ತಿರುವನಂತಪುರಂ: ಕೇರಳಂನ ಶಾಲೆಗಳಲ್ಲಿ ಆಯೋಜಿಸಿದ್ದ ರಸಪ್ರಶ್ನೆಯಲ್ಲಿ ಹಿಂದುತ್ವವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ವಿವರಿಸಿದ್ದ ಪ್ರಶ್ನೆಗೆ ಸಂಬಂಧಿಸಿದಂತೆ, ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ.
ಪ್ರಶ್ನಾವಳಿಯನ್ನು ಸಿದ್ಧಪಡಿಸಿದ್ದ ಕಾಸರಗೋಡು ಜಿಲ್ಲೆಯ ಕುಂಬಳೆ ವಿಭಾಗದ ಪಳ್ಳತ್ತಡ್ಕದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗುರುಪ್ರಸಾದ್ ಅವರು ಅಮಾನತಾದವರು.
'ಗುರು ಪ್ರಸಾದ್ ಅವರ ನೇತೃತ್ವದ ತಂಡವು ಪ್ರಶ್ನಾವಳಿಯನ್ನು ಸಿದ್ಧಪಡಿಸಿತ್ತು. ಶಿಕ್ಷಣ ಇಲಾಖೆಯ ಕಾಸರಗೋಡು ಜಿಲ್ಲೆಯ ಉಪ ನಿರ್ದೇಶಕರ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಇಲಾಖಾ ತನಿಖೆಗೂ ನಿರ್ದೇಶಿಸಿದ್ದು, ಕ್ರಮ ತೆಗೆದುಕೊಂಡ ಬಗ್ಗೆ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಸ್ನೇಹಿಲ್ಕುಮಾರ್ ಸಿಂಗ್ ಅವರು ಭಾನುವಾರ ತಿಳಿಸಿದ್ದಾರೆ.
ಪ್ರಕರಣ ಏನು?: ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕುಂಬಳದ ಶಾಲೆಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶಿಕ್ಷಣ ಇಲಾಖೆಯು ರಸಪ್ರಶ್ನೆ ಏರ್ಪಡಿಸಿತ್ತು. ಅದರಲ್ಲಿ, 'ಬ್ರಿಟಿಷರಿಂದ ಅತ್ಯಂತ ಕಠಿಣ ಶಿಕ್ಷೆಗೊಳಗಾದ ಸ್ವಾತಂತ್ರ್ಯ ಹೋರಾಟಗಾರ ಯಾರು' ಎಂಬ ಪ್ರಶ್ನೆಗೆ, 'ವಿ.ಡಿ.ಸಾವರ್ಕರ್' ಎಂಬ ಉತ್ತರ ಸರಿ ಎಂದು ತಿಳಿಸಲಾಗಿತ್ತು.
'ಹಿಂದುತ್ವವಾದಿ ಸಿದ್ಧಾಂತದ ಪ್ರತಿಪಾದಕ, ಮಹಾತ್ಮ ಗಾಂಧಿ ಹತ್ಯೆಯ ಪಿತೂರಿಯಲ್ಲಿ ಭಾಗಿಯಾಗಿದ್ದ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಬಿಂಬಿಸಲಾಗಿದೆ' ಎಂದು ಎಡಪಕ್ಷ ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಪ್ರತಿಭಟನೆಗೂ ಕಾರಣವಾಗಿತ್ತು.

