ಮಧೂರು: ಯಕ್ಷಗಾನ ಕಲಾವಿದರ ಸಾಧನೆಗಳು ಅಕಾಡೆಮಿಕ್ ನೆಲೆಯಲ್ಲಿ ದಾಖಲಾದುದು ತೀರಾ ಕಡಿಮೆ. ಒಬ್ಬೊಬ್ಬ ಕಲಾವಿದನಲ್ಲೂ ಅಪ್ರತಿಮವಾದ ಕಲಾ ಸಂಪನ್ಮೂಲಗಳಿವೆ. ಅವೆಲ್ಲಾ ರಂಗ ದುಡಿಮೆಗೆ ಅಥವಾ ಸನ್ಮಾನ, ಅಭಿನಂದನಾ ಮಾತುಗಳಿಗೆ ಸೀಮಿತವಾಗಿದೆ. ಕಲಾವಿದನ ಕಾಲಾನಂತರ ಆತನ ಸಾಧನೆಗಳು ಮರೆವಿಗೆ ಜಾರುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ದಾಖಲಾತಿಗಳು ನಡೆಯಬೇಕು. ಯಕ್ಷಗಾನ ಕೇಂದ್ರಗಳು, ಅಧ್ಯಯನ ಸಂಸ್ಥೆಗಳು, ಯಕ್ಷಗಾನದ ಸಕ್ರಿಯ ಹವ್ಯಾಸಿ ಸಂಘಗಳು ತಮ್ಮ ಮಿತಿಯಲ್ಲಿ ಈ ಕಾರ್ಯವನ್ನು ಮಾಡಿದರೆ ಮುಂದಿನ ತಲೆಮಾರಿಗೆ ಕಲಾವಿದನ ಸಾಧನೆಯನ್ನು ಪರಿಚಯಿಸಿದಂತಾಗುತ್ತದೆ ಂದು ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಹೇಳಿದರು.
ಅವರು ಮಧೂರು ಕ್ಷೇತ್ರದಲ್ಲಿ ಜರುಗಿದ ಕುತ್ಯಾಳ-ಕೂಡ್ಲು ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರವು ತನ್ನ 'ರಜತರಂಗ' ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡಿರುವ 'ಹಿರಿಯರ ನೆನಪು' ಸರಣಿ ಕಾರ್ಯಕ್ರಮದಲ್ಲಿ ಕೀರ್ತಿಶೇಷ ಮಧೂರು ಗಣಪತಿ ರಾವ್ ಅವರ ಕಲಾಯಾನವನ್ನು ನೆನಪಿಸುತ್ತ ಅವರು ಮಾತನಾಡಿದರು.
ಯಕ್ಷಗಾನ ಸಂಘಗಳ ಪ್ರದರ್ಶನಗಳು ವೃತ್ತಿ ರಂಗಭೂಮಿಯ ನೆರಳಾಗಬಾರದು. ಹಿರಿಯರನ್ನು ನೆನಪಿಸುವ ಕಾರ್ಯ ಸ್ತುತ್ಯ ಎಂದರು.
ಕುತ್ಯಾಳ-ಕೂಡ್ಲು ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರವು ತನ್ನ 'ರಜತರಂಗ' ಸಂಭ್ರಮದ ಪ್ರಯುಕ್ತ 'ಹಿರಿಯರ ನೆನಪು' ಸರಣಿ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಶ್ರೀ ಎಡನೀರು ಮಠದ ಸತೀಶ್ ಎಡನೀರು ದೀಪಜ್ವಲನದ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಹಿರಿಯ ಜ್ಯೋತಿಷಿ ನಾರಾಯಣ ರಂಗಾಭಟ್ಟ, ಮಧೂರು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಪ್ರಸಾದ್, ತರಬೇತಿ ಕೇಂದ್ರದ ಅಧ್ಯಕ್ಷ ಚಂದ್ರಮೋಹನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಧೂರು ಗಣಪತಿ ರಾವ್ ಅವರ ಚಿರಂಜೀವಿ ಶ್ರೀ ಕೃಷ್ಣ ರಾವ್ ಮಧೂರು ಇವರನ್ನು ಭಾಗವತ ತಲ್ಪಣಾಜೆ ವೆಂಕಟ್ರಮಣ ಭಟ್ ಅಭಿನಂದಿಸಿದರು. ಕಲಾವಿದ ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರು ಶುಭ ಹಾರೈಸಿದರು.
ಗೋಪಾಲಕೃಷ್ಣ ಕೆ. ಸ್ವಾಗತಿಸಿ, ಕೃಷ್ಣಮೂರ್ತಿ ಅಡಿಗ ವಂದಿಸಿದರು. ಸುರೇಶ್ ಮಣಿಯಾಣಿ, ವಿಘ್ನೇಶ್ ಕಾರಂತ, ಸುಜನ್, ಆಕಾಶ್, ಅರ್ಜುನ್ ಸಹಕರಿಸಿದರು.
ಬಳಿಕ ನಡೆದ ತಾಳಮದ್ದಳೆಯಲ್ಲಿ 'ಕರ್ಣ ಭೇದನ' ಪ್ರಸಂಗದ ತಾಳಮದ್ದಳೆ ಸಂಪನ್ನಗೊಂಡಿತು. ಕಲಾವಿದರಾಗಿ ತಲ್ಪಣಾಜೆ ವೆಂಕಟ್ರಮಣ ಭಟ್ (ಭಾಗವತರು), ಲಕ್ಷ್ಮೀಶ ಬೆಂಗ್ರೋಡಿ (ಮದ್ದಳೆ), ಪವನ್ ಸ್ವರ್ಗ (ಚೆಂಡೆ), ಅರ್ಪಿತ್ ಶೆಟ್ಟಿ ಕೂಡ್ಲು (ಚಕ್ರತಾಳ); ನಾ. ಕಾರಂತ ಪೆರಾಜೆ, ಸದಾಶಿವ ಆಳ್ವ ತಲಪಾಡಿ, ಚಂದ್ರಮೋಹನ್ ಕೂಡ್ಲು, ಕೃಷ್ಣಮೂರ್ತಿ ಅಡಿಗ (ಅರ್ಥದಾರಿಗಳು) ಸಹಕರಿಸಿದರು. ಕಾರ್ಯಕ್ರಮಕ್ಕೆ ಯಕ್ಷಕಲಾಕೌಸ್ತುಭ ಮಧೂರು ಇವರು ಸಹಕರಿಸಿದ್ದರು.




.jpg)
