HEALTH TIPS

ಚುನಾವಣೆ ಬಳಿಕ ಇಂಧನ ಬೆಲೆ ಏರಿಕೆಯಾದರೆ ಬೀದಿಗಿಳಿದು ಹೋರಾಟ: ಕಾಂಗ್ರೆಸ್

         ನವದೆಹಲಿ: ವಾಣಿಜ್ಯ ಉದ್ದೇಶಗಳಿಗೆ ಬಳಸುವ ಎಲ್‌ಪಿಜಿ ಸಿಲಿಂಡರ್ ಮತ್ತು ಹಾಲಿನ ಬೆಲೆ ಏರಿಕೆ ಕುರಿತು ಮಂಗಳವಾರ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ವಿಧಾನಸಭಾ ಚುನಾವಣೆಯ ನಂತರ ಇಂಧನ ಬೆಲೆ ಏರಿಕೆಯಾದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದೆ.

             ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಮೂಲಕ ಸರ್ಕಾರ ಜನರ ಸಂಕಷ್ಟಕ್ಕೂ ತನಗೂ ಸಂಬಂಧವಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ. ಅಲ್ಲದೆ, ಮುಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಹೆಚ್ಚಾಗಬಹುದು ಎಂದಿದ್ದಾರೆ.

           'ಮತ್ತೆ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಮಾಡುವ ಮೂಲಕ ಮೋದಿ ಸರ್ಕಾರವು, ಸಂಕಷ್ಟದಿಂದ ಬಳಲುತ್ತಿರುವ ಸಾಮಾನ್ಯ ಜನರಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಇಂದು ಎಲ್‌ಪಿಜಿ, ನಾಳೆ ಪೆಟ್ರೋಲ್-ಡೀಸೆಲ್' ಎಂದು #KiskeAchheDin ಎಂಬ ಹ್ಯಾಷ್‌ಟ್ಯಾಗ್ ಹಾಕಿ ರಾಹುಲ್ ಟ್ವೀಟ್ ಮಾಡಿದ್ದಾರೆ.

          ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಮಾತನಾಡಿ, 'ಮಾರ್ಚ್ ಮೊದಲ ದಿನದಂದು ಹಾಲಿನ ದರವನ್ನು ತಲಾ ₹ 2 ಗಳಷ್ಟು ಹೆಚ್ಚಿಸಲಾಗಿದೆ. ಇದರಿಂದ ಮಕ್ಕಳು ಮತ್ತು ಮಹಿಳೆಯರಿಗೆ ಹೊಡೆತ ಬಿದ್ದಿದೆ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ದೆಹಲಿಯಲ್ಲಿ ₹ 105 ಹೆಚ್ಚಿಸಿದ್ದು, ಇದರ ಬೆಲೆ ₹ 2000 ದಾಟಿದೆ. ಚುನಾವಣೆ ಮುಗಿದ ನಂತರ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಕೂಡ ₹ 27ರಷ್ಟು ಹೆಚ್ಚಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

'ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸೋಲಿನ ಭಯ ಶುರುವಾಗಿದೆ. ಹೀಗಾಗಿ ವಿಧಾನಸಭಾ ಚುನಾವಣೆಯ ಮಧ್ಯಭಾಗದಲ್ಲೇ ಉತ್ತರ ಪ್ರದೇಶದಲ್ಲಿಯೂ ಎಲ್‌ಪಿಜಿ ಬೆಲೆ ಏರಿಕೆ ಮಾಡಿದೆ ಮತ್ತು ಬೆಲೆ ಏರಿಕೆ ವಿಚಾರವಾಗಿ ಆಡಳಿತಾರೂಢ ಬಿಜೆಪಿಗೆ ಜನರು ತಕ್ಕ ಶಿಕ್ಷೆ ನೀಡುತ್ತಾರೆ' ಎಂದಿದ್ದಾರೆ.

         'ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯನ್ನು ಕಾಂಗ್ರೆಸ್ ಯಾವಾಗಲೂ ಗಂಭೀರವಾಗಿ ಪರಿಗಣಿಸಿದೆ. ಚುನಾವಣೆ ಮುಗಿದ ಬಳಿಕ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆ ಏರಿಕೆಯಾದರೆ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ' ಎಂದರು.

              ಮಾರ್ಚ್ 7 ರಂದು ಪಂಚರಾಜ್ಯಗಳ ಚುನಾವಣೆ ಮುಕ್ತಾಯವಾಗಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries