HEALTH TIPS

ವರ್ಷ ನಡೆದ ಮನೀಶ್ ಮನೆ ಸೇರಿದಾಗ......


      ಮಂಜೇಶ್ವರ: ಸುದೀರ್ಘ ಎಂಟು ವರ್ಷಗಳ ಬಳಿಕ ಅವನನ್ನು ನಾವು ನೋಡುತ್ತಿದ್ದೇವೆ. ಹೀಗೊಂದು ಭೇಟಿ ಈ ಬದುಕಿನಲ್ಲಿ ಸಾ„ಸುವ ವಿಶ್ವಾಸವೇ ಇರಲಿಲ್ಲ. ಅವನ ಮಾನಸಿಕ ವಿಕಾಸವು ಕೂಡಾ ತಮ್ಮನ್ನು ಆಶ್ಚರ್ಯಗೊಳಿಸಿದೆ. ಎಲ್ಲೋ ತೆಂಕಣದಲ್ಲಿರುವ ಸ್ನೇಹಾಲಯವೆಂಬ ಸಂಸ್ಥೆಯು ಆತನನ್ನು ಬದುಕಿಸಿ ಈ ಹಂತಕ್ಕೇರಿಸಿರುವುದಾಗಿ ತಿಳಿದಿರುವೆವು. ನಾವು ಕಾಣದಿದ್ದರೂ ಆ ಸಂಸ್ಥೆಯ ಮಮತೆ, ಮಾನವೀಯ ಸೇವೆಯನ್ನು ಅನುಭವಿಸಿದ್ದೇವೆ. ತೀರಿಸಲಾರದ ಋಣವಿದೆ ಎಂದು ತಮ್ಮ ಪುತ್ರನ ಮರಳಿಕೆಯ ಆನಂದಾತಿರೇಕದಲ್ಲಿರುವ ಉತ್ತರ ಪ್ರದೇಶದ ಆ ಬಡ ತಾಯ್ತಂದೆಯರು ಭಾವುಕರಾಗುತ್ತಾರೆ.
       2019 ರ ನವಂಬರ 2. ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಉದ್ದಕ್ಕೆ ನಡೆಯುತ್ತಿದ್ದ 35 ರ ಹರೆಯದ ಆ ಯುವಕ ಕುಂಬಳೆ ಪೇಟೆ ಸನಿಹಕ್ಕೆ ತಲುಪಿದ್ದ. ಸ್ಥೂಲಕಾಯ, ಕೊಳಕು ವಸ್ತ್ರ, ಹುಲುಸಾಗಿ ಬೆಳೆದ ರೋಮಗಳಿಂದ ಭೀಕರ ರೂಪ. ಆಸುಪಾಸಿನ ಗೊಡವೆಯೇ ಆತನಿಗಿರಲಿಲ್ಲ. ಯಾರೋ ನಾಗರಿಕರು ಮಾಹಿತಿ ನೀಡಿದ ಫಲವಾಗಿ ಬ್ರದರ್ ಜೋಸೆಫ್ ಕ್ರಾಸ್ತಾ ನೇತೃತ್ವದ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರದ ಸ್ನೇಹಮಯಿ ಕಾರ್ಯಕರ್ತರು ತತ್‍ಕ್ಷಣ ತಲುಪಿ ತಮ್ಮ ವಾಹನದಲ್ಲಿ ಆತನನ್ನು ಕುಳ್ಳಿರಿಸಿ ಕರೆದೊಯ್ದರು. ಆತನನ್ನು ಶುಚಿಗೊಳಿಸಿ ಹೊಸ ಬಟ್ಟೆಬರೆ ತೊಡಿಸಲಾಯಿತು. ಯಾವುದೇ ಪ್ರತಿಕ್ರಿಯೆ ತೋರದಿದ್ದ, ಮಾತನ್ನು ಕೂಡಾ ಆಡದಿದ್ದ ಆತನಿಗೆ ಸ್ನೇಹಾಲಯವು ಮನೀಶ್ ಎಂಬ ನಾಮವನ್ನಿರಿಸಿತು. ದಿನದ ವಿಶ್ರಾಂತಿಗೆ ಬಿಟ್ಟು ಮರುದಿನ ಮಂಗಳೂರಿನ ಯೇನಪೆÇೀಯ ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಲಾಯಿತು. ಸುಮಾರು ಮೂರು ವಾರಗಳ ದಾಖಲು ಶುಶ್ರೂಷೆಯಿಂದ ಮನೀಶ್ ಸಾಕಷ್ಟು ಚೇತರಿಸಿಕೊಂಡಿದ್ದ. ಸ್ನೇಹಾಲಯಕ್ಕೆ ಮರಳಿಸಿ ಆತ್ಮೀಯ ಆರೈಕೆ ಮುಂದುವರಿಸಲಾಯಿತು. ಎಲ್ಲ ರೀತಿಯ ದಿನಚರಿಗಳಲ್ಲಿ ಸಕ್ರಿಯವಾಗಿ ಬೆರೆಯುತ್ತಿದ್ದಂತೆ ಲಗುಬಗನೆ ಮನಸ್ಸಿನ ಹತೋಟಿ ಕಂಡುಕೊಳ್ಳುತ್ತಿದ್ದ. ಈಗ ಚೆನ್ನಾಗಿ ಮಾತನಾಡಲು ತೊಡಗಿದ್ದಾನೆ. ಆಪ್ತ ಸಮಾಲೋಚನೆ ನೀಡಲಾಯಿತು. ಉತ್ತರ ಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯ ಯಾವುದೋ ಪ್ರದೇಶದಲ್ಲಿ ತನ್ನ ಮನೆಯೆಂದು ಆತ ನೆನಪಿಸಿದ್ದ. ಹಾಗೆ, ಸ್ನೇಹಾಲಯವು ಮುಂಬಯಿಯಿ ಶ್ರದ್ಧಾ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರದ ನೆರವನ್ನು ಕೋರಿತು. ಮನೀಶನನ್ನು ಶ್ರದ್ಧಾಕ್ಕೆ ಕಳುಹಿಸಲಾಗಿ ಅಲ್ಲಿನ ಸ್ವಯಂಸೇವಾ ಕಾರ್ಯಕರ್ತರು ಆತನ ಪೂರ್ಣ ವಿಳಾಸ ಪತ್ತೆಹಚ್ಚಿ ಕಳೆದ ವಾರ ಸುರಕ್ಷಿತವಾಗಿ ಆತನನ್ನು ಉ.ಪ್ರ. ಮಹಾರಾಜ್ ಗಂಜ್ ಜಿಲ್ಲೆಯ ಖೋರಿಯಾ ಬಝಾರ್ ತಾಲೂಕಿನ ಶಿರ್ಸಿಯಾ ಮಹರ್ಕಿ ಗ್ರಾಮದಲ್ಲಿರುವ ಮನೆಗೆ ತಲುಪಿಸಿದ್ದಾರೆ.\
       ತಾಯ್ತಂದೆ, ಇಬ್ಬರು ತಮ್ಮಂದಿರು ಹಾಗೂ ಇಬ್ಬರು ತಂಗಿಯಂದಿರು ಅವನಿಗೆ. ಬಡ ಕುಟುಂಬದ ಹಿರಿಯಣ್ಣನಾಗಿದ್ದ. ತಂದೆ, ತಮ್ಮಂದಿರು ಕೂಲಿ ಕಾರ್ಮಿಕರು. ಆದರೆ, ಮನೀಶ್ ಮಾತ್ರ ಬಿ.ಎ. ಪದವಿ ಮುಗಿಸಿದ್ದ. ಕುಟುಂಬದ ಸಂಪೂರ್ಣ ನಿರೀಕ್ಷೆ ಈತನ ಮೇಲಾಗಿತ್ತು. ಆದರೇನು ಮಾಡೋಣ.... ಎಂಟು ವರ್ಷ ಹಿಂದೆ ದಿಢೀರನೆ ಮನೋರೋಗಕ್ಕೊಳಗಾಗುತ್ತಾನೆ. ಸಾಕಷ್ಟು ಚಿಕಿತ್ಸೆ ಮಾಡಿದರೂ ಫಲಕಾರಿಯಾಗಿರಲಿಲ್ಲ. ರೋಗ ಉಲ್ಭಣಿಸಿ ಒಂದು ದಿನ ಮನೆಯಲ್ಲಿ ಯಾರೂ ಇಲ್ಲದಾಗ ಹೊರಟೇ ಬಿಟ್ಟಿದ್ದ. ಈ ಎಂಟು ವರ್ಷಗಳಲ್ಲಿ ಆತ ಎಲ್ಲೆಲ್ಲಾ ಸುತ್ತಿದ್ದ, ಹೇಗಿದ್ದ... ಗೊತ್ತಿಲ್ಲ.... ಆದರೆ, ಸ್ನೇಹಾಲಯದ ಸುಪರ್ದಿಗೆ ಸಿಗುವಾಗ ಆತ ಆಹಾರವಿಲ್ಲದೆ ಎಲುಬು ಗೂಡಿನಂತಾಗಿದ್ದ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries