ನವದೆಹಲಿ: ಪದೇ ಪದೇ ಪೀಠದ ಮುಂದೆ ಬಂದು ಘೋಷಣೆಗಳನ್ನು ಕೂಗಿ ರಾಜ್ಯಸಭೆಯ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ದಂತೆ ಕಾಂಗ್ರೆಸ್ನ 9 ಮತ್ತು ಎಎಪಿಯ ಮೂವರು ಸಂಸದರ ವಿರುದ್ಧ ತನಿಖೆ ನಡೆಸುವಂತೆ ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರು ಸಂಸತ್ತಿನ ಹಕ್ಕು ಬಾಧ್ಯತಾ ಸಮಿತಿಗೆ ಸೂಚಿಸಿದ್ದಾರೆ.
ಈ ಸಂಸದರು ರಾಜ್ಯಸಭೆಯ ಶಿಷ್ಟಾಚಾರವನ್ನು ಉಲ್ಲಂಘಿಸಿ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ, ಪದೇ ಪದೇ ಕಲಾಪ ಮುಂದೂಡುವಂತಾಯಿತು. ಹೀಗಾಗಿ ತನಿಖೆ ನಡೆಸುವಂತೆ ಸಭಾಪತಿ ಸೂಚನೆ ನೀಡಿದ್ದಾರೆ ಎಂದು ರಾಜ್ಯಸಭೆಯ ಬುಲೆಟಿನ್ ಹೇಳಿದೆ. ಕಾಂಗ್ರೆಸ್ನ ಸಂಸದರಾದ ಎಲ್. ಹನುಮಂತಯ್ಯ, ಶಕ್ತಿ ಸಿನ್ಹ ಗೋಹಿಲ್, ನರನ್ಭಾಯ್ ಜೆ ರಥ್ವಾ, ಸೈಯದ್ ನಾಸಿರ್ ಹುಸೇನ್, ಕುಮಾರ್ ಕೇತ್ಕರ್, ಇಮ್ರಾನ್ ಪ್ರಾತಾಪ್ಗರ್ಹಿ, ಫುಲೊ ದೇವಿ ನೇತಮ್, ಜೆಬಿ ಮಾಥ್ ಹಿಶಾಮ್, ರಂಜಿತ್ ರಂಜನ್ ಹಾಗೂ ಎಎಪಿಯ ಸಂಜಯ್ ಸಿಂಗ್, ಸುಶಿಲ್ ಕುಮಾರ್ ಗುಪ್ತಾ ಮತ್ತು ಸಂದೀಪ್ ಕುಮಾರ್ ಪಾಠಕ್ ವಿರುದ್ಧ ತನಿಖೆಗೆ ಸೂಚಿಸಲಾಗಿದೆ.