ಮುಳ್ಳೇರಿಯ: ಭಾರತದ ಭವ್ಯವಾದ ನಮ್ಮ ಸಂಸ್ಕøತಿ, ಸಂಪ್ರದಾಯವನ್ನು ಉಳಿಸಿಕೊಳ್ಳಬೇಕು, ಇದು ದೇಶಕ್ಕೆ ಮುಖ್ಯವಾಗಿದೆ. ಆಧುನಿಕತೆಯ ಹೆಸರಲ್ಲಿ ಇಂದಿನ ಯುವಜನತೆ ಅದನ್ನು ಮರೆತುಬಿಡುತ್ತಾರೆ. ಅದಕ್ಕಾಗಿ ಇಂತಹ ಆಚಾರ ಅನುಷ್ಠಾನಗಳು ನಿರಂತರವಾಗಿ ನಡೆಯಬೇಕು ಎಂದು ಕರ್ನಾಟಕ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಅವರು ಪೆರಿಯಾ ಕಲ್ಯೋಟ್ನ ಶ್ರೀ ಭಗವತಿ ಕ್ಷೇತ್ರ ಕಳಗಂನಲ್ಲಿ ನಡೆಯುತ್ತಿರುವ ಪೆರುಂಕಳಿಯಾಟ ಮಹೋತ್ಸವದಂಗವಾಗಿ ಬುಧವಾರ ನಡೆದ ದಕ್ಷಿಣ ಕನ್ನಡ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶವು ಎಲ್ಲಾ ಧರ್ಮಗಳನ್ನು ಹೊಂದಿರುವ ದೇಶ, ಎಲ್ಲ ಧರ್ಮಗಳನ್ನು ನಾವು ಗೌರವಿಸುವ ಮೂಲಕ ಜೊತೆಗೆ ಧರ್ಮವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿದ್ದೇವೆ. ಈ ಕೆಲಸ ನಮ್ಮಿಂದ ನಿರಂತರವಾಗಿ ನಡೆಯಬೇಕು. ಕೇರಳದಲ್ಲಿ ಸಂಸ್ಕøತಿಯನ್ನು ಎತ್ತಿ ಹಿಡಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಅಂತಹ ಆಚಾರ ಅನುಷ್ಠಾನಗಳನ್ನು ಉಳಿಸುವಲ್ಲಿ ಯಾದವ ಸಮುದಾಯದ ಶ್ರಮವು ಇದೆ. ಕಲ್ಯೋಟ್ನಲ್ಲಿ ಸಮುದಾಯದ ನೇತೃತ್ವದಲ್ಲಿ ಸುಮಾರು 717 ವರ್ಷಗಳ ಬಳಿಕ ನಡೆಯುವ ಪೆರುಂಕಳಿಯಾಟ ಮಹೋತ್ಸವ ಉತ್ತಮ ದೇವತಾ ಕಾರ್ಯಕ್ರಮವಾಗಿ ಮೂಡಿಬರಲಿ ಎಂದರು.
ದಕ್ಷಿಣ ಕನ್ನಡ ಸಂಗಮ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಪೆರುಂಕಳಿಯಾಟ ಮಹೋತ್ಸವ ಸಮಿತಿ ಅಧ್ಯಕ್ಷ ಮಧುಸೂದನ್ ಆಯಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಯಾದವ ಸಭಾ ರಾಜ್ಯಾಧ್ಯಕ್ಷ ಶ್ರೀನಿವಾಸ್ ಪ್ರಧಾನ ಭಾಷಣ ಮಾಡಿದರು. ಮಂಗಳೂರು ತಾಲೂಕು ಯಾದವ ಸಭಾ ಅಧ್ಯಕ್ಷ ಸದಾನಂದ ಕಾವೂರು, ಯಾದವ ಸಭಾ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ರಮೇಶ್ ಮುಂತಾದವರು ಮಾತನಾಡಿದರು. ವೇದಿಕೆಯಲ್ಲಿ ಅಖಿಲ ಕೇರಳ ಯಾದವ ಸಭಾ ರಾಜ್ಯಾಧ್ಯಕ್ಷ ವಯಲಪುರಂ ನಾರಾಯಣನ್, ಬಾಬು ಕುನ್ನತ್ತ್ ಮತ್ತಿತರರು ಉಪಸ್ಥಿತರಿದ್ದರು. ಆರಂಭದಲ್ಲಿ ಕೇಳು ಮಾಸ್ತರ್ ಸ್ವಾಗತಿಸಿ, ಚಂದ್ರನ್ ಕಲ್ಯೋಟ್ ವಂದಿಸಿದರು. ರಾಜೇಶ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.
ಪೆರುಂಕಳಿಯಾಟ ಮಹೋತ್ಸವದಂಗವಾಗಿ ಮಂಗಳೂರಿನಿಂದ ಆಗಮಿಸಿದ ಹೊರೆಕಾಣಿಕೆ ಮೆರವಣಿಗೆಗೆ ಭವ್ಯ ಸ್ವಾಗತ ನೀಡಲಾಯಿತು. ಅದೇ ರೀತಿಯಲ್ಲಿ ಪ್ರಥಮ ಬಾರಿಗೆ ಆಗಮಿಸಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಕಲ್ಯೋಟ್ ಕಳಂಗ ವತಿಯಿಂದ ಸ್ವಾಗತಿಸಲಾಯಿತು.


