ಕುಂಬಳೆ: ಕುಂಬಳೆ ಸಮೀಪದ ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಪರಿಸರದಲ್ಲಿ ಇತ್ತೀಚೆಗೆ ಸೇವಾಅಘ್ರ್ಯ ಕಾರ್ಯಕ್ರಮ ಜರಗಿತು.
ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳಿಗಾಗಿ ಮುಳಿಹುಲ್ಲು ಸಂಗ್ರಹಣಾ ಕಾರ್ಯವು ಮುಳ್ಳೇರಿಯ ಮಂಡಲದ ಯುವ ವಿಭಾಗದ ನೇತೃತ್ವದಲ್ಲಿ ಗೋಪ್ರೇಮಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು. ಮುಳ್ಳೇರಿಯ ಮಂಡಲ ಯುವ ವಿಭಾಗ ಪ್ರಧಾನ ಕೇಶವಪ್ರಕಾಶ ಮುಣ್ಚಿಕಾನ ಧ್ವಜಾರೋಹಣ ನಡೆಸಿದರು. ಗುರುವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗುಂಪೆ ವಲಯದ ಅಧ್ಯಕ್ಷ ಬಿ.ಎಲ್ ಶಂಭು ಹೆಬ್ಬಾರ್ ಶ್ರಾವಣಕೆರೆ ಸ್ವಾಗತಿಸಿದರು. ಡಾ. ವೈ.ವಿ. ಕೃಷ್ಣಮೂರ್ತಿ, ಈಶ್ವರಿ ಬೇರ್ಕಡವು,ಗುರುಮೂರ್ತಿ ಮೇಣ, ಬಾಲ ಸುಬ್ರಹ್ಮಣ್ಯ ಸರ್ಪಮೂಲೆ, ಗೀತಾಲಕ್ಮೀ ಮುಳ್ಳೇರಿಯಾ, ಪದ್ಮಾವತಿ ಡಿ ಪಿ, ಕೇಶವ ಪ್ರಸಾದ ಎಡಕ್ಕಾನ, ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ಜಗದೀಶ ಬಿ ಜಿ, ನವ ಸೇವಾ ವೃಂದದ ಕಾರ್ಯಕರ್ತರು ಸೇರಿದಂತೆ ಮುಳ್ಳೇರಿಯ ಮಂಡಲದ ಪದಾಧಿಕಾರಿಗಳು, ವಿವಿಧ ವಲಯಗಳ ಪದಾಧಿಕಾರಿಗಳು, ಸಾಮಾಜಿಕ ಧುರೀಣರು, ವಿದ್ಯಾರ್ಥಿಗಳು, ಮಾತೆಯರು ಸೇವಾ ಅಘ್ರ್ಯದ ಮೂಲಕ ಗೋವಿಗಾಗಿ ಮೇವು ಸಂಗ್ರಹಣಾ ಕಾರ್ಯದಲ್ಲಿ ಕೈ ಜೋಡಿಸಿದರು.
ಗೋಕಿಂಕರರಿಗೆ ಉಪಾಹಾರ, ಸಿಹಿತಿಂಡಿ, ಕಬ್ಬಿನಹಾಲು, ಮಜ್ಜಿಗೆನೀರು ಇತ್ಯಾದಿಗಳನ್ನು ಎಸ್.ಪಿ ಕಿಚನ್ ಪೆರ್ಲ, ಗಣೇಶ್ ಬೇಕರಿ ನೀರ್ಚಾಲ್, ಭಟ್- ಭಟ್ ಸೋದರರು, ಮುಣ್ಚಿಕಾನ ಗಣೇಶ್ ಭಟ್ ಹಾಗೂ ಯುವ ವಿಭಾಗದ ಸದಸ್ಯರು, ಬೆಂಗಳೂರು ಎಂಜಿನೀಯರ್ಸ್ ತಂಡ, ಪಳ್ಳತ್ತಡ್ಕ ಹವ್ಯಕ ವಲಯ ಮೊದಲಾದವರು ಪ್ರಾಯೋಜಕತ್ವ ವಹಿಸಿ ವಿತರಿಸಿದರು.
ಸಂಗ್ರಹವಾದ ಮುಳಿಹುಲ್ಲನ್ನು ಅಮೃತಧಾರಾ ಗೋಶಾಲೆಗೆ ಲಾರಿಯ ಮೂಲಕ ಸಾಗಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಗುಂಪೆ ವಲಯ ಯುವಪ್ರಧಾನ ವಿನಯಶಂಕರ ಚೆಕ್ಕೆಮನೆ ವಂದಿಸಿದರು.




