ಪೇಶಾವರ: ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಹತನಾದ ಉಗ್ರಗಾಮಿ ಗುಂಪು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ನ (ಟಿಟಿಪಿ) ಕಮಾಂಡರ್ ಒಬ್ಬನ ಅಂತ್ಯಕ್ರಿಯೆ ಪ್ರಾರ್ಥನೆಗೆ ಮುಂದಾಳತ್ವ ವಹಿಸಲು ಪಾಕಿಸ್ತಾನದ ವಾಯವ್ಯ ಪ್ರಾಂತ್ಯದ ಮೌಲ್ವಿಗಳು ನಿರಾಕರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಉತ್ತರ ವಜೀರಿಸ್ತಾನ್ ಜಿಲ್ಲೆಯ ಶವಲ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಕಾಳಗದಲ್ಲಿ ಟಿಟಿಪಿ ಕಮಾಂಡರ್ ಮಿನ್ಹಾಜ್ ಹತನಾಗಿದ್ದ ಎಂದು ಅವರು ಹೇಳಿದ್ದಾರೆ.
ಮುಗ್ಧ ಜನರ ಸಾವಿಗೆ ಕಾರಣನಾದ ಹಾಗೂ ದೇಶದ ವಿರುದ್ಧ ಯುದ್ಧ ಮಾಡಿದ ಕಾರಣಕ್ಕೆ ಆತನ ಅಂತ್ಯಕ್ರಿಯೆ ಪ್ರಾರ್ಥನೆ ಮಾಡುವುದಿಲ್ಲ ಎಂದು ಮೌಲ್ವಿಗಳು ಹೇಳಿದ್ದಾಗಿ ಅಧಿಕಾರಿಗಳಿ ತಿಳಿಸಿದ್ದಾರೆ.
ದಕ್ಷಿಣ ವಜೀರಿಸ್ತಾನದ ಅಜಂ ವರ್ಸಕ್ನಲ್ಲಿರುವ ನರ್ಗಿಸಾಯಿ ಸ್ಮಶಾನದಲ್ಲಿ ಸುಮಾರು 10-20 ಮಂದಿಯ ಸಮ್ಮುಖದಲ್ಲಿ ಸ್ಥಳೀಯರು ಆತನ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ವಜೀರಿಸ್ತಾನ್ ಜಿಲ್ಲೆಯಲ್ಲಿ ಭಯೋತ್ಪಾದಕನ ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ನಡೆಸಲು ವಿದ್ವಾಂಸರು ನಿರಾಕರಿಸಿದಾಗ ಇದು ಅಸಾಮಾನ್ಯ ಸಂಗತಿಯಾಗಿತ್ತು. ದೇಶ ವಿರೋಧಿಗಳ ಹಣೆ ಬರಹ ಹೀಗೇ ಆಗಿರಲಿದೆ ಎಂದು ಬುಡಕಟ್ಟು ಜನಾಂಗದ ಹಿರಿಯರೊಬ್ಬರು ಹೇಳಿದ್ದಾರೆ.




