ಅಗರ್ತಲಾ: ತ್ರಿಪುರಾದಲ್ಲಿ ರಥಯಾತ್ರೆ ವೇಳೆ ಹೈವೋಲ್ಟೇಜ್ ತಂತಿ ಸ್ಪರ್ಶಿಸಿ 7 ಮಂದಿ ಭಕ್ತರು ದಾರುಣ ಸಾವನ್ನಪ್ಪಿದ್ದಾರೆ.
ಉನಕೋಟಿ ಜಿಲ್ಲೆಯ ಕುಮಾರ್ಘಾಟ್ನಲ್ಲಿ ರಥಕ್ಕೆ ಹೈಟೆನ್ಷನ್ ತಂತಿ ಸ್ಪರ್ಶಿಸಿದ್ದು ಇಬ್ಬರು ಮಕ್ಕಳ ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಡಿಪಿಒ ಕುಮಾರಘಾಟ್ ಕಮಲ್ ದೆಬ್ಬರ್ಮ, ಬೆಳಗ್ಗೆಯಿಂದಲೇ ಮಳೆಯಾಗುತ್ತಿದ್ದು ರಥ ಯಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು.
ಉಲ್ಟೋ ರಥ ಯಾತ್ರೆಯ ಸಂದರ್ಭದಲ್ಲಿ ಭಕ್ತರು ರಥವನ್ನು ಎಳೆಯುತ್ತಿದ್ದಾಗ ಮೇಲಿನ ಹೈವೋಲ್ಟೇಜ್ ತಂತಿ ಸ್ಪರ್ಶಿಸಿ ಅನಾಹುತ ಸಂಭವಿಸಿದೆ. ಘಟನೆ ನಡೆದ ತಕ್ಷಣ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಘಟನೆ ನಡೆದ ಕೂಡಲೇ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು.
ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವರಿಗೆ ಗಂಭೀರ ಸುಟ್ಟ ಗಾಯಗಳಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳದ ಮೂಲಗಳು ತಿಳಿಸಿವೆ. ಘಟನೆ ನಡೆದ ತಕ್ಷಣ ಆಸ್ಪತ್ರೆಯಲ್ಲಿ ಅಪಾರ ಜನಸ್ತೋಮ ಜಮಾಯಿಸಿತ್ತು.
ಕಾನೂನು ಸುವ್ಯವಸ್ಥೆ ಕಾಪಾಡಲು ಘಟನಾ ಸ್ಥಳದಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಗಳ ದೊಡ್ಡ ತುಕಡಿಯನ್ನು ನಿಯೋಜಿಸಲಾಗಿತ್ತು.