ವಿಷು ಅಥವಾ ಬಿಷು ಶ್ರೀಕೃಷ್ಣನ ಆರಾಧಗೆ ಮೀಸಲಾಗಿರುವ ಹಬ್ಬವಾಗಿದ್ದು ಸೌರಮಾನ ಯುಗಾದಿಯಂದು ವಿಷು ಹಬ್ಬವನ್ನು ಆಚರಿಸಲಾಗುವುದು. ಈ ವರ್ಷ ಸೌರಮಾನ ಯುಗಾದಿ ಏಪ್ರಿಲ್ 15ಕ್ಕೆ ಬಂದಿದೆ.
ಕರ್ನಾಟಕದ ಕೆಲವು ಕಡೆ ವಿಷು ಆಚರಿಸಲಾಗುವುದು, ಅಂದರೆ ದಕ್ಷಿಣ ಕನ್ನಡ -ತುಳು ನಾಡಿನಲ್ಲಿ ಹೊಸ ವರ್ಷವೆಂದು ಆಚರಿಸಲಾಗುವುದು. ಕೇರಳದಲ್ಲಿ ವಿಷು ತುಂಬಾ ದೊಡ್ಡ ಆಚರಣೆಯಾಗಿದೆ. ತಮಿಳು ನಾಡಿನಲ್ಲಿಯೂ ವಿಷು ಹಬ್ಬವನ್ನು ಆಚರಿಸಲಾಗುವುದು.
ವಿಷುವಿನ ಮಹತ್ವ
ವಿಷು ವಸಂತ ಋತುವಿನ ಕಾಲದಲ್ಲಿ ಆಚರಿಸಲಾಗುವುದು. ಶ್ರೀ ವಿಷ್ಣು ನರಕಾಸುರನನ್ನು ವಧಿಸಿದ ದಿನದ ಸಂಕೇತವಾಗಿ ವಿಷುವನ್ನು ಆಚರಿಸಲಾಗುವುದು. ವಿಷು ದಿನ ವಿಷು ಕಣಿ ಹಾಗೂ ವಿಷು ಕೈ ನೀಟ ತುಂಬಾನೇ ವಿಶೇಷವಾಗಿದೆ.
ವಿಷು ಕಣಿ ವಿಶೇಷತೆ
ವಿಷು ಹಬ್ಬದ ದಿನ ವಿಷು ಕಣಿ ಇಡಲಾಗುವುದು. ಈ ದಿನ ಒಂದು ತಟ್ಟೆಯಲ್ಲಿ ಹೂ, ಫಲ, ಚಿನ್ನ, ಬೆಳ್ಳಿ, ನಾಣ್ಯ , ಹೊಸ ಬಟ್ಟೆ, ಕನ್ನಡಿ ಇಟ್ಟು, ಹೊನ್ನೆ ಹೂವನ್ನು ಇಟ್ಟು ಶ್ರೀಕೃಷ್ಣನ ಫೋಟೋ ಮುಂದೆ ಇಟ್ಟು ಬೆಳಗ್ಗೆ ಎದ್ದು ಆ ವಿಷು ಕಣಿ ಮೊದಲು ನೋಡಲಾಗುವುದು. ಮನೆಯಲ್ಲಿ ಮಕ್ಕಳನ್ನು ಹಿರಿಯರು ಕಣ್ಣು ಮುಚ್ಚಿ ಕರೆದುಕೊಂಡು ಬಂದು ಮೊದಲು ವಿಷು ಕಣಿ ದರ್ಶನ ಮಾಡಿಸುತ್ತಾರೆ. ವಿಷು ಕಣಿ ನೋಡುವುದರಿಂದ ವರ್ಷದ ಆರಂಭ ಶುಭವಾಗುವುದು ಎಂಬ ನಂಬಿಕೆ. ವಿಷ್ಣು ಕನಿಯನ್ನು ಮೊದಲು ನೋಡಬೇಕು. ಯಾಕೆಂದರೆ ಹೀಗೆ ಮಾಡುವ ಪರಿಣಾಮ ವರ್ಷವಿಡಿ ಅವರಿಗೆ ಒಳ್ಳೆಯ ಅದೃಷ್ಟ ಮತ್ತು ಸಮೃದ್ಧಿ ಸಿಗುವುದು. ಇದರಿಂದಾಗಿ ವಿಷ್ಣು ಕನಿಯನ್ನು ತುಂಬಾ ಎಚ್ಚರಿಕೆಯಿಂದ ಇಡಲಾಗುತ್ತದೆ ಮತ್ತು ಧನಾತ್ಮಕತೆ ಉಂಟಾಗುವಂತೆ ಇದನ್ನು ರಚಿಸಲಾಗುತ್ತದೆ.
ಇನ್ನು ಚಿಕ್ಕ ಮಕ್ಕಳು ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ, ಆಗ ಅವರಿಗೆ ಹಣವನ್ನು ನೀಡಲಾಗುವುದು, ಇದನ್ನು ಕೈ ನೀಟ ಎಂದು ಕರೆಯಲಾಗುವುದು.