ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಕೂಡ್ಲು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜ.22 ರಿಂದ ಆರಂಭಗೊಂಡ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಭಾನುವಾರ ಸಂಪನ್ನಗೊಂಡಿತು.
ಭಾನುವಾರ ಶುಭಲಗ್ನದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ಜರಗಿತು. ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಇದಕ್ಕೂ ಮೊದಲು ಮುಂಜಾನೆ 5ಕ್ಕೆ ಗಣಪತಿ ಹವನ, ಕವಾಟೋದ್ಘಾಟನೆ, ಶಾಂತಿಹೋಮ ಕಲಶ, ಪ್ರಾಯಶ್ಚಿತ್ತ ಹೋಮ ಕಲಶ, ತತ್ವಹೋಮ ಕಲಶಾಭಿಷೇಕಗಳು ನೆರವೇರಿದವು. ಅವಭೃತ ಪ್ರೋಕ್ಷಣೆ ಬಳಿಕ ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಿತು.
ಭಾನುವಾರ ಸಂಜೆ ಸಮಾರೋಪ ಸಮಾರಂಭ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ. ನರೇಶ್ ರೈ ಅಧ್ಯಕ್ಷತೆಯ ವಹಿಸಿದ್ದರು. ಧಾರ್ಮಿಕ ಚಿಂತಕ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ವಸಂತ ಪೈ ಬದಿಯಡ್ಕ ಸಮಾರೋಪ ಭಾಷಣ ಮಾಡಿದರು.
ರಾತ್ರಿ 7.30ರಿಂದ ಶ್ರೀ ದೇವರಿಗೆ ರಂಗಪೂಜೆ, ದೀಪೋತ್ಸವ, ಶ್ರೀ ದೇವರ ನೃತ್ಯಬಲಿ, ಸುಡುಮದ್ದು ಪ್ರದರ್ಶನ, ರಾಜಾಂಗಣ ಪ್ರಸಾದದೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡಿತು.