ವಿಶ್ವಸಂಸ್ಥೆ: ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಓಮಿಕ್ರಾನ್ ಕುರಿತು ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಲಸಿಕೆ ಪಡೆಯದೇ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಓಮಿಕ್ರಾನ್ ಸೋಂಕು ತಗುಲಿದರೆ ರೋಗದ ತೀವ್ರತೆ ಕಡಿಮೆ ಇರಬಹುದು, ಆದರೆ ಬೃಹತ್ ಸಂಖ್ಯೆಯಲ್ಲಿನ ಸಣ್ಣ ಪ್ರಮಾಣವೂ ಸಹ ಆರೋಗ್ಯ ವ್ಯವಸ್ಥೆಯನ್ನು ಕುಸಿಯುವಂತೆ ಮಾಡಬಹುದು ಎಂದು ಸೌಮ್ಯ ಸ್ವಾಮಿನಾಥನ್ ಎಚ್ಚರಿಸಿದ್ದಾರೆ.
ಸಿಎನ್ ಬಿಸಿ-ಟಿವಿ 18 ಗೆ ನೀಡಿರುವ ಸಂದರ್ಶನದಲ್ಲಿ ಅವರು ಮಾತನಾಡಿದ್ದು, ಭಾರತೀಯರು ಓಮಿಕ್ರಾನ್ ಎದುರಿಸುವುದಕ್ಕೆ ಸಜ್ಜುಗೊಳ್ಳಬೇಕಾಗುತ್ತದೆ, ಆದರೆ ಆತಂಕ ಪಡಬಾರದು ಎಂದು ಹೇಳಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 309 ಹೊಸ ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,270ಕ್ಕೆ ಏರಿಕೆಯಾಗಿದೆ. ಈ ಪೈಕಿ 374 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓಮಿಕ್ರಾನ್ ಸೋಂಕಿತರಿದ್ದಾರೆ. ದೆಹಲಿ ಎರಡನೇ ಸ್ಥಾನದಲ್ಲಿದೆ. ಓಮಿಕ್ರಾನ್ ಹೆಚ್ಚಳದಿಂದ ಆಸ್ಪತ್ರೆಯಗಳಿಂದ ಹೊರರೋಗಿಗಳ ವಿಭಾಗದ ಮೇಲೆ ಹೆಚ್ಚು ಒತ್ತಡ ಉಂಟಾಗಲಿದ್ದು, ಐಸಿಯುಗಳಿಂದ ಹೊರತುಪಡಿಸಿ ಮನೆಯಲ್ಲೇ ಹೆಚ್ಚು ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ಡಾ. ಸ್ವಾಮಿನಾಥನ್ ತಿಳಿಸಿದ್ದಾರೆ. ಓಮಿಕ್ರಾನ್ ತಡೆಗೆ ಟೆಲಿ ಕನ್ಸಲ್ಟೇಷನ್ ಗಳನ್ನು ಹೆಚ್ಚಿಸುವುದಕ್ಕೆ ಸ್ವಾಮಿನಾಥನ್ ಕರೆ ನೀಡಿದ್ದಾರೆ.