ಡೆಹ್ರಾಡೂನ್: ತ್ರಿಪುರಾ ವಿದ್ಯಾರ್ಥಿ ಏಂಜಲ್ ಚಕ್ಮಾ ನಿಧನಕ್ಕೆ ಜನಾಂಗೀಯ ನಿಂದನೆ ಕಾರಣ ಎಂಬುದಕ್ಕೆ ಯಾವುದೇ ಪುರಾವೆಗಳು ಈವರೆಗೆ ಲಭ್ಯವಾಗಿಲ್ಲ ಎಂದು ದೆಹ್ರಾಡೂನ್ ಪೊಲೀಸರು ಮಂಗಳವಾರ ತಿಳಿಸಿದರು.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಅವರು, 'ವಿದ್ಯಾರ್ಥಿ ಸಾವಿಗೆ ಜನಾಂಗೀಯ ನಿಂದನೆ ಕಾರಣವಿರಬಹುದು ಎಂಬ ಸಾಮಾಜಿಕ ಜಾಲತಾಣಗಳ ಆರೋಪವನ್ನು ಪರಿಗಣಿಸಿ ಈ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ' ಎಂದು ತಿಳಿಸಿದರು.
ಡಿಸೆಂಬರ್ 9ರಿಂದ ಡಿಸೆಂಬರ್ 26ರವರೆಗೆ ಜನಾಂಗೀಯ ನಿಂದನೆಗೆ ಸಂಬಂಧಿಸಿದಂತೆ ಯಾವುದೇ ದೂರು ಸಹ ದಾಖಲಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್ಐಆರ್ನಲ್ಲೂ ಈ ಅಂಶ ಉಲ್ಲೇಖಿಸಿಲ್ಲ ಎಂದು ಹೇಳಿದರು.
ಡಿಸೆಂಬರ್ 9ರಂದು ಆರೋಪಿಗಳ ಪೈಕಿ ಸೂರಜ್ ಖ್ವಾಸ್ ಎಂಬಾತ ಮಣಿಪುರದ ತನ್ನ ನಿವಾಸದಲ್ಲಿ ಜನ್ಮ ದಿನದ ಔತಣಕೂಟ ಆಯೋಜಿಸಿದ್ದ. ಮೃತ ವಿದ್ಯಾರ್ಥಿ ಮತ್ತು ಆತನ ಸಹೋದರ ಇದ್ದ ಒಂದು ಗುಂಪು ಮತ್ತು ಆರು ಜನರಿದ್ದ ಇನ್ನೊಂದು ಗುಂಪಿನ ಮಧ್ಯೆ ವಾದ-ವಿವಾದ ನಡೆದಿತ್ತು. ಸಂಘರ್ಷವು ಅತಿರೇಕಕ್ಕೆ ತೆರಳಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿತ್ತು. ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತಪಟ್ಟಿದ್ದ' ಎಂದು ವಿವರಿಸಿದರು.
ಎಫ್ಐಆರ್ನಲ್ಲಿ ಉಲ್ಲೇಖಿಸಲಾದ ಆರು ಆರೋಪಿಗಳ ಪೈಕಿ ಐವರನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಕಾನೂನು ಸಂಘರ್ಷಕ್ಕೆ ಒಳಪಟ್ಟ ಇಬ್ಬರು ಬಾಲಕರನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ. ಮೂವರನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ. ತಲೆಮರೆಸಿಕೊಂಡ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದರು.

