ಮಂಜೇಶ್ವರ: ಕೋವಿಡ್ ಸೋಂಕಿನ ಹೆಸರಿನಲ್ಲಿ ಕೇರಳ ಕರ್ನಾಟಕದ ಗಡಿಯನ್ನು ಮುಚ್ಚಿ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ಸರ್ಟಿಫಿಕೇಟ್ ಮೂಲಕ ಕರ್ನಾಟಕಕ್ಕೆ ಪ್ರವೇಶ ನೀಡುವಂತೆ ಕರ್ನಾಟಕ ಸರ್ಕಾರ ಹೊರಡಿಸಿದ ಆದೇಶದ ವಿರುದ್ಧ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸೋಮವಾರ ದಾವೆ ಹೂಡಲಾಗಿದೆ ಎಂದು ಹರ್ಷಾದ್ ವರ್ಕಾಡಿ ಅವರು ತಿಳಿಸಿದ್ದಾರೆ.
ಕೆಪಿಸಿಸಿ ಕಾರ್ಯದರ್ಶಿ ನ್ಯಾಯವಾದಿ. ಬಿ. ಸುಬ್ಬಯ್ಯ ರೈ ಯವರು ನ್ಯಾಯವಾದಿ ರವಿಶಂಕರ್ ರವರ ಮೂಲಕ ಸೋಮವಾರ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು ಇಂದು(ಮಂಗಳವಾರ) ಈ ಅರ್ಜಿಯನ್ನು ಪರಿಗಣಿಸುವ ಸಾಧ್ಯತೆಯಿದೆಯೆಂದು ಹರ್ಷಾದ್ ವರ್ಕಾಡಿ ಅವರು ಹೇಳಿದ್ದಾರೆ. ಲಾಕ್ಡೌನ್ ಕಾಲಘಟ್ಟದಲ್ಲಿ ತಲಪಾಡಿ ಗಡಿ ಪ್ರದೇಶ ಮುಚ್ಚಿದಂತಹ ಸಂದರ್ಭದಲ್ಲಿ ಅಂದಿನ ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ಇದೀಗ ಕೇಂದ್ರ ಸರ್ಕಾರದ ಅನ್ ಲಾಕ್ ಆದೇಶದ ವಿರುದ್ಧವಾಗಿ ಕರ್ನಾಟಕ ಸರ್ಕಾರ ಗಡಿ ಮುಚ್ಚುವ ತೀರ್ಮಾನ ಕೈಗೊಂಡಿದ್ದು ಖಂಡನೀಯವೆಂದು ನ್ಯಾಯವಾದಿ. ಬಿ ಸುಬ್ಬಯ್ಯ ರೈ ಹೇಳಿದ್ದಾರೆ. ದೇಶದಾದ್ಯಂತ ಅನ್ ಲಾಕ್ ಪ್ರಕ್ರಿಯೆ ಅಸ್ತಿತ್ವದಲ್ಲಿರುವಾಗ ಕರ್ನಾಟಕ ರಾಜ್ಯದಲ್ಲಿ ಮಾತ್ರ ಅಂತರ್ ರಾಜ್ಯ ವಾಹನ ಸಾಗಾಟಕ್ಕೆ, ಜನಸಂಚಾರಕ್ಕೆ ನಿಷೇಧವನ್ನು ಹೇರುವುದು ಸಮರ್ಪಕ ಅಲ್ಲವೆಂದು ಅವರು ಹೇಳಿದ್ದಾರೆ.
ಕಾಸರಗೋಡಿನ ಕನ್ನಡಿಗರು ಲಕ್ಷಾಂತರ ಮಂದಿ ಕರ್ನಾಟಕವನ್ನು ಅವಲಂಬಿಸಿಕೊಂಡಿದ್ದು ಕರ್ನಾಟಕ ಸರ್ಕಾರದ ಆದೇಶದಿಂದ ಲಕ್ಷಾಂತರ ಮಂದಿ ಸಂಕಷ್ಟಕ್ಕೀಡಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದೀಗ ಪರೀಕ್ಷಾ ಸಮಯವಾಗಿದ್ದು ಸಹಸ್ರಾರು ವಿದ್ಯಾರ್ಥಿಗಳು ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದು ಗಡಿ ಮುಚ್ಚುವಿಕೆಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಡೋಲಾಯಮಾನವಾಗಲಿದೆ ಎಂದು ಅವರು ತನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯವು ಸರ್ಕಾರಕ್ಕೆ ಈ ಬಗ್ಗೆ ನೋಟಿಸ್ ನ್ನು ಜಾರಿ ಮಾಡಿದೆಯೆಂದು ನ್ಯಾಯವಾದಿ ಸುಬ್ಬಯ್ಯ ರೈ ಹೇಳಿದ್ದಾರೆ.