ಗುವಾಹಟಿ: ಮಣಿಪುರದ ಕೆಲವೆಡೆ ಹಿಂಸಾಚಾರ ಮುಂದುವರದಿದೆ. ಬಿಷ್ಣುಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಬ್ಬ ಯುವಕ ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ.
ಮೊಯಿರಾಂಗ್ನ ಪರಿಹಾರ ಶಿಬಿರದ ಬಳಿ ಅಪರಿಚಿತ ದುಷ್ಕರ್ಮಿಗಳ ಹಾರಿಸಿದ ಗುಂಡಿಗೆ ಒಬ್ಬ ಯುವಕ ಗಾಯಗೊಂಡಿದ್ದು, ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಗುಂಡಿನ ದಾಳಿಯಿಂದ ಕೋಪಗೊಂಡ ನಿರ್ದಿಷ್ಟ ಸಮುದಾಯದ ಜನರು ಕೆಲ ಮನೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ಪ್ರತಿಭಟನಕಾರರು ಬುಧವಾರ ಮಧ್ಯಾಹ್ನ ಬಿಷ್ಣುಪುರದ ಬಿಜೆಪಿಯ ಶಾಸಕ, ಸಚಿವ ಸಚಿವ ಗೋವಿಂದಸ್ ಕೊಂತೌಜಮ್ ಅವರ ನಿವಾಸಕ್ಕೆ ನುಗ್ಗಿ, ಮನೆಯನ್ನು ಧ್ವಂಸಗೊಳಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸೇನೆ ಮತ್ತು ಇತರ ಭದ್ರತಾ ಪಡೆಗಳು ಹರಸಾಹಸಪಟ್ಟವು ಎಂದು ವರದಿಯಾಗಿದೆ.
ಈ ಘಟನೆಯು ಮೈತೇಯಿ ಸಮುದಾಯದವರು ಹೆಚ್ಚಿರುವ ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳ ಕೆಲ ಸ್ಥಳಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟುಮಾಡಿದೆ ಎಂದು ಮೂಲಗಳು ತಿಳಿಸಿವೆ.
ಕರ್ಫ್ಯೂ ಸಡಿಲಿಕೆ ರದ್ದು:
ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರಿದಿರುವ ಕಾರಣ ಬಿಷ್ಣುಪುರ, ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಯ ಜಿಲ್ಲಾಡಳಿತಗಳು ಕರ್ಫ್ಯೂ ಸಡಿಲಿಕೆಯನ್ನು ರದ್ದುಪಡಿಸಿವೆ. ಈ ಮೊದಲು ಮುಂಜಾನೆ 5ರಿಂದ ಸಂಜೆ 4 ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು.
ಬುಡಕಟ್ಟು ಸಮುದಾಯ ಪ್ರಾಬಲ್ಯ ಹೊಂದಿರುವ ಚುರಾಚಂದ್ಪುರ ಜಿಲ್ಲೆಯಲ್ಲಿ ಮೇ 3 ರಂದು ಹಿಂಸಾಚಾರ ನಡೆದಾಗಿನಿಂದ ಮಣಿಪುರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದೆ. ಬಹುಸಂಖ್ಯಾತ ಮೈತೇಯಿ ಮತ್ತು ಕೂಕಿ ಬುಡಕಟ್ಟು ಸಮುದಾಯಗಳ ನಡುವಿನ ಘರ್ಷಣೆಯಿಂದ ರಾಜ್ಯದಲ್ಲಿ 74 ಜನರು ಮೃತಪಟ್ಟಿದ್ದು, ಸುಮಾರು 2,000 ಮನೆಗಳು ಭಸ್ಮವಾಗಿವೆ. 35,000ಕ್ಕೂ ಹೆಚ್ಚು ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
ಅಮಿತ್ ಶಾಗೆ ಪತ್ರ:
ಮಣಿಪುರದಲ್ಲಿ ಕುಕಿ-ಹ್ಮಾರ್-ಜೋಮಿ ಪ್ರಾಬಲ್ಯವಿರುವ ಪ್ರದೇಶಗಳಿಗೆ 'ಪ್ರತ್ಯೇಕ ಆಡಳಿತ' ವ್ಯವಸ್ಥೆ ಕಲ್ಪಿಸುವಂತೆ ಚುರಾಚಂದ್ಪುರದ ಬುಡಕಟ್ಟು ಸಂಸ್ಥೆಗಳ ಒಕ್ಕೂಟ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಮನವಿ ಮಾಡಿದೆ.
ಅಲ್ಲದೆ ಗಲಭೆಯಲ್ಲಿ ಮೃತಪಟ್ಟಿರುವ ಕುಕಿಗಳ ಅಂತಿಮ ಸಂಸ್ಕಾರಕ್ಕೆ ಅನುಕೂಲ ಮಾಡಿಕೊಡಬೇಕು. ಸೂಕ್ತ ಪರಿಹಾರ ಒದಗಿಸಬೇಕು. ಹಿಂಸಾಚಾರ ಪೀಡಿತ ವ್ಯಕ್ತಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕು ಎಂದು ಕೇಂದ್ರ ಸರ್ಕಾರವನ್ನು ಒಕ್ಕೂಟ ಆಗ್ರಹಿಸಿದೆ.