ನವದೆಹಲಿ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ(ಎಂಪಿಎಲ್ಎಡಿಎಸ್) ಹಣ ಬಿಡುಗಡೆ ಮಾಡುವಂತೆ ಹಲವು ಸಂಸದರು ಮನವಿ ಮಾಡಿದ ನಂತರ ಕೇಂದ್ರ ಸರ್ಕಾರ ಮಾರ್ಚ್ 31, 2020ರ ವರೆಗೆ ಬಾಕಿ ಇರುವ ಕಂತುಗಳ ಪೈಕಿ 2,200 ಕೋಟಿ ರೂ. ಬಿಡುಗಡೆ ಮಾಡಲು ನಿರ್ಧರಿಸಿದೆ.
ಕೋವಿಡ್ -19 ಸಾಂಕ್ರಾಮಿಕದ ಪರಿಣಾಮ ಕಳೆದ ಏಪ್ರಿಲ್ ನಲ್ಲಿ ನಡೆದ ಸಂಪುಟ ಸಭೆಯಲ್ಲಿ 2020-21 ಮತ್ತು 2021-22ರವರೆಗೆ ಸಂಸದರ ನಿಧಿಯನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿತು ಮತ್ತು ಅದರ ಪ್ರಕಾರ 2020-21 ಮತ್ತು 2021-2022ರ ವಾರ್ಷಿಕ ಬಜೆಟ್ ವಿನಿಯೋಗವನ್ನು ಪ್ರತಿಕೂಲ ಆರ್ಥಿಕ ನಿರ್ವಹಣೆಗೆ ಬಳಸಿಕೊಳ್ಳಲು ಹಣಕಾಸು ಸಚಿವಾಲಯಕ್ಕೆ ನಿರ್ದೇಶಿಸಲಾಗಿತ್ತು.
2019-20ನೇ ಸಾಲಿನ ಲೋಕಸಭಾ ಮತ್ತು ರಾಜ್ಯಸಭೆಯ ಸದಸ್ಯರಿಗೆ ಸಂಬಂಧಿಸಿದಂತೆ ಬಾಕಿ ಇರುವ ಕಂತುಗಳನ್ನು ಬಿಡುಗಡೆ ಮಾಡುವುದು ಮೊದಲ ಆದ್ಯತೆಯಾಗಿದೆ' ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಹೊರಡಿಸಿದ ಸುತ್ತೋಲೆ ತಿಳಿಸಿದೆ.