ನವದೆಹಲಿ: ಕೊರೋನಾ ಪರಿಣಾಮ ಶಾಲೆಗಳಿಗೆ ತೆರಳಲು ಸಾಧ್ಯವಾಗದೆ ಶಿಕ್ಷಣ ವಂಚಿತ ಮಕ್ಕಳಿಗೆ ನೆರವು ನೀಡುವ ಸಲುವಾಗಿ ದೆಹಲಿಯಲ್ಲಿರುವ ಪೊಲೀಸ್ ಠಾಣೆಯೊಂದು ಗ್ರಂಥಾಲಯವಾಗಿ ಪರಿವರ್ತನೆಗೊಂಡಿದೆ.
ಶಿಕ್ಷಣದಿಂದ ವಂಚಿತರಾಗಿರುವ ಕೊಳಗೇರಿ ಪ್ರದೇಶದ ಮಕ್ಕಳಿಗೆ ನೆರವಾಗುವ ಸಲುವಾಗಿ ದೆಹಲಿಯ ಆರ್'ಕೆ ಪುರಂ ನಲ್ಲಿರುವ ಪೊಲೀಸ್ ಠಾಣೆಯನ್ನು ಗ್ರಂಥಾಲಯವಾಗಿ ಪರಿವರ್ತಿಸಲಾಗಿದೆ.
ಕೊರೋನಾ ಪರಿಣಾಮ ವರ್ಷದಿಂದ ಶಾಲೆಗಳು ಬಂದ್ ಆಗಿವೆ. ಪ್ರಮುಖವಾಗಿ ಕೊಳಗೇರಿ ಪ್ರದೇಶದಲ್ಲಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ಮಕ್ಕಳು ಓದುವ ಸಲುವಾಗಿ ಠಾಣೆಯನ್ನು ಗ್ರಂಥಾಲಯವಾಗಿ ಮಾರ್ಪಡಿಸಲಾಗಿದೆ. ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೇರಿದಂತೆ ಸಾವಿರಾರು ಪುಸ್ತಕಗಳನ್ನು ಇರಿಸಲಾಗಿದೆ ಎಂದು ಆರ್'ಕೆ.ಪುರಂ ಪೊಲೀಸ್ ಠಾಣೆಯ ಅಧಿಕಾರಿ ರಾಜೇಶ್ ಶರ್ಮಾ ಅವರು ಹೇಳಿದ್ದಾರೆ.
ವ್ಯವಸ್ಥೆಗಳು ಹಾಗೂ ಬೆಂಬಲಗಳು ದೊರೆಯದ ಪರಿಣಾಮ ಮಕ್ಕಳು ಕೆಟ್ಟ ದಾರಿ ಹಿಡಿಯುವುದನ್ನು ತಡೆಯುವ ಸಲುವಾಗಿ ಗ್ರಂಥಾಲಯವನ್ನು ಸ್ಥಾಪನೆ ಮಾಡಲಾಗಿದೆ. ಎನ್'ಜಿಒಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರಾಗಲು ಮಕ್ಕಳಿಗೆ ಸಹಾಯ ಮಾಡಲಿದ್ದಾರೆ. ಗ್ರಂಥಾಲಯದಲ್ಲಿ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಸೇವೆಗಳೂ ಇದೆ. ಗ್ರಂಥಾಲಯದಲ್ಲಿ 2,300 ಪುಸ್ತಕ, 1,900 ನಿಯತಕಾಲಿಕೆಗಳು, 15 ದಿನಪತ್ರಿಕೆಗಳನ್ನು ಇರಿಸಲಾಗಿದೆ.
ಪ್ರತೀನಿತ್ಯ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೂ ಗ್ರಂಥಾಲಯ ಕಾರ್ಯನಿರ್ವಹಿಸಲಿದೆ.100 ವಿದ್ಯಾರ್ಥಿಗಳು ಒಮ್ಮೆಲೆ ಕುಳಿತು ಓದಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆನ್'ಲೈನ್ ಕ್ಲಾಸ್ ನಲ್ಲಿ ಪಾಲ್ಗೊಳ್ಳಲು ನಮಗೆ ವ್ಯವಸ್ಥೆಗಳಿರಲಿಲ್ಲ. ಇದೀಗ ಪೊಲೀಸ್ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸಿದ್ದು, ಓದುವ ವೇಳೆ ಸಂಶಯಗಳು, ಗೊಂದಲಗಳಾದರೆ ಅವರೇ ಹೇಳಿಕೊಡುತ್ತಿದ್ದಾರೆ ಎಂದು ಸೋನಾಲ್ ಎಂಬ ವಿದ್ಯಾರ್ಥಿನಿ ಗ್ರಂಥಾಲಯ ಸ್ಥಾಪನೆಗೆ ಸಂತಸ ವ್ಯಕ್ತಪಡಿಸಿದ್ದಾಳೆ.