ನಾಗ್ಪುರ: ಅಣು ವಿದ್ಯುತ್ ಸ್ಥಾವರಗಳ ನಿರ್ಮಾಣದಲ್ಲಿ ಸಾರ್ವಜನಿಕ ಉದ್ದಿಮೆಗಳ ವಲಯ ಕೂಡಾ ಪಾಲ್ಗೊಳ್ಳುವಂತೆ ಮಾಡಲು ಭಾರತ ಸನ್ನದ್ಧವಾಗಿದೆ. 2070ರ ವೇಳೆಗೆ ಇಂಗಾಲ ಸೂಸುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಗುರಿ ಸಾಧಿಸುವ ನಿಟ್ಟಿನಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.
ನಾಗ್ಪುರದಲ್ಲಿ ಆಯೋಜನೆ ಆಗಿರುವ 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ವೇಳೆ ಸುದ್ದಿಗಾರರ ಎದುರು ಮಾತನಾಡಿದ ಅವರು, ಅಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಪರಮಾಣು ವಲಯಕ್ಕೆ ಸಾರ್ವಜನಿಕ ಉದ್ದಿಮೆಗಳ ವಲಯದ ಜೊತೆ ಜಂಟಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಲಾಗುವುದು. ಪರಮಾಣು ಶಕ್ತಿ ಕಾಯ್ದೆಗೆ 2015ರಲ್ಲಿ ತಿದ್ದುಪಡಿ ತಂದಿದ್ದ ಕೇಂದ್ರ ಸರ್ಕಾರವು ಭಾರತೀಯ ಪರಮಾಣು ಶಕ್ತಿ ನಿಗಮ ನಿಯಮಿತ (ಎನ್ಪಿಸಿಐಎಲ್) ಮತ್ತು ಸಾರ್ವಜನಿಕ ಉದ್ದಿಮೆಗಳಿಗೆ ಜಂಟಿಯಾಗಿ ಅಣು ವಿದ್ಯುತ್ ಸ್ಥಾವರ ನಿರ್ಮಿಸಲು ಅವಕಾಶ ನೀಡಿತ್ತು ಎಂದರು.