HEALTH TIPS

ಯುದ್ಧ ನಿಲ್ಲಿಸಿದ್ದಾಗಿ ಟ್ರಂಪ್ 8ನೇ ಬಾರಿ ಹೇಳಿಕೆ: ಮೋದಿ ಮೌನವೇಕೆ?; ಕಾಂಗ್ರೆಸ್

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷವನ್ನು ವ್ಯಾಪಾರದ ಭರವಸೆಯ ಮೂಲಕ ಬಗೆಹರಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿರುವ ಬಗ್ಗೆ ವಿಪಕ್ಷ ಕಾಂಗ್ರೆಸ್, ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಟ್ರಂಪ್ ಕದನ ವಿರಾಮ ತಾನೇ ಮಾಡಿಸಿದ್ದಾಗಿ ಪದೇ ಪದೇ ಹೇಳುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಒಮ್ಮೆಯೂ ಅಂತಹ ಹೇಳಿಕೆಗಳನ್ನು ತಿರಸ್ಕರಿಸಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದೇ ಆ ಭಯಾನಕ ಮೌನ ಏಕೆ? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

11 ದಿನಗಳಲ್ಲಿ ಎಂಟು ಬಾರಿ, ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದ ಸಂಪೂರ್ಣ ಶ್ರೇಯವನ್ನು ಪಡೆದುಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಪ್ರಧಾನಿಗಳನ್ನು ಸಮಾನವಾಗಿ ಹೊಗಳಿದ್ದಾರೆ. ಎಲ್ಲಾ ರೀತಿಯಲ್ಲೂ ಸಮಾನ ಎಂಬಂತೆ ಮಾತನಾಡಿದ್ದಾರೆ. ಎರಡು ದೇಶಗಳು ಕದನ ವಿರಾಮ ಘೋಷಿಸುವಂತೆ ಮಾಡಲು ಅಮೆರಿಕದೊಂದಿಗಿನ ವ್ಯಾಪಾರವು ಅವರು ಬಳಸಿದ ಅಸ್ತ್ರ ಎಂದು ಪುನರುಚ್ಚರಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

'ಆದರೂ ನಮ್ಮ ಪ್ರಧಾನಿ ಡೊನಾಲ್ಡ್ ಭಾಯ್ ಅವರ ಉತ್ತಮ ಸ್ನೇಹಿತರಾಗಿರುವ ಮೋದಿ, ಅಮೆರಿಕ ಅಧ್ಯಕ್ಷರು ಪದೇ ಪದೇ ಹೀಗೆ ಹೇಳುತ್ತಿರುವ ಬಗ್ಗೆ ಸಂಪೂರ್ಣವಾಗಿ ಮೌನವಾಗಿದ್ದಾರೆ. ಅಮೆರಿಕ ಅಧ್ಯಕ್ಷರ ಹೇಳಿಕೆಗಳನ್ನು ಬೆಂಬಲಿಸಿ, ತಟಸ್ಥ ತಾಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮಾತುಕತೆ ಕುರಿತಂತೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹೇಳಿಕೆ ಬಗ್ಗೆ ನಮ್ಮ ವಿದೇಶಾಂಗ ಸಚಿವರೂ ಮೌನ ವಹಿಸಿರುವುದನ್ನೂ ಜೈರಾಮ್ ಪ್ರಶ್ನಿಸಿದ್ದಾರೆ.

ಟ್ರಂಪ್ ಹೇಳಿದ್ದೇನು?

ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷವನ್ನು ವ್ಯಾಪಾರವನ್ನು ಮುಂದಿಟ್ಟುಕೊಂಡು ಸ್ಥಗಿತಗೊಳಿಸಿರುವುದಾಗಿ ಟ್ರಂಪ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಪುನರುಚ್ಚರಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಎರಡರೊಂದಿಗೂ ಅಮೆರಿಕ ದೊಡ್ಡ ವ್ಯವಹಾರ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ನೀವು ಗುಂಡು ಹಾರಿಸುತ್ತಾ ಹೋದರೆ, ಅದಕ್ಕೆ ಮಿತಿಯೇ ಇರುವುದಿಲ್ಲ. ಪರಿಸ್ಥಿತಿ ದಿನದಿಂದ ದಿನಕ್ಕೆ ಕೆಟ್ಟದಾಗುತ್ತಾ ಹೋಗುತ್ತದೆ. ಮತ್ತಷ್ಟು ಗಂಭೀರವಾಗುತ್ತಾ ಹೋಗುತ್ತದೆ ಎಂದು ನಾವು ಅವರ ಜೊತೆ ಮಾತನಾಡಿದೆವು. ಅದಾದ, ಎರಡು ದಿನಗಳ ನಂತರ ಫಲಿತಾಂಶ ಬಂದಿತು ಎಂದು ಅವರು ಹೇಳಿದ್ದಾರೆ.

'ಪಾಕಿಸ್ತಾನದಲ್ಲಿ ಕೆಲ ಒಳ್ಳೆಯ ನಾಯಕರಿದ್ದಾರೆ. ಭಾರತದ ಪ್ರಧಾನಿ ಮೋದಿ ನನ್ನ ಸ್ನೇಹಿತ'ಎಂದು ಟ್ರಂಪ್ ಹೇಳಿದ್ದಾರೆ. ಮೋದಿ ನಮಗೂ ಸ್ನೇಹಿತ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಇತ್ಯರ್ಥಗೊಳಿಸಲು ಸಹಾಯ ಮಾಡಿದೆ ಎಂದು ಅಮೆರಿಕ ಅಧ್ಯಕ್ಷರು ಪದೇ ಪದೇ ಹೇಳಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಅವರು ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ.

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಮೇ 7ರಿಂದ ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ 'ಆಪರೇಷನ್ ಸಿಂಧೂರ' ಅಡಿಯಲ್ಲಿ ನಿಖರವಾದ ದಾಳಿಗಳನ್ನು ನಡೆಸಿತ್ತು. ಇದರಲ್ಲಿ ನೂರಾರು ಉಗ್ರರನ್ನು ಕೊಂದಿತ್ತು.

ನಂತರ, ಪಾಕಿಸ್ತಾನವು ಮೇ 8, 9 ಮತ್ತು 10ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು. ಬಳಿಕ, ಭಾರತೀಯ ಪಡೆಗಳು ಪಾಕಿಸ್ತಾನದ ಹಲವು ಸೇನಾ ನೆಲೆಗಳ ಮೇಲೆ ಉಗ್ರ ಪ್ರತಿದಾಳಿ ನಡೆಸಿದ್ದವು.

ನಾಲ್ಕು ದಿನಗಳ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಉಭಯ ದೇಶಗಳು ಯುದ್ಧ ವಿರಾನಕ್ಕೆ ಸಮ್ಮತಿಸಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries