ಖರಗ್ಪುರ, ಪಶ್ಚಿಮ ಬಂಗಾಳ: ಹವಾಮಾನ ಬದಲಾವಣೆ ಹಾಗೂ ಅದರಿಂದ ಉಂಟಾಗುವ ನೈಸರ್ಗಿಕ ವಿಕೋಪಗಳು ಈಗ ಜಗತ್ತಿಗೆ ದೊಡ್ಡ ಸವಾಲುಗಳನ್ನು ಒಡ್ಡಿವೆ. ಹೀಗಾಗಿ ವಿಪತ್ತು ಪ್ರತಿರೋಧಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಐಐಟಿಗಳು ಆಲೋಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಭಿಪ್ರಾಯಪಟ್ಟರು.
ಐಐಟಿ-ಖರಗ್ಪುರದ 66ನೇ ಘಟಿಕೋತ್ಸವವನ್ನು ಉದ್ದೇಶಿಸಿ ಅವರು ಆನ್ಲೈನ್ ಮೂಲಕ ಮಾತನಾಡಿದರು.
ಸೌರಶಕ್ತಿ ಬಳಸಿ ಕಡಿಮೆ ದರದಲ್ಲಿ, ಸುರಕ್ಷಿತ ಹಾಗೂ ಪರಿಸರಸ್ನೇಹಿ ಇಂಧನವನ್ನು ಉತ್ಪಾದಿಸುವ 'ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್' ಎಂಬ ಪರಿಕಲ್ಪನೆಯನ್ನು ಭಾರತ ಜಗತ್ತಿಗೆ ನೀಡಿದೆ ಎಂದರು.
ನೈಸರ್ಗಿಕ ವಿಪತ್ತು ನಿರ್ವಹಣೆಗೆ ಹೆಚ್ಚು ಒತ್ತು ಅಗತ್ಯ ಎಂದು ಪ್ರತಿಪಾದಿಸುತ್ತಲೇ ಬಂದಿರುವ ಭಾರತ ಈ ವಿಷಯದತ್ತ ಜಗತ್ತಿನ ಗಮನ ಸೆಳೆದಿತ್ತು. ಉತ್ತರಾಖಂಡದಲ್ಲಿ ಇತ್ತೀಚೆಗೆ ಸಂಭವಿಸಿದ ಅವಘಡ ಇದಕ್ಕೆ ತಾಜಾ ನಿದರ್ಶನ. ಈ ಕಾರಣಕ್ಕೆ, ವಿಪತ್ತು ಪ್ರತಿರೋಧಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯ ಎಂದರು.
ಕೋವಿಡ್-19 ವಿರುದ್ದದ ಹೋರಾಟದಲ್ಲಿ ಐಐಟಿಗಳ ಕೊಡುಗೆ ಅನನ್ಯ. ಭವಿಷ್ಯದಲ್ಲಿ ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಐಐಟಿಗಳು ಕಾರ್ಯಪ್ರವೃತ್ತವಾಗಬೇಕು ಎಂದೂ ಅವರು ಹೇಳಿದರು.