ಕೋವಿಡ್ ಲಸಿಕೆ ನೀಡುವ ವಿಚಾರದಲ್ಲಿ ಸರ್ಕಾರ ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕಾಗಿದೆ. ಲಸಿಕೆ ಹಾಕಿಸಿಕೊಳ್ಳುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ತುರ್ತು ಅಗತ್ಯವೂ ಇದೆ.
ಇಡೀ ಜಗತ್ತು ತತ್ತರಿಸುವಂತೆ ಮಾಡಿರುವ ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ, ದೇಶದಲ್ಲಿ ಮತ್ತೆ ಏರಿಕೆ ಕಾಣುತ್ತಿದೆ. ಸೋಂಕು ಹರಡುವಿಕೆಯು ಇನ್ನಷ್ಟು ಹೆಚ್ಚುವುದನ್ನು ತಡೆಯುವುದಕ್ಕಾಗಿ ದೇಶದ ಕೆಲವು ಸ್ಥಳಗಳಲ್ಲಿ ಲಾಕ್ ಡೌನ್ ಮತ್ತು ಕಫ್ರ್ಯೂ ವಿಧಿಸಲಾಗಿದೆ. ಕೇರಳದಲ್ಲಿ ಸದ್ಯಕ್ಕೆ ಲಾಕ್ ಡೌನ್ ಮತ್ತು ಕಫ್ರ್ಯೂ ಹೇರಿಕೆ ಇಲ್ಲ ಎಂದು ಆಡಳಿತ ಮಂಡಳಿಗಳು ಹೇಳಿವೆ. ಅಂದರೆ, ಇಲ್ಲಿನ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂಬುದು ಇದರ ಅರ್ಥವಲ್ಲ. ಕಳೆದ ಮೂರು ವಾರಗಳಿಂದ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸೋಂಕು ಏರಿಕೆ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ಎಚ್ಚರಿಸಿದೆ. ಸೋಂಕು ಇನ್ನಷ್ಟು ವ್ಯಾಪಕವಾಗಿ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರವು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಮತ್ತೆ ಪ್ರಕಟಿಸಬೇಕಿದ್ದರೂ ಚುನಾವಣೆ ಬಂದಿರುವುದರಿಂದ ಸದ್ಯಕ್ಕಂತೂ ಅನಿಯಂತ್ರಿತ ವ್ಯವಸ್ಥೆ ಮುಂದುವರಿಯಲಿದೆ. 'ಸಭಾಂಗಣಗಳ ಒಳಗೆ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಸಂಖ್ಯೆಗೆ ಮಿತಿ ಹೇರಲಾಗಿದೆ; ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ಆದರೆ ಹೊರಾಂಗಣ ಕಾರ್ಯಕ್ರಮಗಳಿಗೆ ನಿಬರ್ಂಧ ಇಲ್ಲ' ಎಂದು ರಾಜ್ಯ ಸರ್ಕಾರ ತಿಳಿಸಿದೆ. ಲಾಕ್ಡೌನ್ ಹೇರದೇ ಇರುವ ಸರ್ಕಾರದ ನಿರ್ಧಾರ ಸರಿಯಾಗಿಯೇ ಇದೆ. ಆದರೆ, ಒಳಾಂಗಣದಲ್ಲಿ ನಡೆಯುವ ಸಭೆ, ಸಮಾರಂಭಗಳಿಗೆ ಒಂದು ನೀತಿ ಮತ್ತು ಹೊರಾಂಗಣದಲ್ಲಿ ನಡೆಯುವ ಸಭೆ, ಸಮಾರಂಭಗಳಿಗೆ ಇನ್ನೊಂದು ನೀತಿಯು ಸರ್ಕಾರದ ಗೊಂದಲವನ್ನು ಸೂಚಿಸುವುದಿಲ್ಲವೇ?
ಈಗ ಚುನಾವಣೆಯ ಬಿಸಿ ತಾರಕಕ್ಕೇರುತ್ತಿರುವುದು ಗಾಬರಿ ತರಿಸಿದೆ. ಸಾಮಾನ್ಯವಾಗಿ ಕೇರಳದ ಚುನಾವಣೆ ಎಂದರೆ ಜನಸಾಮಾನ್ಯರಿಗೆ ಅದೊಂದು ಹಬ್ಬ!. ಜನರು ಸಂಭ್ರಮದ ಗುಂಗಿನಲ್ಲಿಇರುತ್ತಾರೆ. ಹಾಗಾಗಿ, ಕೋವಿಡ್ ಮಾರ್ಗಸೂಚಿಗಳ ಪಾಲನೆಗೆ ಸಂಬಂಧಿಸಿ ಜನರು ನಿರ್ಲಕ್ಷ್ಯ ತೋರುವ ಸಾಧ್ಯತೆ ಹೆಚ್ಚು. ಕೋವಿಡ್ ಹರಡುವುದನ್ನು ತಡೆಯುವುದರ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಕಳೆದ ಬುಧವಾರ ವಿಡಿಯೊ ಸಂವಾದ ನಡೆಸಿದ್ದಾರೆ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಸೋಂಕು ವ್ಯಾಪಿಸುವುದನ್ನು ಗಮನಕ್ಕೆ ತಂದು ಎಚ್ಚರಿಸಿದ್ದಾರೆ. ಈ ನಗರಗಳಿಂದ ಸೋಂಕು ಹಳ್ಳಿಗಳಿಗೆ ವ್ಯಾಪಿಸುವುದು ಸುಲಭ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ಕೋವಿಡ್ ಆರೈಕೆ ಕೇಂದ್ರಗಳನ್ನು ಪುನರಾರಂಭಿಸುವ ಜೊತೆಯಲ್ಲೇ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿಯೂ ಆರಂಭಿಸಬೇಕು ಎಂಬ ನೆಲೆಯಲ್ಲಿ ಪ್ರಧಾನಿಯವರ ಎಚ್ಚರಿಕೆಯ ಮಾತನ್ನು ಅರ್ಥ ಮಾಡಿಕೊಳ್ಳಬಹುದು. ಚುನಾವಣಾ ಪ್ರಚಾರದ ನೆಪದಲ್ಲಿ ಜನರ ಗುಂಪುಗೂಡುವಿಕೆಯೂ ಹೆಚ್ಚಾಗುತ್ತದೆ. ಹೊರಾಂಗಣದ ಇಂತಹ ಕಾರ್ಯಕ್ರಮಗಳ ಮೇಲೆಯೂ ಕಠಿಣ ನಿಬರ್ಂಧಗಳನ್ನು ವಿಧಿಸಿ ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದಿದ್ದರೆ ಅಪಾಯ ತಪ್ಪಿದ್ದಲ್ಲ. ನಿಯಮ ಪಾಲನೆಯ ಬಗ್ಗೆ ಮಾದರಿ ಆಗಬೇಕಿರುವ ರಾಜಕಾರಣಿಗಳೇ ಬಹಿರಂಗ ಸಮಾವೇಶಗಳಲ್ಲಿ ಭಾಗವಹಿಸುತ್ತಿರುವುದು ವಿಪರ್ಯಾಸದ ಸಂಗತಿ. ಕೋವಿಡ್ ತಡೆಯ ನಿಯಮ ಪಾಲನೆಗಳಲ್ಲಿ ಅಧಿಕಾರಸ್ಥರಿಗೆ ವಿನಾಯಿತಿ ಕೊಡುವುದು ಎಳ್ಳಷ್ಟೂ ಸರಿಯಲ್ಲ. ಕೋವಿಡ್ ಲಸಿಕೆ ನೀಡುವ ವಿಚಾರದಲ್ಲಿ ಸರ್ಕಾರ ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕಾಗಿದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರ ಬಗ್ಗೆ ನಗರ - ಗ್ರಾಮೀಣ ಎನ್ನದೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ತುರ್ತು ಅಗತ್ಯವೂ ಇದೆ.