ಮಧೂರು: ಯಕ್ಷಗಾನದ ಪುನ:ರುತ್ಥಾನಕ್ಕೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನ ನಿರ್ಮಾಣ ಉತ್ತಮ ಬೆಳವಣಿಗೆ. ತನ್ನ ತೀರ್ಥ ರೂಪರ ಸ್ಮರಣೆಗೆಗಾಗಿ ಖ್ಯಾತ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರು ಇಂತಹ ಕೊಡುಗೆಯನ್ನು ನೀಡುತ್ತಿರುವುದು ಮಾದರಿಯಾಗಿದೆ ಎಂದು ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಹೇಳಿದರು.
ಸ್ವಾಮೀಜಿಯವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನ ಶಿಲಾನ್ಯಾಸವನ್ನು ಕಾರ್ಯಕ್ರಮವನ್ನು ಶನಿವಾರ ಸಿರಿಬಾಗಿಲಲ್ಲಿ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಯಕ್ಷಗಾನವನ್ನು ಜೀವನದ ಉಸಿರಾಗಿಸಿಕೊಂಡು, ಕಲೆಯನ್ನು ಬೆಳೆಸಿ ಅದರ ಶ್ರೇಯಸ್ಸಿಗಾಗಿ, ಅಭಿವೃದ್ಧಿಗಾಗಿ ಸಿರಿಬಾಗಿಲು ವೆಂಕಪ್ಪಯ್ಯ ಅವರು ನೀಡಿದ ಕೊಡುಗೆ ಅಪಾರ. ಅವರ ಹೆಸರನ್ನು ಶಾಶ್ವತಗೊಳಿಸುವ ದಿಸೆಯಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನ ನಿರ್ಮಾಣಕ್ಕೆ ಮುಂದಾಗಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಕೈಂಕರ್ಯ ಶ್ಲಾಘನೀಯ ಎಂದರು.
ಗಡಿನಾಡು ಕಾಸರಗೋಡಿನ ಶ್ರೇಷ್ಠ ಕವಿ, ವಿಮರ್ಶಕ, ಲೇಖಕ ದಿ.ಸಿರಿಬಾಗಿಲು ವೆಂಕಪ್ಪಯ್ಯ ಅವರ ಹೆಸರನ್ನು ಶಾಶ್ವತಗೊಳಿಸುವ ದಿಸೆಯಲ್ಲಿ ಆರಂಭಗೊಂಡ ಸಂಸ್ಥೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಯಕ್ಷಗಾನ ಹಾಗು ಇನ್ನಿತರ ಹಲವಾರು ಸಾಂಸ್ಕøತಿಕ ಹಾಗು ಶೈಕ್ಷಣಿಕ, ಅಧ್ಯಯನ ಯೋಗ್ಯ ಕಾರ್ಯಕ್ರಮಗಳನ್ನು ನಡೆಸಿ ಉಭಯ ರಾಜ್ಯಗಳಲ್ಲೂ ಜನಮನ್ನಣೆಯನ್ನು ಗಳಿಸಿದೆ. ಯಕ್ಷಗಾನದ ಸಾಂಪ್ರದಾಯಿಕ ರೂಪ ರಕ್ಷಣೆಗೆ ಕಟಿಬದ್ಧವಾಗಿರುವ ಈ ಸಂಸ್ಥೆ ಯಕ್ಷಗಾನದ ಸಾಂಪ್ರದಾಯಿಕ ರಂಗ ಕ್ರಮಗಳನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಸಾರ್ಥಕ ಪ್ರಯತ್ನ ನಡೆಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ವೇದಮೂರ್ತಿ ವಾಸುದೇವ ಅಡಿಗ, ಕುಡುಪು ಕೃಷ್ಣರಾಜ ತಂತ್ರಿ ಆಶೀರ್ವದಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಅವರು ಮಾತನಾಡಿ, ಶ್ರೀಮಂತ ಹಿನ್ನೆಲೆಯ ಯಕ್ಷಗಾನವನ್ನು ಪರಂಪರೆಗೆ ಧಕ್ಕೆಯಾಗದಂತೆ ಮುನ್ನಡೆಸುವ ತುರ್ತು ಇಂದಿದೆ. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನವು ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ, ಸಾಂಪ್ರದಾಯಿಕ ನೆಲೆ ಕೆಡದಂತೆ ಆಕಾಂಕ್ಷೆಯನ್ನು ಹೊತ್ತುಕೊಂಡು ರೂಪುಗೊಂಡಿದೆ. ಇಂತಹ ಸಂಸ್ಥೆಗಳೇ ಯಕ್ಷಗಾನದ ಮೂಲ ಸ್ವರೂಪವನ್ನು ಹಾಗೇ ಉಳಿಸಿಕೊಂಡು ಯಕ್ಷಗಾನವನ್ನು ಮೆರೆಸುವುದರಲ್ಲಿ ಯಶಸ್ವಿಯಾಗುತ್ತಿದೆ ಎಂಬುದು ಸಂತೋಷದ ವಿಚಾರವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಅವರು ನಿರ್ಮಾಣವಾಗಲಿರುವ ಸಾಂಸ್ಕøತಿಕ ಭವನಕ್ಕೆ ತನ್ನ ವೈಯಕ್ತಿಕ ಕೊಡುಗೆಯಾಗಿ 10 ಸಾವಿರ ರೂ. ನೀಡುವ ಘೋಷಣೆ ಮಾಡಿದರು.
ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್, ಸಿ.ಕೆ.ಪೂಜಾರಿ, ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಡಿಜಿಎಂ ಟಿ.ನರಸಿಂಹ ಮೂರ್ತಿ, ಆರ್.ಕೆ.ಭಟ್ ಬೆಳ್ಳಾರೆ, ನಾರಾಯಣ ಕಣ್ಣೂರು. ಶೀನ ಶೆಟ್ಟಿ, ಕೋಟೆಕುಂಜ ಪ್ರಭಾಕರ ಆಳ್ವ, ಶಿವಶಂಕರ್, ಶಂಕರನಾರಾಯಣ ಮಯ್ಯ, ಮಧೂರು ಗ್ರಾಮ ಪಂಚಾಯತಿ ಸದಸ್ಯೆ ಸುಮಿತ್ರ ಆರ್.ಮಯ್ಯ ಸಿರಿಬಾಗಿಲು, ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ ಮಾಜಿ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು, ಯೋಗೀಶ್ ರಾವ್ ಚಿಗುರುಪಾದೆ, ಶ್ರದ್ಧಾ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.
ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿದರು. ಟ್ರಸ್ಟ್ ಸದಸ್ಯ, ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಕಬೈಲು ಸತೀಶ್ ಅಡಪ ವಂದಿಸಿದರು. ರಾಜಾರಾಮ ರಾವ್ ಆರ್.ಎಂ.ಕಾರ್ಯಕ್ರಮ ನಿರೂಪಿಸಿದರು.



