ಕಾಸರಗೋಡು: ನಾಡಿನ ಜನತೆ ಪ್ರದರ್ಶಿಸಿದ ಏಕತೆ ಮತ್ತು ಒಗ್ಗಟ್ಟು ಕೇರಳ ಎದುರಿಸಿದ ಎಲ್ಲಾ ಬಿಕ್ಕಟ್ಟಿನ ಸನ್ನಿವೇಶ ನಿವಾರಿಸಲು ಶಕ್ತಿಯನ್ನು ನೀಡಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಅವರು ಕಾಸರಗೋಡಿನ ಕಾಲಿಕಡವು ಮೈದಾನದಲ್ಲಿ ಸೋಮವಾರ ನಡೆದ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವ ಆಚರಣೆಯ 'ನನ್ನ ಕೇರಳ' ಪ್ರದರ್ಶನ ಮತ್ತು ಮಾರುಕಟ್ಟೆ ಮೇಳ ರಾಜ್ಯಮಟ್ಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
2016 ರಲ್ಲಿ ರಾಜ್ಯದ ಜನತೆ ಹದಗೆಟ್ಟ ಆರ್ಥಿಕ ವ್ಯವಸ್ಥೆಯಿದ್ದ ರಾಜ್ಯದ ಆಡಳಿತ ಚುಕ್ಕಾಣಿಯನ್ನು ಎಡರಂಗ ಸರ್ಕಾರಕ್ಕೆ ವಹಿಸಿಕೊಟ್ಟಿದ್ದು, ನಂತರದ ದಿನಗಳಲ್ಲಿ ನೈಸರ್ಗಿಕ ವಿಕೋಪ, ಸಾಂಕ್ರಾಮಿಕ ರೋಗಗಳು, ಶತಮಾನದ ಮಹಾ ಪ್ರವಾಹ ಮತ್ತು ಕೋವಿಡ್ ಸೇರಿದಂತೆ ಒಂದರ ಮೇಲೊಂದರಂತೆ ಸಂಭವಿಸಿದ ಎಲ್ಲಾ ಬಿಕ್ಕಟ್ಟುಗಳನ್ನು ನಿವಾರಿಸಲು ಜನತೆ ನೀಡಿದ ಸಹಕಾರ ಸರ್ಕಾರಕ್ಕೆ ಶಕ್ತಿಯನ್ನು ತಂದುಕೊಟ್ಟಿತು. ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ಸಂದಿಗ್ಧತೆಯನ್ನು ಮೀರಿನಿಂತ ಕೇರಳದ ಮದರಿಯನ್ನು ವಿಶ್ವ ಬೆರಗುಗಣ್ಣಿನಿಂದ ನೋಡುವಂತಾಗಿತ್ತು. ನಾಡಿನ ಜನತೆ ವಹಿಸಿಕೊಟ್ಟ ಜವಾಬ್ದಾರಿಯನ್ನು ಎಡರಂಗ ಸರ್ಕಾರ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ನಿಭಾಯಿಸುವುದರ ಜತೆಗೆ ರಾಜ್ಯವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯಲು ಪ್ರಯತ್ನಿಸಿದೆ ಎಂದು ತಿಳಿಸಿದರು.
ಮೈ ಕೇರಳ ಪ್ರದರ್ಶನಕ್ಕೆ ಚಾಲನೆ:
ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ಮೈ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಾಲಿಕಡವು ಮೈದಾನದಲ್ಲಿ ಉದ್ಘಾಟಿಸಿದರು. ಏಳು ದಿನಗಳ ಹಬ್ಬಗಳಿಗೆ ಮುಖ್ಯಮಂತ್ರಿಗಳು ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ರಾಜ್ಯ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವ ಆಚರಣೆಯು ಕಾಸರಗೋಡು ಜಿಲ್ಲೆಯಿಂದ ಪ್ರಾರಂಭವಾಗುತ್ತಿರುವುದು ಕೂಡ ವಿಶಿಷ್ಟವಾಗಿದೆ.
ಯಾವುದೇ ಬಿಕ್ಕಟ್ಟನ್ನು ಎದುರಿಸುವ ಶಕ್ತಿಯನ್ನು ರಾಜ್ಯದ ಜನತೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಹಲವಾರು ವಿಪತ್ತುಗಳ ನಡುವೆಯೂ ರಾಜ್ಯ ಅಭಿವೃದ್ಧಿಯ ಪಥದತ್ತ ಸಾಗಲು ಜನತೆಯ ಸಹಕಾರ ಕಾರಣ. ಗೈಲ್ ಪೈಪ್ಲೈನ್, ಸಿಟಿ ಗ್ಯಾಸ್ ಪ್ರಾಜೆಕ್ಟ್, ಇಡಮಣ್-ಕೊಚ್ಚಿ ಪವರ್ ಹೆದ್ದಾರಿಗಳು, ಬೆಟ್ಟಗುಡ್ಡ ಹೆದ್ದಾರಿಗಳು, ಕರಾವಳಿ ಹೆದ್ದಾರಿಗಳು ಮತ್ತು ಕೋವಲಂ-ಬೇಕಲ್ ಜಲಮಾರ್ಗ ಸೇರಿದಂತೆ ಎಲ್ಲಾ ವಲಯಗಳಲ್ಲಿ ಅಭಿವೃದ್ಧಿ ಸಾಧಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಕಂದಾಯ ಸಚಿವ ಕೆ. ರಾಜನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಭಾರತ ಮಾತ್ರವಲ್ಲಿ ವಿಶ್ವದ ಇತರ ದೇಶಗಳಲ್ಲೂ ಕೇರಳದ ಹೆಸರು ಉಲ್ಲೇಖಾರ್ಹವಾಗಿದೆ ಎಂದು ತಿಳಿಸಿದರು.
ಅರಣ್ಯ ಸಚಿವ ಎ.ಕೆ. ಶಶೀಂದ್ರನ್, ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್, ಪ್ರಾಚ್ಯವಸ್ತು ಮತ್ತು ನೋಂದಾವಣಾ ಖಾತೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ, ವಿದ್ಯುತ್ ಸಚಿವ ಕೆ. ಕೃಷ್ಣನ್ಕುಟ್ಟಿ, ಅಲ್ಪಸಂಖ್ಯಾತ ಕಲ್ಯಾಣ ಮತ್ತು ಕ್ರೀಡಾ ಸಚಿವ ವಿ. ಅಬ್ದುರಹ್ಮಾನ್, ಶಾಸಕರಾದ ಎಂ. ರಾಜಗೋಪಾಲನ್, ಸಿ. ಎಚ್. ಕುಂಞಂಬು, ಇ. ಚಂದ್ರಶೇಖರನ್, ಐ. ಮತ್ತು ಪಿಆರ್ಡಿ ನಿರ್ದೇಶಕ ಟಿ.ವಿ. ಸುಭಾಷ್, ಎ.ಡಿ.ಎಂ. ಪಿ.ಅಖಿಲ್, ಪಿಲಿಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಪಿ.ಪ್ರಸನ್ನ ಕುಮಾರಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾನವಾಸ್ ಪಾದೂರು, ಜಿಲ್ಲಾ ಪಂಚಾಯಿತಿ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮನು, ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯಾರ, ನೀಲೇಶ್ವರ ಪುರಸಭೆ ಅಧ್ಯಕ್ಷ ಟಿ.ವಿ.ಶಾಂತಾ, ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ.ಲಕ್ಷ್ಮಿ, ಕಾಞಂಗಾಡು ಪುರಸಭೆ ಅಧ್ಯಕ್ಷೆ ಕೆ.ವಿ. ಸುಜಾತಾ, ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಸದಸ್ಯ ಎಂ.ವಿ. ಸುಜಾತಾ, ಕಾಲಿಕಡವು ವಾರ್ಡ್ ಸದಸ್ಯೆ ಪಿ.ರೇಷ್ಣ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ 2016 ರಿಂದ 2025 ರ ನಡುವೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಡಿದ ಭಾಷಣಗಳ ಸಂಗ್ರಹವಾದ "ಹೃದಯಪಕ್ಷಂ" ಅನ್ನು ಸಿಎಂ ಪಿಣರಾಯಿ ವಇಜಯನ್ ಬಿಡುಗಡೆಗೊಳಿಸಿದರು. ಹಣಕಾಸು ಸಚಿವ ಕೆ. ಎನ್. ಬಾಲಗೋಪಾಲ್ ಪುಸ್ತಕವನ್ನು ಸ್ವೀಕರಿಸಿದರು. ಹತ್ತನೇ ವರ್ಷಕ್ಕೆ ಕಾಲಿಡುತ್ತಿರುವ ರಾಜ್ಯ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಜಾರಿಗೆ ತಂದಿರುವ ಮಹತ್ವದ ಸಾಧನೆಗಳು ಮತ್ತು ಅಭಿವೃದ್ಧಿ ಮತ್ತು ಕಲ್ಯಾಣ ಚಟುವಟಿಕೆಗಳನ್ನು ಸಂಕ್ಷಿಪ್ತವಾಗಿ ಪ್ರಸ್ತುತಪಡಿಸುವ "ನವ ಕೇರಳದ ವಿಜಯದ ಗುರುತುಗಳು" ಎಂಬ ಪುಸ್ತಕವನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು. ಅಲ್ಪಸಂಖ್ಯಾತ ವ್ಯವಹಾರಗಳು, ಕಲ್ಯಾಣ ಮತ್ತು ಕ್ರೀಡಾ ಸಚಿವ ವಿ. ಅಬ್ದುರಹ್ಮಾನ್ ಪುಸ್ತಕವನ್ನು ಸ್ವೀಕರಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಜಿಲ್ಲಾ ವಾರ್ತಾ ಕಚೇರಿಯ ಸ್ಮರಣಿಕೆಯನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಹಸ್ತಾಂತರಿಸಿದರು. ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಸ್ವಾಗತಿಸಿದರು ಮತ್ತು ಮಾಹಿತಿ ಮತ್ತು ಪ್ರಕಟಣೆ ಇಲಾಖೆಯ ಕಾರ್ಯದರ್ಶಿ ಎಸ್ ಹರಿ ಕಿಶೋರ್ ವಂದಿಸಿದರು.






