ರುದ್ರಪ್ರಯಾಗ: ಬದರಿನಾಥ್ ಹೆದ್ದಾರಿಯಲ್ಲಿರುವ ಗುರುದ್ವಾರವೊಂದರಲ್ಲಿ ಘರ್ಷಣೆ ನಡೆದು ಒಂದು ದಿನ ಕಳೆದಿದ್ದರೂ, ಉದ್ವಿಗ್ನ ಪರಿಸ್ಥಿತಿ ಇನ್ನು ಕೊನೆಗೊಂಡಿಲ್ಲ.
ಗುರುದ್ವಾರವೊಂದರ ಚಾವಣಿಯ ಮೇಲೆ ನಿಹಾಂಗ್ (ಅಕಾಲಿ) ಸಮುದಾಯದ ಶಸ್ತ್ರಸಜ್ಜಿತ ಗುಂಪೊಂದು ಸೇರಿಕೊಂಡ ಹಿನ್ನೆಲೆಯಲ್ಲಿ, ಸೇನಾಪಡೆಯು ಸ್ಥಳದಲ್ಲೇ ಬೀಡುಬಿಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕತ್ತಿ, ಭರ್ಜಿ ಮತ್ತು ತ್ರಿಶೂಲಗಳಂತಹ ಮಾರಕಾಸ್ತ್ರಗಳನ್ನು ಹೊಂದಿರುವ ಶಸ್ತ್ರಸಜ್ಜಿತ ಗುಂಪು ಗುರುದ್ವಾರದೊಳಗೆ ಬೀಡುಬಿಟ್ಟಿದ್ದು, ಪೊಲೀಸ್ ಮತ್ತು ಐಟಿಬಿಪಿ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ ಎಂದು ವರದಿಯಾಗಿದೆ.
ಉದ್ವಿಗ್ನತೆ ಆರಂಭವಾಗಿದ್ದು ಹೇಗೆ?
ಜೂನ್ 20ರಂದು (ಶನಿವಾರ) ಈ ಸಮಸ್ಯೆ ಆರಂಭವಾಯಿತು. ನಿಹಾಂಗ್ಗಳ ಗುಂಪೊಂದು ಗುರುದ್ವಾರಕ್ಕೆ ಬಂದು ಅಲ್ಲಿನ ದೈನಂದಿನ ವ್ಯವಸ್ಥೆ ನೋಡಿಕೊಳ್ಳುವ ಸೇವಾದಾರರೊಂದಿಗೆ (ಸ್ವಯಂಸೇವಕರು) ವಿವಾದಕ್ಕಿಳಿದಿತ್ತು. ಶನಿವಾರ ಮಧ್ಯಾಹ್ನ 3.40ಕ್ಕೆ ಘರ್ಷಣೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಹತ್ತಿರದ ಘೋಲ್ತಿರ್ ಚೌಕಿಯ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 16ರಂದು ಕರ್ಣಪ್ರಯಾಗದಲ್ಲಿ ನಡೆದಿದ್ದ ಘರ್ಷಣೆಯನ್ನು ಪ್ರತಿಭಟಿಸಲು ಮರುದಿನ ದೊಡ್ಡ ಸಭೆಯೊಂದನ್ನು ಆಯೋಜಿಸಲಾಗಿತ್ತು. ಇದಕ್ಕಾಗಿ 50 ರಿಂದ 60 ಕೊಠಡಿಗಳನ್ನು ಕಾಯ್ದಿರಿಸುವಂತೆ ನಿಹಾಂಗ್ಗಳು ಕೇಳಿದ್ದರು. ಗುರುದ್ವಾರದ ಕಡೆಯಿಂದ ಆ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದಾಗ ಇರಡೂ ಕಡೆಯವರ ನಡುವೆ ವಾಗ್ವಾದ ನಡೆಯಿತು. ನಂತರ ಕೆಲವು ನಿಹಾಂಗ್ಗಳು ಮೇಲಿನ ಮಹಡಿಗಳಿಗೆ ತೆರಳಿ, ಚಾವಣಿಗೆ ಹೋಗುವ ದಾರಿಯನ್ನು ಮುಚ್ಚಿದರು ಎಂದು ಗುರುದ್ವಾರದ ವ್ಯವಸ್ಥಾಪಕರು ತಿಳಿಸಿದ್ದಾರೆ.
ಒತ್ತೆಯಾಳಾದ 'ಸಿಖ್' ಭಕ್ತ
ವಯಸ್ಸಾದ ಸಿಖ್ ಭಕ್ತರೊಬ್ಬರನ್ನು ನಿಹಾಂಗ್ಗಳು ಚಾವಣಿಗೆ ಕರೆದೊಯ್ದು ಈ ಉದ್ವಿಗ್ನತೆಯ ಸಮಯದಲ್ಲಿ ಅಲ್ಲಿಯೇ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ರಾತ್ರಿಯಿಡೀ ಚಾವಣಿಯಿಂದ ಘೋಷಣೆಗಳನ್ನು ಕೂಗಲಾಗಿತ್ತು ಎಂದು ವರದಿಯಾಗಿದೆ. ಆ ವ್ಯಕ್ತಿಯ (ಒತ್ತೆಯಾಳು) ಪರಿಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಲ್ಲ. ಇದು ಘಟನೆಯ ಅತ್ಯಂತ ವಿವಾದಾತ್ಮಕ ವಿವರಗಳಲ್ಲಿ ಒಂದಾಗಿದೆ. ಪೊಲೀಸ್ ಹೇಳಿಕೆಗಳಲ್ಲಿ 'ಒತ್ತೆಯಾಳು' ಎಂಬ ಪದವನ್ನು ಬಳಸಲಾಗಿಲ್ಲವಾದರೂ, ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ, ಆ ವೃದ್ಧನನ್ನು ಇಡೀ ಘಟನೆಯುದ್ದಕ್ಕೂ ಆ ಗುಂಪಿನೊಂದಿಗೇ ಇರಿಸಲಾಗಿತ್ತು.
ನಿಹಾಂಗ್ಗಳನ್ನು ಸಂಪರ್ಕಿಸಲು 'ರಿಪಬ್ಲಿಕ್' ಪ್ರಯತ್ನ
ಗುರುದ್ವಾರದ ಒಳಗೆ ಬೀಡುಬಿಟ್ಟಿರುವ ನಿಹಾಂಗ್ (ಅಕಾಲಿ) ಸದಸ್ಯರನ್ನು ಸಂಪರ್ಕಿಸಲು 'ರಿಪಬ್ಲಿಕ್' ಟಿವಿ ಪ್ರಯತ್ನಿಸಿತ್ತು. ಇದೇ ವೇಳೆ ಕರ್ಣಪ್ರಯಾಗ ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾದ ನಾಲ್ಕು ನಿಹಾಂಗ್ಗಳನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆ ಕೇಳಿಬಂತು ಎಂದು ವರದಿಯಾಗಿದೆ.
3 ಸುತ್ತಿನ ಮಾತುಕತೆ ನಡೆಸಿದರೂ ಸಿಗದ ಪರಿಹಾರ
ಶನಿವಾರ ರಾತ್ರಿಯಿಂದ ಭಾನುವಾರದವರೆಗೆ ಜಿಲ್ಲಾಧಿಕಾರಿಗಳು ಮತ್ತು ನಿಹಾಂಗ್ಗಳ ನಡುವೆ ಮೂರು ಸುತ್ತಿನ ಮಾತುಕತೆಗಳು ನಡೆದವು. ಆದರೆ, ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. ಈ ಇಡೀ ಪ್ರಕ್ರಿಯೆಯಲ್ಲಿ ನಿಹಾಂಗ್ಗಳ ಬೇಡಿಕೆ ಮಾತ್ರ ಬದಲಾಗಲಿಲ್ಲ. ಕರ್ಣಪ್ರಯಾಗ ಘಟನೆಯಲ್ಲಿ ಬಂಧಿತರಾಗಿರುವ ತಮ್ಮ ಗುಂಪಿನ ನಾಲ್ವರನ್ನು ಬಿಡುಗಡೆ ಮಾಡಲೇಬೇಕು ಎಂಬ ಒತ್ತಾಯ ಕೇಳಿಬಂತು.
ಪ್ರಸ್ತುತ ಪರಿಸ್ಥಿತಿ ಏನಿದೆ?
ಸೋಮವಾರದ ವೇಳೆಗೆ ಪರಿಸ್ಥಿತಿಯಲ್ಲಿ ಕೆಲವು ಬದಲಾವಣೆಗಳು ಕಂಡುಬಂದಿವೆ. ಆಡಳಿತ ಮಂಡಳಿಯ ಪ್ರಯತ್ನದ ನಂತರ ಈ ಘಟನೆಗೆ ಸಂಬಂಧಿಸಿದ್ದ ಇಬ್ಬರು ವ್ಯಕ್ತಿಗಳನ್ನು ಬಿಡುಗಡೆ ಮಾಡಲಾಯಿತು ಮತ್ತು ಈ ಹಿಂದೆ ಚಾವಣಿ ಏರಿದ್ದ ಸದಸ್ಯರ ಪೈಕೊ ಒಬ್ಬ ನಿಹಾಂಗ್, ಅಧಿಕಾರಿಗಳೊಂದಿಗೆ ನೇರವಾಗಿ ಮಾತನಾಡಲು ಕೆಳಗೆ ಇಳಿದು ಬಂದನು. ಆದರೆ, ಆ ಗುಂಪಿನ ನಾಲ್ಕರಿಂದ ಐದು ಸದಸ್ಯರು ಇನ್ನೂ ಒಳಗೇ ಇದ್ದಾರೆ.
ಜಿಲ್ಲಾಧಿಕಾರಿ ವಿಶಾಲ್ ಮಿಶ್ರಾ ಮತ್ತು ಎಸ್ಪಿ ನಿಹಾರಿಕಾ ತೋಮರ್ ಸ್ಥಳಕ್ಕೆ ಭೇಟಿ ನೀಡಿದ್ದು, ಗುರುದ್ವಾರ ವ್ಯವಸ್ಥಾಪಕ ಸಮಿತಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಗುರುದ್ವಾರದ ಸುತ್ತಲೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಮತ್ತು ಈ ಪರಿಸ್ಥಿತಿಯು ಯಾವುದೇ ಕೋಮು ತಿರುವು ಪಡೆಯಲು ಬಿಡುವುದಿಲ್ಲ ಎಂದು ಆಡಳಿತವು ಸ್ಪಷ್ಟಪಡಿಸಿದೆ.

