ನವದೆಹಲಿ: 2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಘೋಷಣೆಯಾಗಿದ್ದು ಕನ್ನಡದ ಹಿರಿಯ ಪತ್ರಕರ್ತೆ ಡಾ. ವಿಜಯಾ ಅವರಿಗೆ ಈ ಸಾಲಿನ ಪ್ರಶಸ್ತಿ ಲಭಿಸಿದೆ. ವಿಜಯಾ ಅವರ ಆತ್ಮಕಥೆ "ಕುದಿ ಎಸರು" ಕೃತಿಗಾಗಿ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯು ಒಂದು ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದ್ದು 2020 ಫೆಬ್ರವರಿ 25ರಂದು ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಲಿದೆ.
ಸಾಮಾಜಿಕ ಅಸಮಾನತೆ, ಶೋಷಣೆ, ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ದನಿ ಎತ್ತುವ, ಮಹಿಳೆಯರ ಸಮಸ್ಯೆಗಳು, ಭಾಷಾಚಳವಳಿ ಮುಂತಾದ ಚಳವಳಿಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವ ಡಾ. ವಿಜಯಾ ಹಲವಾರು ವರ್ಷಗಳಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ.
ಡಾ. ವಿಜಯಾ ಅವರ :ಕುದಿ ಎಸರು- ತಿಟ್ಹತ್ತಿ ತಿರುಗಿ ನೋಡಿದಾಗ"ಒಂದು ಅಪರೂಪದ ಪುಸ್ತಕವಾಗಿದ್ದು ಯಾವ ಆತ್ಮ ಚರಿತ್ರಕಾರರೂ ದಾಖಲಿಸದ, ನಿರೂಪಿಸದ ತೀರಾ ಖಾಸಗಿ ಎನ್ನುವಂತಹ ಅನುಭವಗಳನ್ನೂ ಸಹ ಒಳಗೊಂಡಿದೆ. ಇದು ಓದುಗರನ್ನು ಸಂವೇದನೆಗೆ ಎಳೆದೊಯ್ಯುವ ಮೂಲಕ ಓದುಗರಿಗೆ ಹೊಸ ಅರಿವನ್ನು ಮೂಡಿಸಲಿದೆ. ಈ ಅರಿವು ಮನುಷ್ಯತ್ವದೆಡೆಗೆ ನಮ್ಮನ್ನು ಕೊಂಡೊಯ್ಯಲಿದೆ ಎಂದು ಅವರು ಆಪ್ತವಾಗಿ ಬರೆದುಕೊಳ್ಳುತ್ತಾರೆ.
ಇದೇ ವೇಳೆ ರಾಜಕಾರಣಿ, ಬರಹಗಾರ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರಾಗಿರುವ ಶಶಿ ತರೂರ್ ಅವರಿಗೆ ಸಹ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2019 ಗೆದ್ದಿದ್ದಾರೆ. ಅವರ ಆನ್ ಎರಾ ಆಫ್ ಡಾಕ್ರ್ನೆಸ್: ದಿ ಬ್ರಿಟಿಷ್ ಎಂಪೈರ್ ಇನ್ ಇಂಡಿಯಾ ಎಂಬ ಪುಸ್ತಕಕ್ಕಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ತರೂರು ಕೇರಳದವರಾಗಿದ್ದು, ದಕ್ಷಿಣ ಭಾರತದ ಎರಡು ಅಕ್ಕಪಕ್ಕದ ರಾಜ್ಯದ ವ್ಯಕ್ತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಏಕಕಾಲಕ್ಕೆ ದೊರಕಿರುವುದು ವಿಶೇಷತೆಯಾಗಿದೆ.
ಸಾಹಿತ್ಯ ಅಕಾಡೆಮಿ ತನ್ನ ವಾರ್ಷಿಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು 23 ಭಾಷೆಗಳಲ್ಲಿ ಪ್ರಕಟಿಸುವ ಪತ್ರಿಕಾ ಪ್ರಕಟಣೆಯನ್ನು ಇಂದು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಶಿ ತರೂರ್ ಹೆಸರಿದ್ದು ಇಂಗ್ಲಿಷ್ ಭಾಷೆಯಲ್ಲಿ ಸೃಜನಶೀಲ ಕಾಲ್ಪನಿಕರಹಿತ ಸಾಹಿತ್ಯ ಸೃಷ್ಟಿಗಾಗಿ ಅವರಿಗೆ ಪ್ರಶಸ್ತಿ ಒಲಿದಿದೆ.


