾರದಿಂದ ನಾನಾ ಅಭಿವೃದ್ಧಿ ಕಾರ್ಯಗಳನ್ನು ಆಡಳಿತ ಮಂಡಳಿ ಕೈಗೆತ್ತಿಕೊಂಡು ದೇವಸ್ಥಾನದ ಮೂಡು ಭಾಗದಲ್ಲಿ ರಾಜ ಗೋಪುರ ನಿರ್ಮಾಣಗೊಂಡು 2012ರಲ್ಲಿ ಲೋಕಾರ್ಪಣೆಗೊಂಡಿದೆ.ಪ್ರಯತ್ನವೇ ಶಿಕ್ಷಣ.ಕೇವಲ ಶಿಕ್ಷಣದಿಂದ ವಿದ್ಯಾಭ್ಯಾಸ ಪೂರ್ಣವಾಗುವುದಿಲ್ಲ. ಕಲಿತ ಶಿಕ್ಷಣವನ್ನು ಜೀವನದಲ್ಲಿ ಅಳವಡಿಸಿದರೆ ಮಾತ್ರ ವಿದ್ಯಾಭ್ಯಾಸ ಪರಿಪೂರ್ಣವಾಗುವುದು.ಕಲೆಗಳು ಜೀವನದ ಆಧಾರ. ದೇವಾಲಯಗಳು 64 ಕ್ಷೇತ್ರ ಕಲೆಗಳನ್ನು ಪರಿ ಪೆÇೀಷಿಸುವ ಪುಣ್ಯ ನೆಲ.ದೇವಾಲಯಗಳು ನಮ್ಮಲ್ಲಿನ ಕಲೆಗಳನ್ನು ಉದ್ಧೀಪನ ಗೊಳಿಸಿ, ನಮ್ಮಲ್ಲಿ ಶಕ್ತಿ, ಜ್ಞಾನ ತುಂಬುವ ಕೇಂದ್ರ.ದೇವಸ್ಥಾನದ ವ್ಯವಸ್ಥೆಯೊಂದಿಗೆ ನಮ್ಮನ್ನು ಅಳವಡಿಸಿದಲ್ಲಿ ನಮ್ಮಲ್ಲಿನ ವ್ಯಕ್ತಿತ್ವ ಬೆಳವಣಿಗೆ ಹೊಂದಲು ಪೂರಕ ವಾತಾವರಣ ಸೃಷ್ಟಿಯಾಗುವುದು. ನಿರಂತರ ಪ್ರಯತ್ನಗಳಿಂದ ಯಶಸ್ಸು ನಮ್ಮದಾಗುವುದು. ರಾಜಕೀಯ ಜೀವನದ ಅವಿಭಾಜ್ಯ ಅಂಗ.ಎಲ್ಲಾ ಕ್ಷೇತ್ರ, ವಿಭಾಗಳಲ್ಲೂ ರಾಜಕೀಯ ಹಿಂದೆಯೂ ನುಸುಳಿತ್ತು, ಮುಂದೆಯೂ ನುಸುಳುವುದು.ರಾಜಕೀಯದಲ್ಲಿ ಧರ್ಮವನ್ನು ನೋಡಿ ಕರ್ತವ್ಯ ನಿಭಾಯಿಸಿದಾಗ ಹಿತ ಫಲ ಲಭಿಸುವುದು.ಶ್ರೀ ದೇವಳದಲ್ಲಿ ನಿರಂತರ ಅನ್ನದಾನಗಳು ನಡೆದು ಸರ್ವತೋಮುಖ ಅಭಿವೃದ್ಧಿ ಕಾಣಲಿ ಎಂದರು.
ಧಾರ್ಮಿಕ ಮುಂದಾಳು, ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದ ಮೊಕ್ತೇಸರ ವಸಂತ ಪೈ ಮಾತನಾಡಿ, ತುಳುನಾಡು ಧಾರ್ಮಿಕತೆಗೆ ಪ್ರಸಿದ್ಧಿ ಪಡೆದ ಪುಣ್ಯ ಭೂಮಿ.ಇಲ್ಲಿ ದಿನ ನಿತ್ಯ ಒಂದಲ್ಲಾ ಒಂದು ಆಚರಣೆಗಳು ನಡೆಯುತ್ತಲೇ ಇರುತ್ತವೆ.ಭಗವಂತನ ಸಾನಿಧ್ಯದಲ್ಲಿ ಫಲಾಪೇಕ್ಷೆ ಸಲ್ಲದು.ನಿನ್ನನ್ನು ಅರಿಯುವ ಜ್ಞಾನವನ್ನು ದಯಪಾಲಿಸು ಎಂದಷ್ಟೇ ಬೇಡಬೇಕು.ಪ್ರಯತ್ನ, ಬುದ್ಧಿವಂತಿಕೆಯೊಂದಿಗೆ ಭಗವಂತನ ಅನುಗ್ರಹವೂ ದೊರೆತಲ್ಲಿ ಮಾತ್ರ ಸಿದ್ಧಿ ನಮ್ಮದಾಗುವುದು.ಜೀವನದಲ್ಲಿ ಸತ್ಯ ಧರ್ಮ, ಪ್ರಾಮಾಣಿಕತೆ ಅಳವಡಿಸಿದಲ್ಲಿ ಜೀವನ ಪರಮ ಪಾವನವಾಗುವುದು ಎಂದರು.
