ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯನ್ನು ಬೆಚ್ಚಿ ಬೀಳಿಸಿರುವ ಶೃದ್ಧಾ ವಾಲ್ಕರ್ ಎಂಬ ಮುಂಬೈ ಮೂಲದ ಯುವತಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೋವೈದ್ಯರು ಬೆಳಕು ಚೆಲ್ಲಿದ್ದಾರೆ. ಇತ್ತೀಚೆಗೆ ಸಂವಹನದ ಕೊರತೆ ಹಾಗೂ ಹಿಂಸಾತ್ಮಕ ಚಿತ್ರಗಳನ್ನು ವೀಕ್ಷಿಸಿ ಕ್ರೈಂನಲ್ಲಿ ಪಾಲ್ಗೊಳ್ಳುವ ಸಂಗತಿ ಹೆಚ್ಚಾಗುತ್ತಿದೆ ಎಂದು ಮನೋವೈದ್ಯರು ತಿಳಿಸಿದ್ದಾರೆ.
ಮುಂಬೈ ಮೂಲದ ಅಫ್ತಾಬ್ ಪೂನವಾಲಾ ಎಂಬಾತ 26 ವರ್ಷದ ಶೃದ್ಧಾ ಎಂಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ನಗರದ ತುಂಬ ಚೆಲ್ಲಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ತಾಬ್ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಟಿಐ ಸುದ್ದಿ ಸಂಸ್ಥೆ ಮಾತನಾಡಿರುವ ಮನೋವೈದ್ಯೆ ದೀಪ್ತಿ ಪುರಾಣಿಕ್ ಅವರು, 'ಶೃದ್ಧಾ ಕೊಲೆ ಪ್ರಕರಣದಲ್ಲಿ ವಿಪರೀತ ಕೋಪ, ಸಂವಹನದ ಕೊರತೆ. ಅಪರಾಧವನ್ನು ಸರಳವಾಗಿ ನೋಡುವಂತದ್ದು ಹಾಗೂ ಕ್ರೈಂ ಸಿನಿಮಾಗಳ ವೀಕ್ಷಣೆಯ ಪ್ರಭಾವ ಎದ್ದು ಕಾಣುತ್ತಿದೆ' ಎಂದು ತಿಳಿಸಿದ್ದಾರೆ.
'ಅಲ್ಲದೇ ಇಂತಹ ಮನಸ್ಥಿತಿಗೆ ಇಂತದೇ ಒಂದು ಕಾರಣ ಇರುತ್ತದೆ ಎಂದು ನಾವು ನಿರ್ಧಿಷ್ಟವಾಗಿ ಕಂಡುಕೊಳ್ಳುವುದಕ್ಕೆ ಆಗುವುದಿಲ್ಲ. ತಮ್ಮ ಸಂಗಾತಿಗಳನ್ನು ಕೊಲೆ ಮಾಡುವವರು, ಸಮಾಜದಲ್ಲಿ ಬೇರೆಯವನ್ನು ನೋಡಿ ಸಹಿಷ್ಣುತೆಯನ್ನು ಕಲಿತುಕೊಳ್ಳಬೇಕು' ಎಂದು ಅವರು ತಿಳಿಸಿದ್ದಾರೆ.
'ಇಂದಿನ ದಿನಮಾನದಲ್ಲಿ ಅದರಲ್ಲೂ ಯುವಕರಲ್ಲಿ ತಾಳ್ಮೆ ಸಮಾಧಾನ ಕಡಿಮೆಯಾಗುತ್ತಿದೆ. ಮಧುರ ಸಂವಹನವನ್ನು ನಿರ್ಲಕ್ಷ್ಯಿಸುತ್ತಿದ್ದಾರೆ. ಕುಳಿತು ಮಾತನಾಡುವ ಬುದ್ಧಿ ಹೋಗುತ್ತಿದೆ. ಬೇಗನೆ ಹತಾಶೆ, ಒತ್ತಡಕ್ಕೆ ಒಳಗಾಗುತ್ತಿದ್ದಾರೆ' ಎಂದು ದೀಪ್ತಿ ಹೇಳುತ್ತಾರೆ.
'ಹಿಂಸಾತ್ಮಕ ಸಿನಿಮಾ, ಟಿವಿ, ಒಟಿಟಿ ಶೋಗಳು ಅಪರಾಧ ಮಾಡಲು ಯುವಕರನ್ನು ಪ್ರೇರಿಪಿಸುತ್ತಿವೆ' ಎಂದು ಅವರು ಆರೋಪಿಸಿದ್ದಾರೆ.
ಹಲವು ದಿನಗಳಿಂದ ಸಂಪರ್ಕಕ್ಕೆ ಸಿಕ್ಕಿರದಿದ್ದ ಶ್ರದ್ಧಾ ಇದೀಗ ಅಮಾನುಷವಾಗಿ ಕೊಲೆಯಾಗಿರುವ ವಿಚಾರವನ್ನು ಕೇಳಿ ಆಘಾತವಾಗಿದೆ. ಈ ಕೊಲೆಯ ಹಿಂದೆ ದೊಡ್ಡ ಷಡ್ಯಂತ್ರವಿದೆ. ಪೊಲೀಸರು ಶ್ರದ್ಧಾಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಕೆಯ ಸ್ನೇಹಿತರು ಒತ್ತಾಯಿಸಿದ್ದಾರೆ.
ಮೇ 18ರಂದು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಅಫ್ತಾಬ್ ಪೂನವಾಲ ಪ್ರೇಯಸಿ ಶ್ರದ್ಧಾ ವಾಲ್ಕರ್ ಅವರ ಕತ್ತುಸೀಳಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು ಸುಮಾರು 35 ಭಾಗಗಳಾಗಿ ಕತ್ತರಿಸಿ ಮೂರು ವಾರಗಳ ಕಾಲ ಫ್ರಿಡ್ಜ್ನಲ್ಲಿಟ್ಟು, ನಗರದಾದ್ಯಂತ ಹಲವು ದಿನಗಳ ಕಾಲ ಬಿಡಿ ಬಿಡಿಯಾಗಿ ಎಸೆದಿದ್ದ.