ನವದೆಹಲಿ: 'ಕೋವಿಡ್ ಸಮಯದಲ್ಲಿ ದೇಶದಲ್ಲಿ ಎಂತಹ ದುರಂತಗಳು ಸಂಭವಿಸಿದ್ದವು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮರೆತಿದ್ದಾರೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಸೋಮವಾರ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ರಾಹುಲ್, 'ಕೋವಿಡ್ನಂತಹ ಸಮಯ ಬರಲಿದೆ ಎಂದು ಮೋದಿ ಅವರು ಸಂಸತ್ತಿನಲ್ಲಿ ಹೇಳಿದ್ದಾರೆ.
ಅಂದು ಏನಾಗಿತ್ತು, ಎಷ್ಟು ಜನರು ಮೃತಪಟ್ಟಿದ್ದರು ಮತ್ತು ಎಂತಹ ದುರಂತಗಳು ಸಂಭವಿಸಿದ್ದವು ಎಂಬುದನ್ನು ಅವರು ಮರೆತಿದ್ದಾರೆ' ಎಂದು ಕಿಡಿಕಾರಿದ್ದಾರೆ.
ಮುಂದುವರಿದು, 'ಮೋದಿಯವರು ಏನು ಮಾಡಬಲ್ಲರು ಮತ್ತು ಏನು ಮಾಡಲು ಸಾಧ್ಯವಿಲ್ಲ ಎಂಬುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಚೆನ್ನಾಗಿ ತಿಳಿದಿದೆ. ಪ್ರಧಾನಿಯೇ ರಾಜಿ ಮಾಡಿಕೊಂಡರೆ, ನಮ್ಮ ವಿದೇಶಾಂಗ ನೀತಿಯೂ ರಾಜಿ ಮಾಡಿಕೊಂಡಂತೆ ಎಂಬುದು ಸ್ಪಷ್ಟ' ಎಂದು ಹೇಳಿದ್ದಾರೆ.
ಪಶ್ಚಿಮ ಏಷ್ಯಾದ ಸಂಘರ್ಷದಿಂದ ಉಂಟಾದ ಜಾಗತಿಕ ಬಿಕ್ಕಟ್ಟು ದೀರ್ಘಕಾಲದವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಹೀಗಾಗಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ದೇಶವು ಹೇಗೆ ಒಗ್ಗಟ್ಟಿನಿಂದ ನಿಂತಿತ್ತೋ ಹಾಗೆಯೇ ಸಿದ್ಧವಾಗಿರಬೇಕು ಎಂದು ಸಂಸತ್ತಿನಲ್ಲಿ ಮೋದಿ ಕರೆ ನೀಡಿದ್ದರು.

