ಉಪ್ಪಳ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರ ವಂಚನೆಯ ಪ್ರತೀಕ, ತನ್ನ ಕುಟುಂಬದ ಶ್ರೇಯಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತಿದೆ, ಕಟ್ಟಡ ತೆರಿಗೆ, ಜಮೀನು ತೆರಿಗೆ, ಸರ್ಕಾರದ ಅನುಮತಿಗಾಗಿ ಇರುವ ಎಲ್ಲ ತೆರಿಗೆಗಳನ್ನು ಸದ್ದಿಲದೆ ಏರಿಸಲಾಗಿದೆ. ಬಡವರು ಇನ್ನು ಕೇರಳದಲ್ಲಿ ಮನೆ ಕಟ್ಟಲು ಸಾವಿರಾರು ರೂ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 700 ರೂ ಇದ್ದ ತೆರಿಗೆ 4000 ರೂ.ಗೆ ಏರಿಕೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ ಸರ್ಕಾರದ ವಂಚನೆಯನ್ನು ಖಂಡಿಸಿದರು.
ಎಡರಂಗ ಮತ್ತು ಬಲರಂಗ ಜಂಟಿಯಾಗಿ ಆಡಳಿತ ನಡೆಸುವ ಪೈವಳಿಕೆ, ಮಿಂಜ, ವರ್ಕಾಡಿಗಳಲ್ಲಿ ಸರ್ಕಾರದ ಯೋಜನೆ ಜಾರಿ ಮಾಡಿ ಜನರನ್ನು ಲೂಟಿ ಮಾಡುತ್ತಿದೆ ಎಂದು ಅವರು ಹೇಳಿದರು.
ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ ಹಮ್ಮಿಕೊಂಡ ಪಂಚಾಯತ್ ಕಚೇರಿ ಮಾರ್ಚ್ ನಲ್ಲಿ ಪ್ರದಾನ ಭಾಷಣಗೈದು ಅವರು ಟೀಕೆ ವ್ಯಕ್ತಪಡಿಸಿದರು.
ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಆದರ್ಶ್ ಬಿಎಂ ಕಾರ್ಯಕ್ರಮ ಉದ್ಘಾಟಿಸಿ ಸರ್ಕಾರದ ದುರಾಡಳಿತವನ್ನು ವಿವರಿಸಿದರು. ಸರ್ಕಾರದ ಯೋಜನೆಗಳೆಲ್ಲ ತನ್ನ ಕುಟುಂಬ ಅಭಿವೃದ್ಧಿಗಾಗಿ ಎಂದು ಅವರು ಲೇವಡಿ ಮಾಡಿದರು. ಕೇರಳದ ಯಾವುದೇ ಹಗರಣದ ಮೂಲ ಪಿಣರಾಯಿಯ ಅಂಗಳ ಎಂದು ಅವರು ಹೇಳಿದರು.
ಲೋಕೇಶ್ ನೋಂಡ ಅಧ್ಯಕ್ಷತೆ ವಹಿಸಿದ್ದರು. ಮಣಿಕಂಠ ರೈ, ಎ.ಕೆ. ಕಯ್ಯಾರು, ಸದಾಶಿವ ಚೇರಾಲ್, ಸುಬ್ರಹ್ಮಣ್ಯ ಭಟ್, ಜಯಲಕ್ಷ್ಮಿ ಭಟ್, ಪುಷ್ಪಲಕ್ಷ್ಮಿ, ಸೀತಾರಾಮ, ಕೀರ್ತಿ ಭಟ್ ಮೊದಲಾದವರು ನೇತೃತ್ವ ನೀಡಿದರು. ಸತ್ಯಶಂಕರ ಸ್ವಾಗತಿಸಿ, ವಂದಿಸಿದರು.