ಪಾಕಶಾಲೆ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಯೆಣ್ಮಕಜೆ ಮಾತನಾಡಿ, ಶುದ್ಧ ಮನಸ್ಸು, ಶ್ರದ್ಧೆ, ಶಕ್ತಿ ಸಾಮಥ್ರ್ಯಗಳು ಇದ್ದಲ್ಲಿ ಮಹತ್ಕಾರ್ಯಗಳು ನಡೆಯುವುದು.ದೇವಳದ ಆಡಳಿತ ಸಮಿತಿ, ನಿರ್ಮಾಣ ಸಮಿತಿಗಳ ನಿರಂತರ ಶ್ರಮದಿಂದ ನೂತನ ಭೋಜನ ಶಾಲೆ, ಪಾಕಶಾಲೆಗಳ ನಿರ್ಮಾಣ ಅತಿ ಶೀಘ್ರ ಪೂರ್ತಿಯಾಗಿದೆ ಎಂದರು.
ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಓ.ಕೆ.ವಾಸು, ಸಾರ್ವಜನಿಕ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಕೊಟ್ರ ವಾಸುದೇವನ್, ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ವಿದ್ಯಾವರ್ಧಕ ಸಂಘ ಅಧ್ಯಕ್ಷ ಸಿ.ಸಂಜೀವ ರೈ ಮಾತನಾಡಿದರು.
ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣನ್ ಕಾಟುಕುಕ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಊರ ಪರವೂರ ಭಕ್ತರ ಸತತ ಪರಿಶ್ರಮದಿಂದ ಕೇವಲ 7ತಿಂಗಳಲ್ಲಿ ಸುವ್ಯವಸ್ಥಿತ ಭೋಜನ ಶಾಲೆ, ಪಾಕಶಾಲೆಗಳು ನಿರ್ಮಾಣವಾಗಿದೆ.ದೇವಾಲಯದ ಭೂಮಿಯಲ್ಲಿ ಕೃಷಿ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ.ಸಿಸಿ ಕ್ಯಾಮೆರಾ ವ್ಯವಸ್ಥೆ ಅಳವಡಿಸಲಾಗಿದೆ.ದೇವಳದಲ್ಲಿ ಸುವ್ಯವಸ್ಥಿತ ಕಲ್ಯಾಣ ಮಂಟಪದ ಕೊರತೆ ಎದ್ದು ಕಾಣುತ್ತಿದ್ದು ದೇವಸ್ವಂ ಬೋರ್ಡ್ ಪದಾಧಿಕಾರಿಗಳು ಸರಕಾರದ ಗಮನಕ್ಕೆ ತಂದು ಕಲ್ಯಾಣ ಮಂಟಪ ನಿರ್ಮಾಣವನ್ನು ಕಾರ್ಯರೂಪಕ್ಕೆ ತರಬೇಕು ಎಂದು ವಿನಂತಿಸಿದರು.
ನಿರ್ಮಾಣ ಸಮಿತಿ ಅಧ್ಯಕ್ಷ ಮಿತ್ತೂರು ಪುರುಷೋತ್ತಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಳದ ಮೊಕ್ತೇಸರ ಆನೆಮಜಲು ವಿಷ್ಣುಭಟ್ ಉಪಸ್ಥಿತರಿದ್ದರು.
ದೇವಳದ ಪ್ರಧಾನ ಅರ್ಚಕ ನಾರಾಯಣ ಮಯ್ಯ, ಕಟ್ಟಡ ಸಮಿತಿ ಉಸ್ತುವಾರಿ ಎಂಜಿನಿಯರ್ ಸುನಿಲ್ ಕುಮಾರ್ ರೈ ಕೆಂಗಣಾಜೆ ಅವರನ್ನು ಸನ್ಮಾನಿಸಲಾಯಿತು.ದೇವಳದಲ್ಲಿ ಶ್ರಮದಾನ, ಇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಕಾರ್ಯಕರ್ತರಿಗೆ ಸನ್ಮಾನ ಪತ್ರ ವಿತರಿಸಿ ಗೌರವಿಸಲಾಯಿತು.
ಕಾಟುಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಕಾಟುಕುಕ್ಕೆ ಕ್ಷೇತ್ರದ ಮಹಿಮೆಯನ್ನು ಬಣ್ಣಿಸಿ 'ಶಿವಪಡ್ರೆ' ರಚಿಸಿದ ಸ್ವಾಗತ ಗೀತೆಯನ್ನು ಪ್ಲಸ್ ವನ್ ವಿದ್ಯಾರ್ಥಿನಿ ಮಂಜುಷಾ ಹಾಡಿದರು. ದೇವಳದ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಭಂಡಾರದ ಮನೆ ಸ್ವಾಗತಿಸಿದರು.ಆಡಳಿತ ಸಮಿತಿ ಟ್ರಸ್ಟೀ ಸುಬ್ರಹ್ಮಣ್ಯ ಭಟ್ ಕೋಡುಮಾಡು ವಂದಿಸಿದರು.



