ಕೊಚ್ಚಿ: ನಿಮಗೆಲ್ಲ ನಟಿ ಐಶ್ವರ್ಯಾ ಅಲಿಯಾಸ್ ಐಶ್ವರ್ಯಾ ಭಾಸ್ಕರನ್ ಗೊತ್ತಿರಬಹುದು. ಇವರು ಹಿರಿಯ ನಟಿ ಲಕ್ಷ್ಮೀ ಅವರ ಪುತ್ರಿ. ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್ ನಟರ ಜತೆಯಲ್ಲೇ ತೆರೆಹಂಚಿಕೊಂಡಿದ್ದಾರೆ.
ಐಶ್ವರ್ಯಾ ಅವರು ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಬಟರ್ಫ್ಲೈಸ್, ನರಸಿಂಹಂ ಮತ್ತು ಪ್ರಜಾ ಸಿನಿಮಾಗಳಲ್ಲಿ ಮಲಯಾಳಂ ಸೂಪರ್ಸ್ಟಾರ್ ಮೋಹನ್ ಲಾಲ್ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ಜಾಕ್ಪಾಟ್, ಸತ್ಯಮೇವ ಜಯತೆ, ಶಾರ್ಜಾ ಮತ್ತು ನೋಟ್ಬುಕ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ, ಕಿರಿತೆಯ ಅನೇಕ ಧಾರಾವಾಹಿಗಳಲ್ಲೂ ಐಶ್ವರ್ಯಾ ಬಣ್ಣ ಹಚ್ಚಿದ್ದಾರೆ.
ತಡವಾಗಿ ಅರಿವಾಯಿತು
ತಾಜಾ ಸಂಗತಿ ಏನೆಂದರೆ, ಐಶ್ವರ್ಯಾ ಅವರು ತಮ್ಮ ತಾಯಿ ಲಕ್ಷ್ಮೀ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಐಶ್ವರ್ಯಾ, ಕೆಲವು ವರ್ಷಗಳ ಹಿಂದೆ ನಾನು ಟಿವಿ ಕಾರ್ಯಕ್ರಮದಲ್ಲಿ ನನ್ನ ತಾಯಿಯ ಅನಾರೋಗ್ಯದ ಬಗ್ಗೆ ಮಾತನಾಡಿದೆ. ಇದರಿಂದ ನನ್ನ ತಾಯಿ ಹೃದಯಕ್ಕೆ ಎಷ್ಟು ನೋವಾಯಿತು ಎಂಬುದು ತಡವಾಗಿ ನನಗೆ ಅರಿವಾಯಿತು ಎಂದು ಹೇಳಿದ್ದಾರೆ.
ನನ್ನ ಕ್ಷಮಿಸು ಅಮ್ಮ
ನಾನು ಆ ಒಂದು ತಪ್ಪು ಮಾಡದೇ ಇದ್ದಿದ್ದರೆ, ಎಲ್ಲವೂ ಚೆನ್ನಾಗಿರುತ್ತಿತ್ತು. ನನ್ನನ್ನು ಕ್ಷಮಿಸು ಎಂದು ನನ್ನ ತಾಯಿಯ ಬಳಿ ಕೇಳಿದ್ದೇನೆ. ನಾನು ಮಾಡಿದ ಆ ಒಂದು ತಪ್ಪಿನಿಂದ ನನ್ನ ಕುಟುಂಬ ಸಾಕಷ್ಟು ಸಂಕಟ ಅನುಭವಿಸಿದೆ. ಈ ಘಟನೆಯ ಬಳಿಕ ನಾನು ಎಲ್ಲಿಯೂ ನನ್ನ ಕುಟುಂಬದ ಬಗ್ಗೆ ಮಾತನಾಡುವುದಿಲ್ಲ. ನಾನಷ್ಟೇ ಅಲ್ಲ ಯಾರೇ ಆಗಲಿ ತಮ್ಮ ಕುಟುಂಬದ ಬಗ್ಗೆ ಸಾರ್ವಜನಿಕವಾಗಿ ಕೆಟ್ಟದಾಗಿ ಮಾತನಾಡುವುದು ದೊಡ್ಡ ತಪ್ಪು. ಮಲಗಿ ಉಗುಳಿದಂತಾಗುತ್ತದೆ ಎಂದು ಐಶ್ವರ್ಯಾ ಹೇಳಿದರು.
ಅಂದಹಾಗೆ ಐಶ್ವರ್ಯಾ ಅವರು ಸಿನಿಮಾ ಮತ್ತು ಕಿರುತೆರೆಯಿಂದ ದೂರ ಉಳಿದಿದ್ದಾರೆ. ಮಗಳ ಮೇಲೆ ಹೆಚ್ಚಿನ ಪ್ರೀತಿ ಇಟ್ಟುಕೊಂಡಿದ್ದಾರೆ. ಐಶ್ವರ್ಯಾ ಅವರು ಯೂಟ್ಯೂಬ್ ಚಾನೆಲ್ ಮೂಲಕವೂ ಹಣ ಗಳಿಕೆ ಮಾಡುತ್ತಾರೆ. ಅಲ್ಲದೆ, ಯೂಟ್ಯೂಬ್ ಕೆಲಸ ಮುಗಿದ ಬಳಿಕ ಸೋಪ್ ಮಾರಾಟ ಸಹ ಮಾಡುತ್ತಾರೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ನನ್ನ ಮಗಳಿಗಾಗಿ ನಾನು ಬದುಕುತ್ತಿದ್ದೇನೆ. ಸ್ವತಂತ್ರ ವ್ಯಕ್ತಿಯಾಗಿ ಇರಲು ಹೆಮ್ಮೆ ಇದೆ ಎಂದು ಐಶ್ವರ್ಯಾ ಈ ಹಿಂದೆ ತಿಳಿಸಿದ್ದರು.