HEALTH TIPS

ಭಾರತದೊಂದಿಗೆ ವ್ಯಾಪಾರ: ಅಸಮತೋಲನ ಸರಿಪಡಿಸಲು ರಷ್ಯಾ ಅಧ್ಯಕ್ಷ ಪುಟಿನ್ ಆದೇಶ

ಮಾಸ್ಕೊ: ಅಧಿಕ ಪ್ರಮಾಣದ ಕಚ್ಚಾ ತೈಲ ಖರೀದಿಸುತ್ತಿರುವ ಭಾರತದೊಂದಿಗೆ ವ್ಯಾಪಾರ ಸಂಬಂಧದಲ್ಲಿನ ಅಸಮತೋಲನವನ್ನು ಸರಿಪಡಿಸಲು ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್ ಆದೇಶಿಸಿದ್ದಾರೆ.‌

ರಷ್ಯಾದ ದಕ್ಷಿಣ ಭಾಗದಲ್ಲಿರುವ ಸೊಚಿ ಬಳಿಯ ಬ್ಲಾಕ್ ಸೀ ರೆಸಾರ್ಟ್‌ನಲ್ಲಿ ಭಾರತವನ್ನೂ ಒಳಗೊಂಡು 140 ರಾಷ್ಟ್ರಗಳ ಭದ್ರತೆ ಮತ್ತು ಜಾಗತಿಕ ರಾಜಕೀಯ ತಜ್ಞರೊಂದಿಗೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

ಕಚ್ಚಾ ತೈಲ ಖರೀದಿಸುತ್ತಿರುವ ಭಾರತದಿಂದ ಅಧಿಕ ಪ್ರಮಾಣದಲ್ಲಿ ಕೃಷಿ ಉತ್ಪನ್ನ ಹಾಗೂ ಔಷಧಗಳ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ‌ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾರತದಲ್ಲಿ ನಡೆಯಲಿರುವ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ ಬೆನ್ನಲ್ಲೇ ಈ ಆದೇಶವನ್ನು ಅವರು ಮಾಡಿದ್ದಾರೆ.

'ರಷ್ಯಾದಿಂದ ಕಚ್ಚಾತೈಲ ಖರೀದಿಗಾಗಿ ಅಮೆರಿಕದಿಂದ ಸುಂಕ ಹೇರಿಕೆಯ ಸಮಸ್ಯೆಗೆ ಸಿಲುಕಿದ ಭಾರತ ಎದುರಿಸುತ್ತಿರುವ ವ್ಯಾಪಾರ ನಷ್ಟವನ್ನು ರಷ್ಯಾ ಈ ರೀತಿ ಭರಿಸಲಿದೆ. ಜತೆಗೆ ಸಾರ್ವಭೌಮ ರಾಷ್ಟ್ರ ಸ್ಥಾನಮಾನವನ್ನು ಭಾರತ ಪಡೆದುಕೊಂಡಿದೆ' ಎಂದರು. ಜತೆಗೆ ರಷ್ಯಾದಿಂದ ತೈಲ ಖರೀದಿಗಾಗಿ ಶೇ 25ರಷ್ಟು ಹೆಚ್ಚುವರಿ ಸುಂಕ ಹೇರಿಕೆಯನ್ನೂ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ.

ಭಾರತದ ಮಿತ್ರ ರಾಷ್ಟ್ರಗಳೊಂದಿಗೂ ವ್ಯಾಪಾರ

'ಭಾರತದ ಮಿತ್ರ ರಾಷ್ಟ್ರಗಳು ಮತ್ತು ಪಾಲುದಾರ ರಾಷ್ಟ್ರಗಳೊಂದಿಗೂ ವ್ಯಾಪಾರ ವಿಸ್ತರಣೆ ಹಾಗೂ ಸಹಕಾರವನ್ನು ಹೇಗೆ ಸುಗಮಗೊಳಿಸಬಹುದು ಎಂಬುದರತ್ತಲೂ ಗಮನ ಹರಿಸಬೇಕು. ಜತೆಗೆ ಈ ಎಲ್ಲಾ ಪ್ರದೇಶಗಳಲ್ಲಿ ವ್ಯಾಪಾರ ಸಮತೋಲನವನ್ನು ಹೇಗೆ ಕಾಪಾಡಬಹುದು ಎಂಬುದನ್ನೂ ಆಲೋಚಿಸಬೇಕು' ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ರಷ್ಯಾದ ಸರ್ಕಾರಿ ಸ್ವಾಮ್ಯದ ಟಿಎಎಸ್‌ಎಸ್‌ ಸಂಸ್ಥೆ ವರದಿ ಮಾಡಿದೆ.

