ಕಾಸರಗೋಡು: ಜಿಲ್ಲೆಯಲ್ಲಿ ಮಳೆ ಮತ್ತಷ್ಟು ಚುರುಕುಗೊಂಡಿದ್ದು, ಜಿಲ್ಲೆಯ ನಾನಾಕಡೆ ವ್ಯಾಫಕ ಹಾನಿಯುಂಟಾಗಿದೆ. ತೀವ್ರ ಮಳೆ ಹಿನ್ನೆಲೆಯಲ್ಲಿ ಕಾಸರಗೋಡು-ಕಾಞಂಗಾಡ್ ಕೆಎಸ್ಟಿಪಿ ರಸ್ತೆಯಲ್ಲಿ ಭಾರೀ ಭೂಕುಸಿತವುಂಟಾಗಿದ್ದು, ಚಂದ್ರಗಿರಿ, ಚಳಿಯಂಗೋಡು, ಕೋಟರುವತ್ ಪ್ರದೇಶದಲ್ಲಿ ರಸ್ತೆಗೆ ಮಣ್ಣು ಬಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.
ಕೆಎಸ್ಟಿಪಿ ರಸ್ತೆಯ ಈ ಪ್ರದೇಶದಲ್ಲಿ ಗುಡ್ಡದಿಂದ ಮಣ್ಣು ಕುಸಿಯುವುದನ್ನು ತಡೆಗಟ್ಟಲು ನಿರ್ಮಿಸಿದ್ದ ಕಾಂಕ್ರೀಟ್ ತಡೆಗೋಡೆಯ ಮೇಲ್ಭಾಗದಿಂದ ಮಣ್ಣು ಹಾಗೂ ಬಂಡೆಕಲ್ಲುಗಳು ರಸ್ತೆಗೆ ಕುಸಿದು ಬಿದ್ದಿವೆ. ಬೃಹತ್ ಗಾತ್ರದ ಬಂಡೆಕಲ್ಲು ರಸ್ತೆಗೆ ಬಿದ್ದ ಪರಿಣಾಮ ಈ ದಾರಿಯಾಗಿ ಸಾಗುತ್ತಿದ್ದ ಕೆಲವೊಂದು ಕಾರುಗಳು ಜಖಂಗೊಂಡಿದೆ. ಮೇಲಿಂದ ಬೃಹತ್ ಕಲ್ಲು ಕಾರಿನ ಮುಂಭಾಗಕ್ಕೆ ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಭಾರೀ ಭೂಕುಸಿತದಿಂದ ಪ್ರಸಕ್ತ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು. ಸ್ಥಳಕ್ಕೆ ಪೆÇಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಜೆಸಿಬಿ ಉಪಯೋಗಿಸಿ ಮಣ್ಣು, ಕಲ್ಲನ್ನು ತೆರವುಗೊಳಿಸಿದರು. ತಾಸುಗಳ ನಂತರ ಈ ಹಾದಿಯಾಗಿ ವಾಹನ ಸಂಚಾರ ಪುನರಾರಂಭಿಸಲಾಗಿದೆ.
ಕೀಯೂರಿನಲ್ಲಿ ಮನೆಗೆ ಹಾನಿ:
ಅತಿಯಾದ ಮಳೆಗೆ ಚಂದ್ರಗಿರಿ ಸನಿಹದ ಕೀಯೂರಿನಲ್ಲಿ ಹೆಂಚುಹಾಸಿನ ಮನೆಯೊಂದು ಸೋಮವಾರ ನಸುಕಿಗೆ ಕುಸಿದು ಬಿದ್ದು ಭಾರೀ ಹಾನಿ ಸಂಭವಿಸಿದೆ. ಮನೆಯೊಳಗಿದ್ದ ರೋಗಿ ಸೇರಿದಂತೆ ಐದು ಮಂದಿ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಕೀಯೂರು ಶ್ರೀ ಸುಬ್ರಹ್ಮಣ್ಯ ಮಠದ ಸನಿಹದ ಕುಞÂಕೃಷ್ಣನ್ ಅವರ ಮನೆ ಕುಸಿದು ಬಿದ್ದಿದೆ. ಇವರ ಸಹೋದರ ಶಾಜಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಮನೆ ಕುಸಿದುಬೀಳುತ್ತಿದ್ದಂತೆ ಇವರನ್ನು ಸ್ಥಳಾಂತರಿಸಲಾಗಿದೆ. ಕುಞÂಕೃಷ್ಣನ್ ಅವರ ಪತ್ನಿ ಶಾರಿಕಾ, ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿಯುತ್ತಿದ್ದು, ತಗ್ಗು ಪ್ರದೇಶದಲ್ಲಿ ಮಳೆನೀರು ತುಂಬಿಕೊಂಡು ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲೆಯ ಹೊಳೆಗಳು ತುಂಬಿ ಹರಿಯಲಾರಂಭಿಸಿದೆ. ಬಿರುಸಿನ ಮಳೆ ಹಿನ್ನೆಲೆಯಲ್ಲಿ ಬುಧವಾರ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಮಳೆ ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಜುಲೈ 4ರ ವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಕೇಂದ್ರ ಹವಾಮಾನ ಇಲಾಖೆ ಸೂಚಿಸಿದೆ. ಜುಲೈ 2ರಂದು ಕಾಸರಗೋಡು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.


