HEALTH TIPS

ಅದಾನಿ ಉದ್ಯಮದ ಬೆಳವಣಿಗೆ: ಕೇಂದ್ರಕ್ಕೆ ಬಿರುಗಾಳಿ ಕಂಟಕ ತಂದೀತು -ಅಮೆರಿಕ ಉದ್ಯಮಿ

 

           ನವದೆಹಲಿ: 'ಗೌತಮ್‌ ಅದಾನಿ ನೇತೃತ್ವದ ಸಮೂಹದ ಉದ್ಯಮದಲ್ಲಿ ಈಗ ಎದ್ದಿರುವ ಬಿರುಗಾಳಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನೇ ದುರ್ಬಲಗೊಳಿಸಬಹುದು' ಎಂದು ಅಮೆರಿಕದ ಶ್ರೀಮಂತ ಉದ್ಯಮಿ ಜಾರ್ಜ್‌ ಸೊರೊಸ್‌ ಹೇಳಿದ್ದಾರೆ.

         ತೀವ್ರ ಚರ್ಚೆಗೆ ಗ್ರಾಸವಾಗಿರುವ ಅದಾನಿ ಉದ್ಯಮ ಕುರಿತ ಬೆಳವಣಿಗೆಗೆ ಸಂಬಂಧಿಸಿದ ಈ ಹೇಳಿಕೆಗೆ ಆಡಳಿತರೂಢ ಬಿಜೆಪಿ ಕಟುವಾಗಿ ಟೀಕಿಸಿದೆ. 'ಅದಾನಿ ಸಮೂಹದ ಬೆಳವಣಿಗೆ, ಜಾರ್ಜ್‌ಗೆ ಸಂಬಂಧಪಡದ ವಿಷಯ' ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

                 ಷೇರು ಮೌಲ್ಯದ ನಿಗದಿಯಲ್ಲಿ ವಂಚನೆ ಕುರಿತಂತೆ ಅಮೆರಿಕ ಮೂಲದ ಹಿಂಡನ್‌ಬರ್ಗ್‌ ರಿಸರ್ಚ್‌ ವರದಿಯ ಬಳಿಕ ಅದಾನಿ ಸಮೂಹವು ತೀವ್ರ ಒತ್ತಡದಲ್ಲಿದೆ. ಇನ್ನೊಂದೆಡೆ, ಈ ವರದಿಯ ಆರೋಪವನ್ನು ಸಮೂಹವು 'ಆಧಾರರಹಿತ' ಎಂದು ನಿರಾಕರಿಸಿದೆ.

                  ಮ್ಯುನಿಚ್‌ ಸೆಕ್ಯೂರಿಟಿ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಸೊರೊಸ್‌ ಅವರು, 'ಅದಾನಿ ಸಮೂಹದ ಬೆಳವಣಿಗೆಗಳಿಗೆ ಸಂಬಂಧಿಸಿ ವಿದೇಶಿ ಹೂಡಿಕೆದಾರರ ಪ್ರಶ್ನೆಗಳು ಮತ್ತು ಸಂಸತ್ತಿನಲ್ಲಿ ವ್ಯಕ್ತವಾಗಿರುವ ಆರೋಪ ಕುರಿತಂತೆ ಮೋದಿ ಅವರು 'ಉತ್ತರಿಸಲೇಬೇಕು' ಎಂದಿದ್ದಾರೆ.

                 'ಪ್ರಧಾನಿ ಮೋದಿ ಮತ್ತು ಉದ್ಯಮಿ ಅದಾನಿ ಆತ್ಮೀಯರು. ಅವರ ಹಣೆಬರಹ ಪರಸ್ಪರ ಬೆಸೆದುಕೊಂಡಿದೆ. ಷೇರು ಮೌಲ್ಯ ವಿರೂಪಗೊಳಿಸಿದ ಆರೋಪ ಆದಾನಿ ಮೇಲಿದೆ. ಅವರ ಕಂಪನಿಯ ಷೇರುಗಳ ಮೌಲ್ಯ ಕಾಗದದ ಮನೆಯಂತೆ ಕುಸಿದಿದೆ. ಈ ಬೆಳವಣಿಗೆ ಕುರಿತು ಮೋದಿ ಮೌನ ತಳೆದಿದ್ದಾರೆ. ಆದರೆ, ಅವರು ಉತ್ತರಿಸಲೇಬೇಕಿದೆ' ಎಂದು ಸೊರೊಸ್‌ ಹೇಳಿದರು.


                               ಸಂಬಂಧಪಡದ ವಿಷಯ: ಜೈರಾಮ್ ರಮೇಶ್‌
             
ಅದಾನಿ ಸಮೂಹದ ಬೆಳವಣಿಗೆಯು ಭಾರತದಲ್ಲಿ ಸರ್ಕಾರದ ಬದಲಾವಣೆಗೆ ಕಾರಣವಾಗಲಿದೆಯೇ ಎಂಬುದು ಪೂರ್ಣವಾಗಿ ಕಾಂಗ್ರೆಸ್‌ ಮತ್ತು ಇತರೆ ವಿರೋಧಪಕ್ಷಗಳಿಗೆ ಸಂಬಂಧಿಸಿದ್ದಾಗಿದೆ. ಇದು, ಉದ್ಯಮಿ ಜಾರ್ಜ್‌ ಸೊರೊಸ್‌ ಅವರಿಗೆ ಸಂಬಂಧಿಸಿದ್ದಲ್ಲ ಎಂದು ಕಾಂಗ್ರೆಸ್ ಪಕ್ಷ ಪ್ರತಿಕ್ರಿಯಿಸಿದೆ.

                 ಸೊರೊಸ್‌ ಅವರ ಹೇಳಿಕೆ ಹಿನ್ನೆಲೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ಟ್ವೀಟ್ ಮಾಡಿದ್ದು, ಅದಾನಿ ಸಮೂಹದ ಬೆಳವಣಿಗೆ ಆಡಳಿತ ಬದಲಾವಣೆಗೆ ಕಾರಣವಾಗಲಿದೆಯೇ ಎಂಬುದು ಸಂಪೂರ್ಣವಾಗಿ ಆಂತರಿಕವಾದುದು ಎಂದು ಪ್ರತಿಪಾದಿಸಿದ್ದಾರೆ.

                  ನಮ್ಮ ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸಲು ನೆಹರೂ ಪರಂಪರೆಯೂ ಸೊರೊಸ್‌ ಅಂತಹವರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

                         ವಿದೇಶಿ ಶಕ್ತಿ ಸೋಲಿಸುತ್ತೇವೆ: ಸ್ಮೃತಿ ಇರಾನಿ
              
: 'ಸೊರೊಸ್‌ ಅವರು ಪ್ರಧಾನಿ ಮೋದಿ ಅವರನ್ನಷ್ಟೇ ಅಲ್ಲ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಗುರಿಯಾಗಿಸಿ ಟೀಕಿಸುತ್ತಿದ್ದಾರೆ' ಎಂದು ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿದೆ.

                    ಭಾರತದ ವಿರುದ್ಧ ಯುದ್ಧದ ಒತ್ತಡ ಹೇರಲಾಗುತ್ತಿದೆ. ಈ ಒತ್ತಡ ಮತ್ತು ಭಾರತದ ಹಿತಾಸಕ್ತಿಯ ನಡುವೆ ಮೋದಿ ಇದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಪ್ರತಿಕ್ರಿಯಿಸಿದರು.

                   'ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳುಗೆಡವಲು ಸೊರೊಸ್ ಬಯಸಿದ್ದಾರೆ. ತಾವು ಬಯಸಿದ ಕೆಲವರು ಇಲ್ಲಿ ಸರ್ಕಾರ ರಚಿಸಬೇಕು ಎಂದು ಅವರು ಬಯಸುತ್ತಿದ್ದಾರೆ. ನಾವು ಇಂಥ ವಿದೇಶಿ ಶಕ್ತಿಗಳನ್ನು ಹಿಂದೆಯೂ ಸೋಲಿಸಿದ್ದೇವೆ. ಮತ್ತೆ ಸೋಲಿಸಲಿದ್ದೇವೆ' ಎಂದು ಅವರು ಪ್ರತಿಪಾದಿಸಿದ್ದಾರೆ.

                  'ನಾನು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗುರಿಯಾಗಿಸಿ ದಾಳಿ ಮಾಡುತ್ತೇನೆ. ಮೋದಿ ಅವರೇ ನನ್ನ ದಾಳಿಯ ಕೇಂದ್ರ ಬಿಂದುವಾಗಿರುತ್ತಾರೆ ಎಂದು ಸೊರೊಸ್‌ ಹೇಳಿದ್ದಾರೆ. ಅವರು ಭಾರತದ ಹಿತಾಸಕ್ತಿಯ ರಕ್ಷಣೆಯಲ್ಲ, ತನ್ನ ಹಿತಾಸಕ್ತಿ ರಕ್ಷಿಸುವವರು ಕೇಂದ್ರದಲ್ಲಿ ಇರಬೇಕು ಎಂದು ಬಯಸುತ್ತಾರೆ' ಎಂದಿದ್ದಾರೆ.

               ಆದರೆ, ತಮ್ಮ ಈ ಮಾತುಗಳಿಗೆ ಪೂರಕವಾಗಿ ಅವರು ಯಾವುದೇ ಅಂಶವನ್ನು ಉಲ್ಲೇಖಿಸಲಿಲ್ಲ. ಈ ಬೆಳವಣಿಗೆಯು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮೋದಿ ಅವರು ಹೊಂದಿರುವ ಹಿಡಿತ ದುರ್ಬಲಗೊಳಿಸಿದೆ ಎಂದು ಅವರು ಹೇಳಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries