'ಸಂವಿಧಾನ ಹತ್ಯಾ ದಿವಸ್' ಅಂಗವಾಗಿ ಗುರುವಾರ ಎಕ್ಸ್ ನಲ್ಲಿ ಸಂದೇಶ ಹಂಚಿಕೊಂಡ ಅವರು, "ಸಂವಿಧಾನ ಹತ್ಯಾ ದಿವಸ್ ಭಾರತೀಯ ಪ್ರಜಾಪ್ರಭುತ್ವವನ್ನು ಕ್ರೂರವಾಗಿ ಹತ್ತಿಕ್ಕಿದ ಆ ಕರಾಳ ಅವಧಿಯನ್ನು ನೆನಪಿಸುತ್ತದೆ. ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ನಾಗರಿಕರ ಹಕ್ಕುಗಳನ್ನು ರಕ್ಷಿಸಲು ನಾವು ಸದಾ ಬದ್ಧರಾಗಿರಬೇಕೆಂಬ ಸಂದೇಶವನ್ನು ಈ ದಿನ ನೀಡುತ್ತದೆ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಎಲ್ಲ ಗಣ್ಯರಿಗೆ ನನ್ನ ಗೌರವಪೂರ್ವಕ ನಮನಗಳು" ಎಂದು ತಿಳಿಸಿದ್ದಾರೆ.
"ತುರ್ತು ಪರಿಸ್ಥಿತಿಯು ನಮ್ಮ ಸಂವಿಧಾನದ ಮೇಲಿನ ನೇರ ದಾಳಿಯಾಗಿತ್ತು. ಈ ಅವಧಿಯಲ್ಲಿ ನಾಗರಿಕ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಲಾಯಿತು. ರಾಜಕೀಯ ನಾಯಕರು, ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಯಿತು. ನಮ್ಮ ಪ್ರಜಾಪ್ರಭುತ್ವದ ತಳಹದಿಯಾಗಿರುವ ಸಂಸ್ಥೆಗಳ ಮೇಲೂ ದಾಳಿ ನಡೆಯಿತು" ಎಂದು ಅವರು ಹೇಳಿದ್ದಾರೆ.
"ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವ ನಮ್ಮ ಸಾಮೂಹಿಕ ಬದ್ಧತೆಯನ್ನು ಪುನರುಚ್ಚರಿಸೋಣ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಮೌಲ್ಯಗಳಿಗೆ ಬದ್ಧವಾಗಿರುವ ಭಾರತವನ್ನು ನಿರ್ಮಿಸೋಣ" ಎಂದೂ ಅವರು ಕರೆ ನೀಡಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2025ರಿಂದ ಜೂನ್ 25ನ್ನು 'ಸಂವಿಧಾನ ಹತ್ಯಾ ದಿವಸ್'ವಾಗಿ ಆಚರಿಸುತ್ತಿದೆ. ಈ ಸಂಬಂಧ ಹೊರಡಿಸಿರುವ ಗೆಜೆಟ್ ಅಧಿಸೂಚನೆಯಲ್ಲಿ, ತುರ್ತು ಪರಿಸ್ಥಿತಿಯ ವೇಳೆ ಅಂದಿನ ಸರ್ಕಾರವು ಅಧಿಕಾರವನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಂಡಿದ್ದು, ದೇಶದ ಜನರು ತೀವ್ರ ದಬ್ಬಾಳಿಕೆ ಮತ್ತು ದೌರ್ಜನ್ಯಕ್ಕೆ ಒಳಗಾಗಿದ್ದರು ಎಂದು ಉಲ್ಲೇಖಿಸಲಾಗಿದೆ.
1975ರ ಜೂನ್ 25ರಂದು ಘೋಷಿಸಲಾದ ತುರ್ತು ಪರಿಸ್ಥಿತಿಯು ಭಾರತೀಯ ಸಾಂವಿಧಾನಿಕ ಇತಿಹಾಸದಲ್ಲಿ ಮಹತ್ವದ ತಿರುವು ನೀಡಿತ್ತು. ಇದರೊಂದಿಗೆ ಕಾರ್ಯಾಂಗಕ್ಕೆ ವ್ಯಾಪಕ ಅಧಿಕಾರ ದೊರೆತರೆ, ರಾಜ್ಯಗಳ ಅಧಿಕಾರವು ಕೇಂದ್ರದ ನಿಯಂತ್ರಣಕ್ಕೆ ಒಳಪಟ್ಟಿತು. ತುರ್ತು ಪರಿಸ್ಥಿತಿ ಘೋಷಣೆಯಾದ ಬೆನ್ನಲ್ಲೇ ಸಾಂವಿಧಾನಿಕ ರಕ್ಷಣೆಗಳನ್ನು ವ್ಯವಸ್ಥಿತವಾಗಿ ಅಮಾನತುಗೊಳಿಸಲಾಯಿತು. ಸಾಂಸ್ಥಿಕ ಕಾರ್ಯವಿಧಾನಗಳು ಮತ್ತು ಆಡಳಿತಾತ್ಮಕ ಆದೇಶಗಳ ಮೂಲಕ ಪತ್ರಿಕಾ ಮಾಧ್ಯಮ ಹಾಗೂ ಸಾರ್ವಜನಿಕ ಮಾಹಿತಿಯ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಯಿತು. ಈ ಅವಧಿಯು 1977ರ ಮಾರ್ಚ್ 21ರವರೆಗೆ ಮುಂದುವರಿಯಿತು.
ಈ ಅವಧಿಯಲ್ಲಿ ಸಂಸತ್ತು ಸರಣಿ ಸಂವಿಧಾನ ತಿದ್ದುಪಡಿಗಳನ್ನು ಅಂಗೀಕರಿಸಿತು. ಇದರಿಂದ ನ್ಯಾಯಾಂಗದ ಪರಿಶೀಲನಾ ಅಧಿಕಾರ ಹಾಗೂ ಸಾಂಸ್ಥಿಕ ನಿಯಂತ್ರಣಗಳು ದುರ್ಬಲಗೊಂಡವು. ಬಲವಂತದ ಸಂತಾನಹರಣ ಅಭಿಯಾನವು ತುರ್ತು ಪರಿಸ್ಥಿತಿಯ ಅತ್ಯಂತ ವಿವಾದಾತ್ಮಕ ಕ್ರಮಗಳಲ್ಲಿ ಒಂದಾಗಿತ್ತು.
9ನೇ ತರಗತಿ ಪಠ್ಯದಲ್ಲಿ ಮೊದಲ ಬಾರಿಗೆ ಸೇರ್ಪಡೆ
ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿ ಸುಮಾರು ಐದು ದಶಕಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಮೊದಲ ಬಾರಿಗೆ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಈ ವಿಷಯವನ್ನು ಸೇರಿಸಿದೆ.
ಹೊಸದಾಗಿ ಪರಿಚಯಿಸಲಾದ 'ಅಂಡರ್ಸ್ಟ್ಯಾಂಡಿಂಗ್ ಸೊಸೈಟಿ: ಇಂಡಿಯಾ ಅಂಡ್ ಬಿಯಾಂಡ್' ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿಯನ್ನು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಎದುರಿಸಿದ ಪ್ರಮುಖ ಸವಾಲುಗಳಲ್ಲಿ ಒಂದಾಗಿ ಬಿಂಬಿಸಲಾಗಿದೆ.
ದೇಶದಲ್ಲಿ ಪ್ರಜಾಪ್ರಭುತ್ವದ ಸಾಧನೆಗಳು ಹಾಗೂ ಸವಾಲುಗಳನ್ನು ವಿಶ್ಲೇಷಿಸುವ ಅಧ್ಯಾಯದಲ್ಲಿ ಈ ವಿಷಯವನ್ನು ಸೇರಿಸಲಾಗಿದೆ. ಎನ್ಸಿಇಆರ್ಟಿ ಅಧಿಕಾರಿಗಳ ಪ್ರಕಾರ, 9ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ತುರ್ತು ಪರಿಸ್ಥಿತಿಗೆ ಸ್ಥಾನ ನೀಡಿರುವುದು ಇದೇ ಮೊದಲ ಬಾರಿಯಾಗಿದೆ.
1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ವಿಷಯವನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಅಧ್ಯಾಯದಲ್ಲಿ ತುರ್ತು ಪರಿಸ್ಥಿತಿಗೆ ಮುನ್ನದ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಗಳು, ಅದರ ಘೋಷಣೆಗೆ ಕಾರಣವಾದ ಪರಿಸ್ಥಿತಿಗಳು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳು ಹಾಗೂ ನಾಗರಿಕ ಹಕ್ಕುಗಳ ಮೇಲೆ ಬೀರಿದ ಪರಿಣಾಮಗಳನ್ನು ವಿವರಿಸಲಾಗಿದೆ.

