ನವದೆಹಲಿ: ಅರಬ್ಬಿ ಸಮುದ್ರದ ಗಲ್ಫ್ ಆಫ್ ಅದೆನ್ ಬಳಿ ಭಾರತದ ಕಡೆಗೆ ಬರುತ್ತಿದ್ದ ಸರಕು ಸಾಗಣೆ ಹಡಗಿನ ಮೇಲೆ ಕಡಲ್ಗಳ್ಳರ ದಾಳಿಯನ್ನು ವಿಫಲಗೊಳಿಸುವಲ್ಲಿ ಭಾರತದ ನೌಕಾಪಡೆಯ ಯುದ್ಧ ನೌಕೆ ಐಎನ್ಎಸ್ ತ್ರಿಕಂಡ್ ಯಶಸ್ವಿಯಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಕಡಲ್ಗಳ್ಳರು ದಾಳಿ ಮಾಡಿದ್ದ ಎಂ.ವಿ. ಗೋಲ್ಡನ್ ಅರ್ಸನಲ್ ಹಡಗಿಗೆ ಪ್ರವೇಶಿಸಿದ್ದ ಭಾರತೀಯ ನೌಕಾಪಡೆಯ ಸಾಗರ ಕಮಾಂಡೊಗಳು(ಎಂಎಆರ್ಸಿಒಎಸ್) ರಕ್ಷಣೆ ನೀಡಿದ್ದಾರೆ. ಈ ಹಡಗಿನಲ್ಲಿ ಭಾರತ ಮೂಲದ ಏಕೈಕ ಸಿಬ್ಬಂದಿ ಇದ್ದರು.
ಹಡಗು ಭಾರತಕ್ಕೆ ನಿರ್ಣಾಯಕ ಸರಕನ್ನು ಸಾಗಣೆ ಮಾಡುತ್ತಿತ್ತು. ಕಡಲ್ಗಳ್ಳರ ದಾಳಿಯಾಗುತ್ತಿದ್ದಂತೆ ಹಡಗಿನ ಸಿಬ್ಬಂದಿ ತಮ್ಮನ್ನು ತಾವು ಸುರಕ್ಷತಾ ಕೊಠಡಿಯಲ್ಲಿ ಲಾಕ್ ಮಾಡಿಕೊಂಡು ಬಳಿಕ ದಾಳಿ ಕುರಿತಂತೆ ನೌಕಾದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಹಡಗಿನ ಸಮೀಪಕ್ಕೆ ಭಾರತದ ಯುದ್ಧ ನೌಕೆ ತೆರಳುತ್ತಿದ್ದಂತೆ ಕಡಲ್ಗಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಂತರ, ಹಡಗು ಅಪಾಯಮುಕ್ತವಾಗಿದೆ ಎಂದು ಘೋಷಿಸಲಾಯಿತು.
ಕಡಲ್ಗಳ್ಳರ ದಾಳಿಯಲ್ಲಿ ಹಡಗಿನ ಸಿಬ್ಬಂದಿ ಮತ್ತು ಹಡಗಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿ ತಿಳಿಸಿದೆ.

