ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಕಳೆದ ಐದು ದಶಕಗಳಿಂದ ಕೇವಲ ಎರಡು ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಎ.ಕೆ. ರೈರು ಗೋಪಾಲ್, ವಯೋಸಹಜ ಕಾಯಿಲೆಗಳಿಂದ ಇಂದು (ಭಾನುವಾರ) ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಗೋಪಾಲ್ ಅವರಿಗೆ 80 ವರ್ಷ ವಯಸ್ಸಾಗಿತ್ತು..
ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಪಯ್ಯಂಬಲದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಡಾ. ರೈರು ಗೋಪಾಲ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. 'ಜನರ ಡಾಕ್ಟರ್ ಆಗಿರುವ ರೈರು ತಾವು ನೀಡುವ ಚಿಕಿತ್ಸಗೆಗಾಗಿ ರೋಗಿಗಳಿಂದ ಎರಡು ರೂಪಾಯಿ ಶುಲ್ಕ ಪಡೆಯುತ್ತಿದ್ದರು. ಜನರಿಗೆ ಸೇವೆ ಸಲ್ಲಿಸುವ ಅವರ ಇಚ್ಛಾಶಕ್ತಿಯು ರೋಗಿಗಳಿಗೆ ನೆರವಾಗಿತ್ತು' ಎಂದು ಉಲ್ಲೇಖಿಸಿದ್ದಾರೆ.
ಎರಡು ರೂಪಾಯಿ ಡಾಕ್ಟ್ರು ಎಂದೇ ಜನಪ್ರಿಯ...
ಪ್ರತಿದಿನ ಬೆಳಿಗ್ಗೆ 4ರಿಂದ ಸಂಜೆ 4ರವರೆಗೆ ತಮ್ಮ 'ಲಕ್ಷ್ಮಿ' ನಿವಾಸದಲ್ಲೇ ಡಾ.ರೈರು ರೋಗಿಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ದೈನಂದಿನ ಜಿಲ್ಲೆಯ ವಿವಿಧ ಭಾಗಗಳಿಂದ ಸೇರಿದಂತೆ ಹತ್ತಿರದ ಜಿಲ್ಲೆಗಳಿಂದಲೂ ನೂರಾರು ಮಂದಿ ಚಿಕಿತ್ಸೆಗಾಗಿ ಭೇಟಿ ಕೊಡುತ್ತಿದ್ದರು.
ಔಷಧಿಗಳನ್ನು ಖರೀದಿಸಲು ದುಡ್ಡಿಲ್ಲದ ರೋಗಿಗಳಿಗೆ ಉಚಿತವಾಗಿಯೇ ಔಷಧಿಗಳನ್ನು ಒದಗಿಸುತ್ತಿದ್ದರು. ಅವರು ಬಡವರ ಪಾಲಿನ 'ಎರಡು ರೂಪಾಯಿ ಡಾಕ್ಟ್ರು' ಎಂದೇ ಜನಪ್ರಿಯರಾಗಿದ್ದರು.
ವಯೋಸಹಜ ಆರೋಗ್ಯ ಕಾಯಿಲೆಯಿಂದಾಗಿ 2024ರ ಮೇ ತಿಂಗಳಲ್ಲಿ ಚಿಕಿತ್ಸಾಲಯವನ್ನು ಸ್ಥಗಿತಗೊಳಿಸಿದ್ದರು.




