ಜಮ್ಮು: ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯೊಂದನ್ನು ಜಮ್ಮು ಕಾಶ್ಮೀರದ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿದ್ದು, ಇನ್ನೇನು ಇದು ಮುಗಿಯುವ ಹಂತ ತಲುಪಿದೆ. 1.3 ಕಿ.ಮೀ ಉದ್ದವಿರುವ ಈ ಸೇತುವೆ ನಿರ್ಮಾಣ ಪೂರ್ಣವಾದ ನಂತರ ಚೀನಾದ 275 ಮೀ ಉದ್ದದ ಶೂಬೇ ರೈಲ್ವೆ ಸೇತುವೆಯ ದಾಖಲೆಯನ್ನು ಮುರಿಯಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಇದು ಮೂಲಸೌಕರ್ಯಗಳ ಅದ್ಭುತ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ಕೌರಿ ಗ್ರಾಮದ ಕತ್ರಾ-ಬನಿಹಾಲ್ ರೈಲ್ವೆ ಮಾರ್ಗದಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ಈ ಸೇತುವೆ ಚೇನಾಬ್ ನದಿ ಮಟ್ಟದಿಂದ 359 ಮೀಟರ್ ಎತ್ತರದಲ್ಲಿ ನಿರ್ಮಾಣವಾಗುತ್ತಿದ್ದು, 1.3 ಕಿ.ಮೀನಷ್ಟು ಉದ್ದವಿದೆ. ಜಮ್ಮುವಿನ ಕತ್ರಾದಲ್ಲಿರುವ ಬಕ್ಕಲ್ ಹಾಗೂ ಶ್ರೀನಗರದ ಕೌರಿ ನಡುವೆ ಸಂಪರ್ಕ ಕಲ್ಪಿಸಲಿದೆ. ಸೇತುವೆ ನಿರ್ಮಾಣ ಪೂರ್ಣಗೊಂಡರೆ ಪ್ರಯಾಣದ 5-6 ಗಂಟೆ ಸಮಯವನ್ನು ಕಡಿಮೆ ಮಾಡಲಿದೆ ಎನ್ನಲಾಗಿದೆ.
ವಿಶ್ವದ ಅತಿ ಎತ್ತರದ ಕಟ್ಟಡ ಎಂದೇ ಬಿಂಬಿತವಾಗಿರುವ ಐಫೆಲ್ ಟವರ್ಗಿಂತಲೂ ಎತ್ತರವಾಗಿರುವ ಈ ಸೇತುವೆ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆ ಪಡೆದಿದೆ. ಜತೆಗೆ ಉಗ್ರರ ದಾಳಿಗೂ ಇದು ಜಗ್ಗದಂಥ ತಂತ್ರಜ್ಞಾನ ರೂಪಿಸಲಾಗಿದೆ.
ಫ್ರಾನ್ಸ್ನ ಪ್ಯಾರಿಸ್ನಲ್ಲಿರುವ ಐಫೆಲ್ ಟವರ್ 324 ಮೀ (1062.99 ಅಡಿ) ಎತ್ತರವಿದ್ದು ಈ ಬ್ರಿಡ್ಜ್ ಅದಕ್ಕಿಂತ 35 ಮೀ ಎತ್ತರವಿರಲಿದೆ. ಅಂದರೆ ಈ ಸೇತುವೆ ಚೇನಾಬ್ ನದಿಯಿಂದ 359 ಮೀ (1177.82 ಅಡಿ) ಎತ್ತರವಿರಲಿದೆ.
ಕೊಂಕಣ ರೈಲ್ವೆ ಈ ಯೋಜನೆಯ ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದ್ದು, 2004ರಲ್ಲಿ ಸೇತುವೆ ನಿರ್ಮಾಣದ ಕಾರ್ಯ ಆರಂಭವಾಗಿತ್ತು. ಉಧಮಾಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕದ ಯೋಜನೆಯ ಒಂದು ಭಾಗವಾಗಿದೆ. ಈ ಮಾರ್ಗದಲ್ಲಿ ಉಧಮಾಪುರ-ಕಾತ್ರ (25 ಕಿಮೀ) ಸೆಕ್ಷನ್, ಬನಿಹಾಳ್-ಕ್ವಾಜಿಗುಂಡ್ (18 ಕಿಮೀ) ಸೆಕ್ಷನ್ ಹಾಗೂ ಕ್ವಾಜಿಗುಂಡ್-ಬಾರಾಮುಲ್ಲಾ ವಿಭಾಗವನ್ನು ಈಗಾಗಲೇ ನಿರ್ಮಿಸಲಾಗಿದೆ.
ಸೇತುವೆ ನಿರ್ಮಾಣ ಕಾರ್ಯ ವೈಷ್ಣೋ ದೇವಿ ಪುಣ್ಯ ಕ್ಷೇತ್ರಕ್ಕೆ ಪ್ರಸಿದ್ಧಿಯಾಗಿರುವ ಜಿಯಾಸಿ ರಿಯಾಸಿ ಜಿಲ್ಲೆಯ ಪ್ರವಾಸೋಧ್ಯಮದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಲಿದೆ. ಸೇತುವೆ ಮೇಲೆ ಹೆಲಿಪ್ಯಾಡ್ ನಿರ್ಮಾಣವಾಗುವ ಕಾರಣ ಜನರು ತಮ್ಮ ಚಾಫರ್ ಮೂಲಕ ಇಲ್ಲಿಗೆ ಆಗಮಿಸಬಹುದು. ಇದರ ನಿರ್ಮಾಣ ಹಲವಾರು ಸವಾಲುಗಳಿಂದ ಕೂಡಿದ್ದರೂ ಇನ್ನೆರಡು ವರ್ಷಗಳಲ್ಲಿ ಇದು ಲೋಕಾರ್ಪಣೆಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಇವೆಲ್ಲವೂ ಇವೆ…
ಗುಮ್ಮಟದ ಆಕಾರದಲ್ಲಿ ಕಮಾನು ನಿರ್ಮಿಸಿ ಅದರ ಮೇಲೆ ಬ್ರಿಡ್ಜ್ ನಿರ್ಮಾಣವಾಗಲಿದೆ. ಸೇತುವೆ ನಿರ್ಮಾಣಕ್ಕಾಗಿ 24 ಸಾವಿರಟನ್ಗಳಷ್ಟು ಸ್ಟೀಲ್ ಬಳಸಲಾಗುತ್ತಿದೆ. ಸ್ಫೋಟ ನಿರೋಧಕ ಸ್ಟೀಲ್ನಿಂದ ಈ ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು, ಉಗ್ರರ ದಾಳಿಯನ್ನೂ ತಡೆದುಕೊಳ್ಳಲಿದೆ. ಅತ್ಯಂತ ಕಡಿಮೆ ಉಷ್ಣಾಂಶ ಹಾಗೂ 266 ಕಿಮೀ ವೇಗವಾಗಿ ಬೀಸುವ ಗಾಳಿಯನ್ನೂ ತಡೆದುಕೊಳ್ಳಲಿದೆ. 120 ವರ್ಷಗಳ ಕಾಲಮಿತಿಯನ್ನು ಸೇತುವೆ ಹೊಂದಿದೆ.
ಸೇತುವೆ ಮತ್ತು ರೈಲ್ವೆ ಪ್ರಯಾಣಿಕರ ರಕ್ಷಣೆಗಾಗಿ ಏರಿಯಲ್ ರಿಂಗ್, ಆನ್ಲೈನ್ ನಿರ್ವಹಣೆ ಹಾಗೂ ಎಚ್ಚರಿಕೆಯ ವ್ಯವಸ್ಥೆಗಳು ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಇದು ಮುಗಿಯುವ ನಿರೀಕ್ಷೆ ಇದೆ.