ಕುಂಬಳೆ: ಮೊಗ್ರಾಲ್ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಭಾರೀ ಆರ್ಥಿಕ ವಂಚನೆ ನಡೆಸಿದ ಪ್ರಭಾರ ಪ್ರಾಂಶುಪಾಲರಾಗಿದ್ದ ಅನಿಲ್ ಕೆ. ಎಂಬ ಅಧ್ಯಾಪಕನನ್ನು ಅಮಾನತುಗೊಳಿಸಲಾಗಿದೆ. ಶಾಲಾ ಪಿಟಿಎ, ಮೊಗ್ರಾಲ್ ದೇಶೀಯವೇದಿ ಹಾಗೂ ಪ್ರೆಂಡ್ಸ್ ಕ್ಲಬ್ ಸಂಘಟನೆಗಳು ನಿರಂತರವಾಗಿ ಈ ವಿಷಯಕ್ಕೆ ಸಂಬಂಧಿಸಿ ಸಂಬಂಧಪಟ್ಟವರಿಗೆ ದೂರು ಹಾಗೂ ಮನವಿಗಳನ್ನು ಸಲ್ಲಿಸಿದ್ದವು. ಜವಾಬ್ದಾರಿಯುತ ಸರ್ಕಾರಿ ಉದ್ಯೋಗಿಯೆಂಬ ನೆಲೆಯಲ್ಲಿ ಮಾದರಿಯುತವಾಗಿ ಕಾರ್ಯವೆಸಗಬೇಕಾದ ಅಧ್ಯಾಪಕನ ಭಾಗದಿಂದ ಉಂಟಾದ ಚಟುವಟಿಕೆಗಳು ಗಂಭೀರ ಆರ್ಥಿಕ ಅವ್ಯವಹಾರ, ಶಿಸ್ತು ಉಲ್ಲಂಘನೆಯಾಗಿದೆಯೆಂದು ಸರ್ಕಾರಕ್ಕೆ ಮನವರಿಕೆಯಾದ ಹಿನ್ನೆಲೆಯಲ್ಲಿ ಅಧ್ಯಾಪಕನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಇದರಂಗವಾಗಿ ಅಮಾನತುಗೊಳಿಸಿರುವುದಾಗಿ ಹೈಯರ್ ಸೆಕೆಂಡರಿ ವಿಭಾಗ ಡೆಪ್ಯುಟಿ ಸೆಕ್ರೆಟರಿ ಬಿಂದು ಆರ್.ಆರ್ ತಿಳಿಸಿದ್ದಾರೆ.
ಆರೋಪ ವಿಧೇಯನಾದ ಅಧ್ಯಾಪಕ ಗಂಭೀರ ಹಣಕಾಸು ವಂಚನೆ ನಡೆಸಿರುವುದಾಗಿ ಹೈಯರ್ ಸೆಕೆಂಡರಿ ವಿಭಾಗದ ಸೀನಿಯರ್ ಫಿನಾನ್ಶಿಯಲ್ ಆಫೀಸರ್ ಕಳೆದ ವರ್ಷ ನಡೆಸಿದ ಪರಿಶೀಲನೆಯಲ್ಲಿ ಪತ್ತೆಹಚ್ಚಿದ್ದರು. ಶಾಲೆಯ ಖಾತೆಯಿಂದ 34,69,100 ರೂಪಾಯಿಗಳಿಂದ, ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಿರ್ಮಾಣಕ್ಕಾಗಿ ಸಮಗ್ರ ಶಿಕ್ಷಾ ಅಭಿಯಾನ್ ಮಂಜೂರು ಮಾಡಿದ 21,50,000 ರೂಪಾಯಿಯಿಂದ, ತರಗತಿ ಕೊಠಡಿ ನವೀಕರಣಕ್ಕಾಗಿ ಬಿಆರ್ಸಿಯಿಂದ ಲಭಿಸಿದ 12 ಲಕ್ಷ ರೂಪಾಯಿಯಿಂದ ಸೇರಿ ಒಟ್ಟು 33,59,600 ರೂಪಾಯಿಗಳನ್ನು 03.04.2024ರಿಂದ 21.02.2025ರ ವರೆಗಿನ ಕಾಲಾವಧಿಯಲ್ಲಿ ಹಿಂತೆಗೆದುಕೊಂಡಿರುವುದಾಗಿಯೂ ಇದರಲ್ಲಿ 33,50,000 ರೂಪಾಯಿ ವೈಯಕ್ತಿಕ ಅಗತ್ಯಗಳಿಗಾಗಿ ಹಿಂತೆಗೆದುಕೊಂಡಿರುವುದಾಗಿ ಲಿಖಿತವಾಗಿ ಅನಿಲ್ ಒಪ್ಪಿಕೊಂಡಿರುವುದಾಗಿಯೂ, 2025 ಎಪ್ರಿಲ್, ಮೇ ತಿಂಗಳುಗಳಲ್ಲಿ ಕೆಲಸಕ್ಕೆ ಹಾಜರಾಗದೆ ಆ ಸಮಯಗಳಲ್ಲಿ ರಜೆಗೆ ಅರ್ಜಿ ಸಲ್ಲಿಸದೆ ಎರಡು ತಿಂಗಳ ವೇತನವನ್ನು ಅನಧಿಕೃತವಾಗಿ ಪಡೆದುಕೊಂಡಿರುವುದಾಗಿಯೂ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ ಯೆಂದು ಸಾರ್ವಜನಿಕ ಶಿಕ್ಷಣ ಹೈಯರ್ ಸೆಕೆಂಡರಿ ವಿಭಾಗದ ಡೈರೆಕ್ಟರ್ ಈ ಮೊದಲು ವರದಿ ಮಾಡಿದ್ದರು. ಮೊಗ್ರಾಲ್ ದೇಶೀಯವೇದಿ ಮಾಜಿ ಮುಖ್ಯಮಂತ್ರಿ, ಕಣ್ಣೂರು ಹೈಯರ್ ಸೆಕೆಂಡರಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ವಲಯ ಉಪ ಮುಖ್ಯಸ್ಥ, ಮೊಗ್ರಾಲ್ ಫ್ರೆಂಡ್ಸ್ ಕ್ಲಬ್ ಕಳೆದ ವಾರ ಜಿಲ್ಲೆಯ ಹೊಣೆಗಾರಿಕೆಯುಳ್ಳ ಸಚಿವ ಕೆ.ಎಂ. ಶಾಜಿಯವರಿಗೆ ಮನವಿ ಸಲ್ಲಿಸಿತ್ತು. ವಂಚನೆಗೆ ಸಂಬಂಧಿಸಿ ಅಧ್ಯಾಪಕನ ವಿರುದ್ಧ ಕೈಗೊಂಡ ಕ್ರಮವನ್ನು ಪಿಟಿಎ ಕಮಿಟಿ, ಮೊಗ್ರಾಲ್ ದೇಶೀಯವೇದಿ, ಮೊಗ್ರಾಲ್ ಪ್ರೆಂಡ್ಸ್ ಕ್ಲಬ್ ಅಭಿನಂದಿಸಿದೆ.

