ತಿರುವನಂತಪುರ: ವರ್ಷದ ಕೊನೆಯಲ್ಲಿ, ಅದೂ 9 ವರ್ಷಗಳ ಬಳಿಕ, ಸಂಭವಿಸುತ್ತಿರುವ ಅಪರೂಪದ, ಬಾನಂಗಣದ ಚಮತ್ಕಾರದ ನೆರಳು, ಬೆಳಕಿನ ಕಂಕಣ ಸೂರ್ಯಗ್ರಹಣವನ್ನು ನಾಡಿನ ಜನರು ಕಣ್ತುಂಬಿಕೊಂಡರು.
ಬೆಳಗ್ಗೆ 8.04ರಿಂದ ಸೂರ್ಯಗ್ರಹಣ ಆರಂಭವಾಗಿದೆ. ರಾಜ್ಯದೆಲ್ಲೆಡೆ ಕಂಕಣ ಸೂರ್ಯಗ್ರಹಣ ಗೋಚರವಾಗಿದ್ದರೂ ಕೆಲವು ಕಡೆ ಮೋಡ ಮುಸುಕಿದ ವಾತಾವರಣದ ಕಾರಣ ಸೂರ್ಯಗ್ರಹಣ ಅಸ್ಪಷ್ಟವಾಗಿ ಗೋಚರವಾಗಿದೆ.
ಕಾಸರಗೋಡು, ತಿರುವಂತಪುರ, ಕೊಲ್ಲಂ, ಕಣ್ಣೂರು ಮೊದಲಾದೆಡೆ ಕಂಕಣ ಸೂರ್ಯ ಗ್ರಹಣ ಗೋಚರವಾಗಿದೆ. ಆದರೆ ದಕ್ಷಿಣ ಕೇರಳದಲ್ಲಿ ಉತ್ತರ ಕೇರಳ(ಮಲಬಾರ್) ನಷ್ಟು ಪ್ರಮಾಣದಲ್ಲಿ ಗೋಚರಿಸಿಲ್ಲ. ಚೆರ್ವತ್ತೂರಲ್ಲಿ ಗ್ರಹಣ ದರ್ಶನದ ಮೊದಲ ಅವಕಾಶ ಈ ಬಾರಿಯ ವಿಶೇಷತೆಯಾದ್ದರಿಂದ ಸಾವಿರಕ್ಕಿಂತಲೂ ಮಿಕ್ಕಿದ ಜನರು, ವಿದೇಶಿಯರ ಸಹಿತ ಕಣ್ತುಂಬಿಕೊಂಡರು.
ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಕಂಕಣ ಗ್ರಹಣ ವೀಕ್ಷಣೆ ಮಾಡಲು ಜನರು ಆಗಮಿಸಿದ್ದರು. ಸೌರ ಕನ್ನಡಿ ಮೂಲಕ ಗ್ರಹಣ ವೀಕ್ಷಣೆ ಮಾಡಿದರು. ಆದರೆ ಮೋಡ ಕವಿದ ವಾತಾವರಣ ಹಿನ್ನೆಲೆ ಕಂಕಣ ಸೂರ್ಯ ಗ್ರಹಣ ಅಷ್ಟಾಗಿ ಗೋಚರವಾಗಲಿಲ್ಲ. ಇನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಗ್ರಹಣ ಗೋಚರವಾಗಿದೆ. ಇತ್ತ ಉಡುಪಿಯಲ್ಲಿ ಶೇ. 93.2ರಷ್ಟು ಸೂರ್ಯ ಗ್ರಹಣ ಗೋಚರವಾಗಿದ್ದು, ರಾಜ್ಯದ ಅತೀ ಹೆಚ್ವು ಗ್ರಹಣಗೋಚರ ಸ್ಥಳಗಳಲ್ಲಿ ಉಡುಪಿಯೂ ಒಂದಾಗಿದೆ. ಜಿಲ್ಲೆಯಲ್ಲಿ 9.24 ನಿಮಿಷಕ್ಕೆ ಸಂಪೂರ್ಣ ಗ್ರಹಣ ಗೋಚರವಾಗಿದೆ.
ಬೆಳಗ್ಗೆ 8 ಗಂಟೆ 4 ನಿಮಿಷಕ್ಕೆ ಗ್ರಹಣ ಆರಂಭವಾಗಿದೆ. ಬೆಳಗ್ಗೆ 9 ಗಂಟೆ 25 ನಿಮಿಷಕ್ಕೆ ಗ್ರಹಣದ ಮಧ್ಯ ಕಾಲವಿದ್ದು, ಸಂಪೂರ್ಣ ಸೂರ್ಯ ಗ್ರಹಣ ಗೋಚರಿಸಿತು. ಬೆಳಗ್ಗೆ 11 ಗಂಟೆ 3 ನಿಮಿಷಕ್ಕೆ ಗ್ರಹಣ ಅಂತ್ಯವಾಯಿತು.


