ನವದೆಹಲಿ: 'ಜನ ವಿಶ್ವಾಸ ಮಸೂದೆ 2025' ಅನ್ನು ಪರಿಶೀಲಿಸಲು ಹೊಸದಾಗಿ ರಚಿಸಿರುವ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಬುಧವಾರ ಆಯ್ಕೆ ಮಾಡಲಾಗಿದೆ.
24 ಸಂಸದೀಯ ಸ್ಥಾಯಿ ಸಮಿತಿಗಳನ್ನು ಪುನರ್ರಚಿಸಲಾಗಿದ್ದು, ಜನ ವಿಶ್ವಾಸ ಮಸೂದೆ ಹಾಗೂ ಆದಾಯ ತೆರಿಗೆ ಮಸೂದೆಗಳಿಗೆ ಹೊಸದಾಗಿ ಆಯ್ಕೆ ಸಮಿತಿಗಳನ್ನು ರಚಿಸಲಾಗಿದೆ.
30 ದಿನಗಳವರೆಗೆ ನಿರಂತರವಾಗಿ ಜೈಲಿನಲ್ಲಿರುವ ಪ್ರಧಾನಿ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸುವ ಕೇಂದ್ರ ಸರ್ಕಾರದ ಮಸೂದೆಯ ಕುರಿತು ಜಂಟಿ ಸಂಸದೀಯ ಸಮಿತಿ ರಚಿಸುವ ಬಗ್ಗೆ ಗೊಂದಲ ಮುಂದುವರಿದಿದೆ.
ಸಮಿತಿ ರಚನೆಗೆ ವಿರೋಧ ಪಕ್ಷಗಳಲ್ಲಿ ಭಿನ್ನ ನಿಲುವುಗಳಿವೆ. ಹಲವು ಪಕ್ಷಗಳು ಸಮಿತಿಯ ಭಾಗವಾಗಲು ನಿರಾಕರಿಸಿವೆ. ಇದೇ ವೇಳೆ, ವಿದೇಶಾಂಗ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಮುಂದುವರಿಯಲಿದ್ದಾರೆ.




