ಬೆಂಗಳೂರು: ಮಹಾಮಾರಿ ಕೊವಿಡ್-19ನಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದ್ದು, ಕೊರೋನಾ ವೈರಸ್ ಮೂಲದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ಮತ್ತು ಮಾಜಿ ಚೀನಾ ರಾಯಭಾರಿ ನಿರುಪಮಾ ರಾವ್ ಅವರು ಹೇಳಿದ್ದಾರೆ.
ಬೆಂಗಳೂರು ಮೂಲದ ಥಿಂಕ್ ಟ್ಯಾಂಕ್ ಸಿನರ್ಜಿಯಾ ಫೌಂಡೇಶನ್ ಶುಕ್ರವಾರ ಆಯೋಜಿಸಿದ್ದ ವೆಬಿನಾರ್ ನಲ್ಲಿ ಮಾತನಾಡಿದ ನಿರುಪಮಾ ರಾವ್ ಅವರು, ಈ ವರ್ಷ ಭಾರತ ಮತ್ತು ಚೀನಾ, ಎರಡೂ ಶ್ರೇಷ್ಠ ಪ್ರಾಚೀನ ನಾಗರಿಕತೆಗಳಾಗಿದ್ದು. ತಮ್ಮ 70 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಸ್ಮರಿಸುತ್ತಿವೆ. ಆದರೆ 'ಹಿಮಾಲಯನ್ ಗಡಿಯಿಂದ ಬಂದ ಸುದ್ದಿ'ಗಳಿಂದ ಇದು ನಾಶವಾಗಿದೆ ಎಂದು ಅವರು ಹೇಳಿದರು. "ಉಭಯ ದೇಶಗಳ ಸಂಬಂಧವು ಸಮತೋಲನವನ್ನು ಆಧರಿಸಿದೆ. ನಮ್ಮ ಭವಿಷ್ಯವನ್ನು ನಿರ್ಧರಿಸುವ ವಿಷಯಗಳು ಶಾಂತಿಯನ್ನು ಆಧರಿಸಿರಬೇಕು, ಸಂಘರ್ಷವಲ್ಲ. ನಾವು ನಮ್ಮ ಜನರ ಉದ್ದೇಶವನ್ನು ಪೂರೈಸಬೇಕು ಮತ್ತು ನಮ್ಮ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು" ಎಂದು ಹೇಳಿದರು.
ಕೊರೋನಾ ವೈರಸ್ ಮೂಲದ ಬಗ್ಗೆ 'ನಿಷ್ಪಕ್ಷಪಾತ ತನಿಖೆಗೆ' ಕರೆ ನೀಡಿದ ರಾವ್, "ವಿಶ್ವ ನಾಯಕರು ಎಲ್ಲರ ಆರೋಗ್ಯಕ್ಕಾಗಿ ಕೊವಿಡ್-19 ಲಸಿಕೆಯನ್ನು ಎದುರು ನೋಡುತ್ತಿದ್ದಾರೆ ಮತ್ತು ಅದು ನಮ್ಮ ಸಾಮಾನ್ಯ ಗುರಿಯಾಗಿರಬೇಕು ಎಂದಿದ್ದಾರೆ.


