ತಿರುವನಂತಪುರ: ರಾಜ್ಯದಲ್ಲಿ ಕೊರೊನಾ ವ್ಯಾಪಕತೆ ತೀವ್ರಗೊಳ್ಳುತ್ತಿರುವಂತೆ ಲಸಿಕೆ ಪಡೆಯಲು ಜನಸಾಮಾನ್ಯರು ಲಸಿಕಾ ಕೇಂದ್ರಗಳಿಗೆ ಢಾಂಗುಡಿಯಿಡುತ್ತಿದ್ದು, ಹೆಚ್ಚಿನ ಕೇಂದ್ರಗಳಲ್ಲೂ ಜನರು ಕಿಕ್ಕಿರಿದು ಮಾನದಂಡಗಳನ್ನು ಉಲ್ಲಂಘಿಸಿ ಸರತಿಯಲ್ಲಿ ಕಾಯುತ್ತಿರುವುದು ಆತಂಕ ಮೂಡಿಸಿದೆ. ಈ ಮಧ್ಯೆ ನಿನ್ನೆ ತಿರುವನಂತಪುರದ ಜಿಮ್ಮಿ ಜಾರ್ಜ್ ಒಳಾಂಗಣ ಕ್ರೀಡಾಂಗಣದಲ್ಲಿ ಲಸಿಕೆ ಪಡೆಯಲು ಜನರು ಕಿಕ್ಕಿರಿದು ಸೇರಿದ್ದು, ಕೊರೋನಾ ಮಾನದಂಡಗಳನ್ನು ಗಾಳಿಗೆ ತೂರಿರುವುದು ಜಗಜ್ಜಾಹೀರುಗೊಂಡಿದೆ. ಹಿರಿಯ ನಾಗರಿಕರು ಸೇರಿದಂತೆ ಮಹಿಳೆಯರೂ ಸರತಿ ಸಾಲಿನಲ್ಲಿ ಒತ್ತೊತ್ತಾಗಿ ನಿಂತಿರುವುದು ಕಂಡುಬಂದಿದ್ದು, ಗಂಟೆಗಟ್ಟಲೆ ಕಾಯುತ್ತಿದ್ದವರಲ್ಲಿ ಅನೇಕರಿಗೆ ಸಂಜೆಯಾದರೂ ಲಸಿಕೆ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ. ಸುಡುವ ಶಾಖದಿಂದ ಅನೇಕರು ದಣಿದು ಇಬ್ಬರು ಕುಸಿದುಬಿದ್ದ ಘಟನೆ ನಡೆಯಿತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಿಗ್ಗೆ 11 ಗಂಟೆಗೆ ಲಸಿಕೆ ಪಡೆಯಲು ಸಮಯ ನೀಡಲ್ಪಟ್ಟವರಿಗೆ ಬೆಳಿಗ್ಗೆ 7 ಕ್ಕೇ ಆಗಮಿಸಿ ಕ್ಯೂನಲ್ಲಿ ನಿಂತಿದ್ದರು. ಸರದಿಯಲ್ಲಿರುವ ಹೆಚ್ಚಿನ ಜನರಿಗೆ ಹತ್ತು ಮತ್ತು ಹನ್ನೊಂದು ಗಂಟೆಯ ನಡುವೆ ಸಮಯವನ್ನು ನೀಡಲಾಗಿತ್ತು. ಆದರೆ ಸಂಜೆವೇಳೆಗೂ ಅವರಿಗೆ ಲಸಿಕೆ ಏಕೆ ಲಭ್ಯವಾಗಿಲ್ಲ, ನೀಡಿದ್ದ ಸಮಯದ ಸಮೀಕರಣ ಕೈತಪ್ಪಿದೆಯೇ ಎಂಬ ಸಂಶಗಳೂ ಹುಟ್ಟಿಕೊಂಡಿದೆ.
ಸರತಿಯಲ್ಲಿರುವ ಬಹುತೇಕರಿಗೂ ಲಸಿಕೆ ವೇಳಾಪಟ್ಟಿಯಲ್ಲಿ ಸಮಯ ನೀಡಲಾಗಿಲ್ಲ. ವೇಳಾಪಟ್ಟಿಯಲ್ಲಿದ್ದವರಿಗೆ ಸಮಯದಂತೆ ಲಸಿಕೆ ನೀಡಲಾಗಿದೆ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ಸಮಜಾಯಿಷಿ ನೀಡಿದ್ದಾರೆ. ಇಂದಿನಿಂದ ಯಾವುದೇ ಗೊಂದಲಗಳಿಲ್ಲದೆ ಲಸಿಕೆ ವಿತರಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಕಾಸರಗೋಡು, ಮಂಗಲ್ಪಾಡಿ, ಬದಿಯಡ್ಕ ಕೇಂದ್ರಗಳಲ್ಲೂ ಜನರು ಗುಂಪುಗೂಡುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.