'ಭಾರತ ಮತ್ತು ರಷ್ಯಾ ನಡುವಿನ ಆರ್ಥಿಕ ಸಹಕಾರದಲ್ಲಿ ಅಗಾಧವಾದ ಅವಕಾಶಗಳಿವೆ. ಅದನ್ನು ಗುರುತಿಸಿ, ಕೆಲ ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸಿ, ಅಪರಿಮಿತ ಅವಕಾಶಗಳ ಬಾಗಿಲನ್ನು ತೆರೆಯಬೇಕಿದೆ. ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರವು 63 ಶತಕೋಟಿ ಅಮೆರಿಕನ್ ಡಾಲರ್‌ನಷ್ಟಿದೆ ಹಾಗೂ ಬೆಲಾರಸ್‌ನೊಂದಿಗೆ 50 ಶತಕೋಟಿ ಅಮೆರಿಕನ್ ಡಾಲರ್‌ನಷ್ಟಿದೆ. ಆದರೆ ಇದು ನಿಸ್ಸಂಶಯವಾಗಿ ನಮ್ಮ ಸಂಭಾವ್ಯ ಅವಕಾಶಗಳಿಗೆ ಹೊಂದಿಕೆಯಾಗುವುದಿಲ್ಲ' ಎಂದಿದ್ದಾರೆ.

ಸ್ನೇಹಿತ ನರೇಂದ್ರ ಮೋದಿಯೊಂದಿಗಿನ ಮಾತುಕತೆ ಅರ್ಥಪೂರ್ಣ

ಭಾರತವು ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ಕಾಲದಲ್ಲೂ ಸೋವಿಯತ್ ಒಕ್ಕೂಟದೊಂದಿಗಿನ ವಿಶೇಷ ಸಂಬಂಧವನ್ನು ಪುಟಿನ್ ಒತ್ತಿ ಹೇಳಿದ್ದಾರೆ. ಜತೆಗೆ ಭಾರತ ಇಂದಿಗೂ ಅದನ್ನು ನೆನಪಿಟ್ಟುಕೊಂಡಿದೆ. ಅದರ ಮೌಲ್ಯವನ್ನು ಅರಿತಿದೆ ಮತ್ತು ಅದನ್ನು ಗೌರವಿಸುತ್ತಿದೆ. ಆ ದಿನಗಳನ್ನು ಭಾರತ ಮರೆತಿಲ್ಲ ಎಂಬುದು ಅಭಿನಂದನಾರ್ಹ ಎಂದು ಪುಟಿನ್ ಹೇಳಿದ್ದಾರೆ.

'ಸ್ನೇಹಿತರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ನಂಬಿಕೆಗೆ ಅರ್ಹವಾದ ಮಾತುಕತೆಗಳು ಹೆಚ್ಚು ಅರ್ಥಪೂರ್ಣ. ಮೋದಿ ನೇತೃತ್ವದ ರಾಷ್ಟ್ರೀಯವಾದಿ ಸರ್ಕಾರವು ಸಮತೋಲಿತ, ಬುದ್ಧಿವಂತ ಹಾಗೂ ರಾಷ್ಟ್ರದ ಹಿತ ಕಾಯುವ ಗುಣವುಳ್ಳದ್ದು. ಇದನ್ನು ಪ್ರತಿಯೊಬ್ಬ ಭಾರತೀಯರು ಅರಿತಿದ್ದಾರೆ' ಎಂದು ಪುಟಿನ್ ಬಣ್ಣಿಸಿದ್ದಾರೆ.

ಕೃತಕ ಬುದ್ಧಿಮತ್ತೆಯನ್ನೂ ಒಳಗೊಂಡು ಅತ್ಯಾಧುನಿಕ ತಂತ್ರಜ್ಞಾನವನ್ನು ಜಂಟಿ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸುವ ಸಲಹೆ ನೀಡಿದ ನವದೆಹಲಿ ಮೂಲದ ವಿವೇಕಾನಂದ ಅಂತರರಾಷ್ಟ್ರೀಯ ಪ್ರತಿಷ್ಠಾನದ ಮಹಾನಿರ್ದೇಶಕ ಡಾ. ಅರವಿಂದ ಗುಪ್ತಾ ಅವರ ಮಾತುಗಳನ್ನು ಪುಟಿನ್ ಸ್ವಾಗತಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries