ಕಾಸರಗೋಡು: ಕಲೆಯ ಆವರಣದಲ್ಲಿ ಭಾರತೀಯ ಸಂವಿಧಾನದ ಮೌಲ್ಯವನ್ನು ಜನತೆಗೆ ತಿಳಿಸಿ ಅವರನ್ನು ಜಾಗೃತರಾಗಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಪರ್ಯಟನೆಯೊಂದು ಇಂದು(ಜ.17) ಜಿಲ್ಲೆಯಲ್ಲಿ ಆರಂಭಗೊಳ್ಳಲಿದೆ.
ಸಂವಿಧಾನ ರಿಪಬ್ಲಿಕ್ ಮತ್ತು ಸಾಕ್ಷರತಾ ಮಿಷನ್ ನಡೆಸುವ ಸಂವಿಧಾನ ಸಾಕ್ಷರತಾ ಕಾರ್ಯಕ್ರಮದ ಎರಡನೇ ಹಂತದ ಅಂಗವಾಗಿ ರಾಜ್ಯಾದ್ಯಂತ ಈ ಪರ್ಯಟನೆ ಜರುಗಲಿದ್ದು, ಜ.30ರಂದು ತಿರುವನಂತಪುರಂನಲ್ಲಿ ಸಮಾಪ್ತಿಗೊಳ್ಳಲಿದೆ.
ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ಸಂವಿಧಾನಕ್ಕೆ ಬಹಳ ಮಹತ್ವವಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಕ್ಷರತಾ ಮಿಷನ್ ನಡೆಸುವ ಅನೇಕ ಚಟುವಟಿಕೆಗಳಲ್ಲಿ ಈ ಕಾರ್ಯಕ್ರಮವೂ ಒಂದಾಗಿದ್ದು, ಕಿರು ಹೊತ್ತಗೆಯೊಂದನ್ನೂ ಪ್ರಕಟಿಸಿದೆ. ಸಂವಿಧಾನ ರಚನೆಗೊಂಡು 70 ವರ್ಷಗಳು ಸಂದಿರುವ ಈ ವೇಳೆ ಭಾರತೀಯ ಗಣತಂತ್ರವನ್ನು ಸಾರ್ವಜನಿಕರ ಬಳಿಗೆ ತಲಪಿಸುವ, ಅದರ ಇತಿಹಾಸವನ್ನು ಸಾರುವ, ಇತ್ಯಾದಿ ಉದ್ದೇಶಗಳೊಂದಿಗೆ ಈ ಪರ್ಯಟನೆ ನಡೆಸಲಾಗುತ್ತಿದೆ. ಹಿಂದುಳಿದ ಜನಾಂಗಗಳ ಕೇರಿಗಳಿಗೆ, ಕರಾವಳಿ ವಲಯಗಳಲ್ಲಿ ಈ ಸಂಬಂಧ ಜಾಗೃತಿ ಮೂಡಿಸುವತರಗತಿಗಳು ನಡೆಯುತ್ತಿವೆ. ಜ.25ರಂದು ರಾಜ್ಯದ 5 ಸಾವಿರ ಕೇಂದ್ರಗಳಲ್ಲಿ ಕೇಂದ್ರವೊಂದರಲ್ಲಿ ತಲಾ ನೂರು ಮಂದಿ ಎಂಬಂತೆ 5 ಲಕ್ಷ ಮಂದಿ ಸಂವಿಧಾನದ ಪ್ರಸ್ತಾವನೆಯನ್ನು ವಾಚಿಸಲಿದ್ದಾರೆ.
ಹಾಡು, ನೃತ್ಯ, ನಾಟಕ ಇತ್ಯಾದಿಗಳ ಜೊತೆಗೆ ಸಂವಿದಾನದ ಮೌಲ್ಯಗಳನ್ನು ಸಾರುವ ಮೂಲಕ ಬಹಳ ಸುಲಭವಾಗಿ ಜನತೆಗೆ ತಲಪಿಸುವ ನಿಟ್ಟಿನಲ್ಲಿ ದ್ವಿತೀಯ ಹಂತದಲ್ಲಿ ಕಲಾಜಾಥಾದ ಮೂಲಕ ಹೀಗೊಂದು ಕ್ರಮ ನಡೆಸಲಾಗುತ್ತಿದೆ.
ಸಮಾರಂಭಗಳು:
ಇಂದು ಬೆಳಗ್ಗೆ 9.30ಕ್ಕೆ ಕಾಸರಗೋಡು ನೂತನ ಬಸ್ ನಿಲ್ದಾಣ ಬಳಿ ಪರ್ಯಟನೆಗೆ ನೀಡಲಾಗುವ ಸ್ವಾಗತವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಮಧ್ಯಾಹ್ನ 2.30ಕ್ಕೆ ಕಾಞಂಗಾಡ್ ಅಲಾಮಿಪಳ್ಳಿ ಬಸ್ ನಿಲ್ದಾಣ ದಲ್ಲಿ ನಡೆಯುವ ಸಮಾರಂಭವನ್ನು ಶಾಸಕ ಕೆ.ಕುಂuಟಿಜeಜಿiಟಿeಜರಾಮನ್ ಉದ್ಘಾಟಿಸುವರು. ಸಂಜೆ 4.30ಕ್ಕೆ ನೀಲೇಶ್ವರ ಬಸ್ ನಿಲ್ದಾಣ ಬಳಿ ನಡೆಯುವ ಸ್ವಾಗತ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸುವರು.
30ರಂದು ನಡೆಯುವ ಸಮಾರೋಪ ಸಮಾರಂಭದೊಂದಿಗೆ, ಮಾನವ ಸಂಗಮ ಕಾರ್ಯಕ್ರಮ ಜರುಗಲಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು.

