ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಪರಿಸರವಾದಿ ಡಾ.ಮೋಹನ ಕುಮಾರ್ ವೈ.ಎಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಗ್ರಂಥಾಲಯದ ಪರಿಸರದಲ್ಲಿ ಗಿಡವೊಂದನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರಿಸರ ನಾಶದಿಂದಾಗಿ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ಸೋದಾಹರಣವಾಗಿ ವಿವರಿಸಿದರು. ಈ ವರ್ಷದ ವಿಷಯವಾದ ಜೀವ ವೈವಿಧ್ಯದ ಕುರಿತು ಹೇಳಿದರು. ಎಲ್ಲರೂ ಒಟ್ಟಾಗಿ ಜಗತ್ತು ವಿನಾಶದತ್ತ ಹೋಗುವುದನ್ನು ತಡೆಯಬೇಕೆಂದರು.
ಚಂದ್ರಶೇಖರ ಏತಡ್ಕ ಅವರು ಮಾತನಾಡಿ ಹಿಮೋಗ್ಲೋಬಿನ್ ಕ್ರಾಟನ್ ಅಥವಾ ಕಾಡುಹರಿವೆಯ ಗಿಡದ ಪರಿಚಯ ಮಾಡಿ ಅದರ ಮಹತ್ವವನ್ನು ವಿವರಿಸಿದರು. ಡಾ. ವೇಣುಗೋಪಾಲ್ ಕಳೆಯತ್ತೋಡಿ ಮಾತನಾಡಿ ಹಲಸಿನ ವಿವಿಧ ತಳಿಗಳ ಮತ್ತು ಅವುಗಳ ಉಪಯೋಗದ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳು ಗಣರಾಜ ಕಡೆಕಲ್ಲು ಮತ್ತು ಶಾಂತ ಕುಮಾರಿ ಕಳೆಯತ್ತೋಡಿ ಅವರಿಗೆ ಗಿಡಗಳನ್ನು ನೀಡಿ ಸಾಂಕೇತಿಕವಾಗಿ ಗಿಡ ವಿತರಣೆಯನ್ನು ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಂಥಾಲಯದ ಅಧ್ಯಕ್ಷ ಕೆ. ನರಸಿಂಹ ಭಟ್ ಮಾತನಾಡಿ ಪರಿಸರ ದಿನದ ಮಹತ್ವವನ್ನು ಹೇಳಿದರು. ಉಪಾಧ್ಯಕ್ಷ ವೈ.ಕೆ. ಗಣಪತಿ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಕೆ. ಸುಬ್ರಹ್ಮಣ್ಯ ಭಟ್ ವಂದಿಸಿದರು.ಭಾಗವಹಿಸಿದವರಿಗೆಲ್ಲರಿಗೂ ಗಿಡಗಳನ್ನು ವಿತರಿಸಲಾಯಿತು. ಗ್ರಂಥಾಲಯದ ಪರಿಸರದಲ್ಲಿ ಮತ್ತು ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಡಲಾಯಿತು. ಆರಂಭದಲ್ಲಿ ಗ್ರಂಥಾಲಯದ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.

