ಪಟ್ನಾ: ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಐತಿಹಾಸಿಕ ಗೆಲುವು ಸಾಧಿಸಿದ್ದು, ಪಕ್ಷಕ್ಕೆ ಮೊದಲ ಚುನಾವಣಾ ಗೆಲುವು ತಂದುಕೊಟ್ಟಿದ್ದಾರೆ.
ಬಿಜೆಪಿ ಅಭ್ಯರ್ಥಿ ನೀರಜ್ ಕುಮಾರ್ ಸಿನ್ಹಾ ಅವರನ್ನು 18,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿರುವ ಅವರು, ಕ್ಷೇತ್ರದಲ್ಲಿ ಬಿಜೆಪಿಯ 35 ವರ್ಷಗಳ ನಿರಂತರ ಪ್ರಾಬಲ್ಯಕ್ಕೂ ತೆರೆ ಎಳೆದಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಈ ಫಲಿತಾಂಶವು ಬಿಹಾರದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
ಸೋಮವಾರ ಪ್ರಕಟವಾದ ಅಧಿಕೃತ ಫಲಿತಾಂಶದ ಪ್ರಕಾರ, ಪ್ರಶಾಂತ್ ಕಿಶೋರ್ 63,946 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ನೀರಜ್ ಕುಮಾರ್ ಸಿನ್ಹಾ 44,700 ಮತಗಳನ್ನು ಗಳಿಸಿದರು. ಆರ್ಜೆಡಿ ಅಭ್ಯರ್ಥಿ ರೇಖಾ ಗುಪ್ತಾ 14,241 ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು.
ಬಂಕಿಪುರವು ಬಿಜೆಪಿಯ ಭದ್ರಕೋಟೆಗಳಲ್ಲಿ ಒಂದಾಗಿದ್ದು, ಕಳೆದ 35 ವರ್ಷಗಳಿಂದ ಪಕ್ಷವು ಈ ಕ್ಷೇತ್ರವನ್ನು ತನ್ನ ಹಿಡಿತದಲ್ಲಿ ಉಳಿಸಿಕೊಂಡಿತ್ತು. ಆದರೆ ಈ ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಆ ಪ್ರಾಬಲ್ಯವನ್ನು ಮುರಿಯುವಲ್ಲಿ ಯಶಸ್ವಿಯಾದರು. ಜನ್ ಸುರಾಜ್ ಪಕ್ಷಕ್ಕೆ ಇದು ಮೊದಲ ಚುನಾವಣಾ ಗೆಲುವಾಗಿರುವುದು ವಿಶೇಷ.
ಗೆಲುವು ಬಹುತೇಕ ಖಚಿತವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್, ಬಂಕಿಪುರದ ಮತದಾರರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.
'ಈ ವಿಜಯದ ನಂತರ ನಮ್ಮ ಮೊದಲ ಆದ್ಯತೆಯೆಂದರೆ ಬಂಕಿಪುರದ ಜನರು ನಮ್ಮ ಮೇಲೆ ಇಟ್ಟಿರುವ ಆಶೀರ್ವಾದ ಮತ್ತು ನಂಬಿಕೆಯನ್ನು ಗೌರವಿಸುವುದು. ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಮುಂದಿನ ಎರಡರಿಂದ ಮೂರು ತಿಂಗಳೊಳಗೆ ಜನರು ಆ ಬದಲಾವಣೆಗಳನ್ನು ಕಾಣಲಿದ್ದಾರೆ' ಎಂದು ಅವರು ಹೇಳಿದರು.
'ಈ ವಿಜಯದ ನಂತರ ನಮ್ಮ ಮೊದಲ ಆದ್ಯತೆಯೆಂದರೆ ಬಂಕಿಪುರದ ಜನರು ನಮ್ಮ ಮೇಲೆ ಇಟ್ಟಿರುವ ಆಶೀರ್ವಾದ ಮತ್ತು ನಂಬಿಕೆಯನ್ನು ಗೌರವಿಸುವುದು. ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಮುಂದಿನ ಎರಡರಿಂದ ಮೂರು ತಿಂಗಳೊಳಗೆ ಜನರು ಆ ಬದಲಾವಣೆಗಳನ್ನು ಕಾಣಲಿದ್ದಾರೆ' ಎಂದು ಅವರು ಹೇಳಿದರು.
ಈ ಫಲಿತಾಂಶವು ಜನ್ ಸುರಾಜ್ ಪಕ್ಷಕ್ಕೆ ರಾಜಕೀಯವಾಗಿ ಹೊಸ ಮೈಲಿಗಲ್ಲಾಗಿದ್ದು, ಪ್ರಶಾಂತ್ ಕಿಶೋರ್ ಅವರ ನಾಯಕತ್ವಕ್ಕೂ ದೊಡ್ಡ ಉತ್ತೇಜನ ನೀಡಿದೆ. ಇದೇ ವೇಳೆ, ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ತನ್ನ ಭದ್ರಕೋಟೆಯಲ್ಲೇ ಎದುರಾದ ಈ ಸೋಲು ರಾಜಕೀಯವಾಗಿ ಮಹತ್ವದ ಹಿನ್ನಡೆಯಾಗಿ ವಿಶ್ಲೇಷಿಸಲಾಗುತ್ತಿದೆ.

