ಮಂಜೇಶ್ವರ: ಸೇವಾಭಾರತಿಯಿಂದ ಮಂಜೇಶ್ವರ ತಾಲೂಕು ಬಾಲಗೋಕುಲಗಳ "ಗೋಕುಲೋತ್ಸವ" ಕಾರ್ಯಕ್ರಮ ಭಾನುವಾರ ಕುಬಣೂರು ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಬಾಲಗೋಕುಲಗಳ ಮಕ್ಕಳಿಂದ ಶ್ರೀ ಸತ್ಯನಾರಾಯಣ ಭಜನಾ ಮಂದಿರದಿಂದ ಶಾಲಾ ಪರಿಸರದ ತನಕ ಶೋಭಾಯಾತ್ರೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ "ಗೋಕುಲೋತ್ಸವ"ದ ಉದ್ಘಾಟನೆಯನ್ನು ಮುಖ್ಯೋಪಾಧ್ಯಾಯಿನಿ ಅರುಣ ಕೆ ಅವರು ದೀಪ ಪ್ರಜ್ವಲನಗೈದು ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಶೆಟ್ಟಿ ಹಾಗೂ ಬಾಲಗೋಕುಲ ತಾಲೂಕು ಪ್ರಮುಖ್ ರಾಮಚಂದ್ರ ಭಟ್ ಹಳೆಮನೆ ಉಪಸ್ಥಿತರಿದ್ದರು.
ಉದ್ಘಾಟನೆ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾಲೇಜು ವಿದ್ಯಾರ್ಥಿ ಪ್ರಮುಖ ಪುರುಷೋತ್ತಮ ಪ್ರತಾಪನಗರ ಅವರು ಧರ್ಮದ ರಕ್ಷಣೆ ಸಂಸ್ಕಾರಯುತ ವ್ಯಕ್ತಿಗಳಿಂದ ಆಗಬೇಕಿದೆ. ಅಂತಹ ಸಂಸ್ಕಾರಯುತ ವ್ಯಕ್ತಿ ಸಮಾಜದ ನಿರ್ಮಾಣದ ಕೆಲಸ ಬಾಲಗೋಕುಲಗಳಿಂದ ಆಗುತ್ತಿದೆ ಎಂದು ಹೇಳಿದರು.ಇಂದು ನಾವು ಒಬ್ಬ ವ್ಯಕ್ತಿಯ ಕುಟುಂಬದಿಂದ ಹಿಡಿದು ಇಡೀ ರಾಷ್ಟ್ರಕ್ಕೆ ಸಂಬಂಧಿಸಿದಂತೆ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈ ಎಲ್ಲಾ ಸಮಸ್ಯೆಗಳಿಗೆ ವ್ಯಕ್ತಿಯೇ ಕಾರಣ. ಆದರೆ ವ್ಯಕ್ತಿ ಸಂಸ್ಕಾರವಂತನಾಗಿ ಆತ್ಮಕ್ಕೆ ಪೂರಕವಾಗಿ ಬದುಕಿದಾಗ ವ್ಯಕ್ತಿಯ ಜೀವನಕ್ಕೆ ಸರಿಯಾದ ದಿಕ್ಕು ಸಿಗಲು ಸಾಧ್ಯ. ಬಾಲಗೋಕುಲಗಳ ಮೂಲಕ ಬಾಲ್ಯದಿಂದಲೇ ಹಿಂದೂ ಸಂಸ್ಕಾರ ಕಲಿಸಿ ಕೊಡುವ ಕೆಲಸ ಆಗುತ್ತಿದೆ ಎಂದು ಹೇಳಿದರು.
ಬಾಲಗೋಕುಲಗಳ ಮಕ್ಕಳಿಗೆ ದೇಶ ಭಕ್ತಿಗೀತೆ, ವಂದೇ ಮಾತರಂ ಹಾಡುವ ಸ್ಪರ್ಧೆ, ಕುಣಿತ ಭಜನೆ ಹಾಗೂ ವಿವಿಧ ಆಟದ ಸ್ಪರ್ಧೆಗಳು ನಡೆದವು. ಗೋಕುಲೋತ್ಸವದಲ್ಲಿ ಮಂಜೇಶ್ವರ ತಾಲೂಕಿನ 27 ಬಾಲಗೋಕುಲಗಳ ಒಟ್ಡು 436 ಮಕ್ಕಳು ಭಾಗವಹಿಸಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಮ ಎಯುಪಿ ಶಾಲೆಯ ಸಂಚಾಲಕಿ ಮೋಕ್ಷದಾ ಬಿ ಶೆಟ್ಟಿ ಅವರು ವಹಿಸಿದ್ದರು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಸಮಾರೋಪ ಭಾಷಣಗೈದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಬಾಲಗೋಕುಲಗಳ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.



